ಕಿನ್ನಿಗೋಳಿ : 33ನೇ ಬಾರಿ ರಕ್ತದಾನ ಮಾಡಿದ ಪತ್ರಕರ್ತ ನರೇಂದ್ರ ಕೆರೆಕಾಡು

Spread the love

ಕಿನ್ನಿಗೋಳಿ : 33ನೇ ಬಾರಿ ರಕ್ತದಾನ ಮಾಡಿದ ಪತ್ರಕರ್ತ ನರೇಂದ್ರ ಕೆರೆಕಾಡು

ಮಂಗಳೂರು: ಪತ್ರಕರ್ತರಾದವರು ಸಾಮಾಜಿಕ ಜವಬ್ದಾರಿಯನ್ನು ಹೊಂದಿರುತ್ತಾರೆ ಎಂಬ ಮಾತಿಗೆ ತಕ್ಕಂತೆ ನಡೆದ ಮೂಲ್ಕಿಯ ಪತ್ರಕರ್ತರೋರ್ವರು ಇತರರಿಗೆ ಮಾದರಿಯಾದ ಘಟನೆ ನಡೆದಿದೆ.

ವೃತ್ತಿಯಲ್ಲಿ ಪತ್ರಕರ್ತರಾಗಿದ್ದು ಪ್ರವೃತ್ತಿಯಲ್ಲಿ ಕಿನ್ನಿಗೋಳಿ ವಿಜಯಾ ಕಲಾವಿದರ ತಂಡದ ಕಲಾವಿದರಾಗಿ ಸಿನಿಮಾ ಕಿರುತೆರೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ನರೇಂದ್ರ ಕೆರೆಕಾಡು ಅವರ ಮಾದರಿ ನಡೆ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ. ಅವರು ಕಿನ್ನಿಗೋಳಿಯ ಕಾನ್ಸೆಟ್ಟಾ ಆಸ್ಪತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ನಡೆಸಿದ ಬೃಹತ್ ರಕ್ತದಾನ ಶಿಬಿರದಲ್ಲಿ ಸಾಮಾನ್ಯರಂತೆ ರಕ್ತದಾನ ಮಾಡಿದ್ದರು. ಆದರೆ ಅವರು ಬರೋಬ್ಬರಿ 33ನೇ ಬಾರಿ ರಕ್ತದಾನ ಮಾಡಿರುವುದೇ ಆ ದಿನದ ವಿಶೇಷವಾಗಿದೆ.

ಈ ಬಗ್ಗೆ ನರೇಂದ್ರ ಕೆರೆಕಾಡು ಅವರು ಪ್ರತಿಕ್ರಿಯಿಸಿ ತಮ್ಮ ಜನ್ಮ ದಿನಾಚರಣೆಯಲ್ಲಿ ಕಟ್ಟುನಿಟ್ಟಾಗಿ ಮಂಗಳೂರಿನ ಜ್ಯೋತಿಯ ಕೆಎಂಸಿಯಲ್ಲಿ ರಕ್ತದಾನ ಮಾಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದೇನೆ ಆಗಾಗ ಅಗತ್ಯ ಬಿದ್ದಲ್ಲಿ ರೋಗಿಗಳಿಗೆ ನೇರವಾಗಿ ರಕ್ತದಾನ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ರಕ್ತದಾನ ಮಾಡಿದಲ್ಲಿ ನಮ್ಮ ಆರೋಗ್ಯಕ್ಕೂ ಹಾಗೂ ದೇಹಕ್ಕೂ ಒಳಿತ ಎಂದಿದ್ದಾರೆ.

ನರೇಂದ್ರ ಕೆರೆಕಾಡು ಅವರ ಈ ಸಾಮಾಜಿಕ ಬದ್ಧತೆಗೆ ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯ ಮುಖ್ಯಸ್ಥರ ಸಹಿತ ಅನೇಕರು ಅಭಿನಂದಿಸಿದ್ದಾರೆ.


Spread the love