ಅಮೃತಸಂಜೀವಿನಿ, ಜ್ಞಾನ ಸಂಜೀವಿನಿ ವತಿಯಿಂದ ‘ಯೋಧ ರತ್ನ’ ಬಿರುದು ಪ್ರದಾನ 

Spread the love

ಅಮೃತಸಂಜೀವಿನಿ, ಜ್ಞಾನ ಸಂಜೀವಿನಿ ವತಿಯಿಂದ ‘ಯೋಧ ರತ್ನ’ ಬಿರುದು ಪ್ರದಾನ 

ಮಂಗಳೂರು: ಅಮೃತಸಂಜೀವಿನಿ (ರಿ‌.) ಮಂಗಳೂರು ಮತ್ತು ಜ್ಞಾನ ಸಂಜೀವಿನಿ ವತಿಯಿಂದ ಯೋಧರಿಗೆ “ಯೋಧ ರತ್ನ” ಬಿರುದು ಪ್ರದಾನ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರು ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸೇವಾ ಅವಧಿಯಲ್ಲಿ ನಿಧನರಾದ ಲಾನ್ಸ್ ನಾಯಕ್ ಶಿವರಾಮ ಕೆ ಪಿ, ಸುಬೆದಾರ್ ಗೋಪಾಲಕೃಷ್ಣ ಗೌಡ, ಹವಲ್ದಾರ್ ಗಿರೀಶ ಇವರಿಗೆ ಮರಣೋತ್ತರವಾಗಿ ಯೋಧ ರತ್ನ ಬಿರುದನ್ನು ನೀಡಿ ಗೌರವಿಸಲಾಯಿತು ಮತ್ತು ಸೇವಾ ಅವಧಿಯಲ್ಲಿ ಗಾಯಾಳುಗಳಾಗಿ ನಿವೃತ್ತರಾದ ಚಂದಪ್ಪ ಡಿ.ಎಸ್, ಬಾಲಕೃಷ್ಣ ಭಂಡಾರಿ ಎಲ್ಲೂರು ಹಾಗೂ ಅಸೌಖ್ಯರಾಗಿ ನಿವೃತ್ತರಾದ  ಉಮೇಶ್ ಮಾಲಾಡಿ ಅವರನ್ನು ಯೋಧ ರತ್ನ ಬಿರುದು ನೀಡಿ ಗೌರವಿಸಲಾಯಿತು.

ಶ್ರೀ ದೇವಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ‌. ದಿಲೀಪ್ ಕುಮಾರ್ ಅವರು ಸ್ವಾಗತ ಭಾಷಣ ಮಾಡಿದರು, ಮುಖ್ಯ ಅತಿಥಿಗಳಾದ ಕರ್ನಲ್ ಎ.ಕೆ ಜಯಚ್ಂದ್ರನ್ ಅವರು ಮಾತನಾಡಿ ನೆರೆದ ವಿದ್ಯಾರ್ಥಿಗಳಿಗೆ ಯೋಧರ ಬದುಕಿನ ಬಗ್ಗೆ ಹಾಗೂ ಸೇನೆಗೆ ಸೇರಲು ಇರುವ ಮಾರ್ಗಗಳ ಬಗ್ಗೆ ಮಾಹಿತಿಯನ್ನು ನೀಡಿದರು, ಗೌರವ ಅಥಿತಿಗಳಾದ ಶ್ರೀ ಗಣೇಶ್ ಕುಲಾಲ್ ಅವರು ಮಾತನಾಡಿ ದೆಹಲಿಯ ಘಟನೆಯನ್ನು ಉಲ್ಲೇಖಿಸುತ್ತಾ ಇಂತಹ ಕಾರ್ಯಕ್ರಮಗಳು ಪ್ರತಿ ಕಾಲೇಜಿನಲ್ಲಿ ಆದರೆ ಮುಂದಕ್ಕೆ ಯೋಧರ ಮೇಲೆ ಕಲ್ಲು ಹಾಗು ಯಾಸಿಡ್ ದಾಳಿ ಮಾಡುವಂತಹ ಮನಸ್ಥಿತಿ ಹುಟ್ಟುವುದಿಲ್ಲ ಎಂದು ಹೇಳಿದರು, ಗೌರವ ಅತಿಥಿಗಳಾಗಿ ಆಶಿಶ್ ಶೆಟ್ಟಿ ಹಾಗೂ ಅತಿಥಿಗಳಾಗಿ ಕಾಲೇಜಿನ ನಿರ್ದೇಶಕರಾದ ಡಾ.ಕೆ.ಇ ಪ್ರಕಾಶ್ ಮತ್ತು ಜ್ಞಾನ ಸಂಜೀವಿನಿಯ ದೀಕ್ಷಿತ್ ಕುಲಾಲ್ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಮಿ‌ ವಿವೇಕಾನಂದರ ಪುಸ್ತಕವನ್ನು ನೀಡಿ ಸ್ವಾಗತಿಸಲಾಯಿತು, ಕುಮಾರಿ ಲಿಯಾನ ಮತ್ತು ಮೇಘ ಸಾಲ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸಾಕ್ಷಾತ್ ಶೆಟ್ಟಿ ವಂದನೆ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಡಾ.ವಿಜಯ ಆಳ್ವ, ಅಮೃತಸಂಜೀವಿನಿಯ ಪ್ರಮುಖರಾದ ಸುಶಾಂತ್ ಅಮಿನ್ ಮತ್ತು ಜ್ಞಾನ ಸಂಜೀವಿನಿಯ ಕೀರ್ತನ್ ದಾಸ್, ಅಮೃತಸಂಜೀವಿನಿ ಮತ್ತು ಜ್ಞಾನ ಸಂಜೀವಿನಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love