ಗಂಟಾಲ್‌ಕಟ್ಟೆ ಇಮ್ತಿಯಾಝ್ ಕೊಲೆಯತ್ನ ಪ್ರಕರಣ: ಮತ್ತೋರ್ವ ಆರೋಪಿ ಸೆರೆ

Spread the love

ಗಂಟಾಲ್‌ಕಟ್ಟೆ ಇಮ್ತಿಯಾಝ್ ಕೊಲೆಯತ್ನ ಪ್ರಕರಣ: ಮತ್ತೋರ್ವ ಆರೋಪಿ ಸೆರೆ

ಮಂಗಳೂರು: ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆಯ ಬದ್ರಿಯಾ ಹೊಟೇಲ್ ಮಾಲಕ ಇಮ್ತಿಯಾಝ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಾಮಂಜೂರಿನಲ್ಲಿ ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆಸಿದ್ದಾರೆ.

ತಾಲೂಕಿನ ಹೊಸಬೆಟ್ಟು ಮಿತ್ತೋಟ್ಟು ನಿವಾಸಿ ಗುರುಪ್ರಸಾದ್ ಯಾನೆ ಗುರುರಾಜ್ (36) ಬಂಧಿತ ಆರೋಪಿ.

ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆಯ ಬದ್ರಿಯಾ ಹೊಟೇಲ್‌ನ್ನು ಇಮ್ತಿಯಾಝ್ ಕಳೆದ ಒಂದು ವರ್ಷದಿಂದ ಮಸೀದಿ ಬಳಿ ನಡೆಸಿಕೊಂಡು ಹೋಗುತ್ತಿದ್ದರು. ಸೆ.24ರಂದು ಸಂಜೆ 6ಕ್ಕೆ ಹೊಟೇಲ್‌ಗೆ ಕಾರೊಂದರಲ್ಲಿ ಬಂದ ವ್ಯಕ್ತಿ ಇಮ್ತಿಯಾಝ್ ಅವರಲ್ಲಿ ’10 ಚಹ ಬೇಕು’ ಎಂದು ಆರ್ಡರ್ ಮಾಡಿದ್ದು, ಇಮ್ತಿಯಾಝ್ ಚಹ ಮಾಡಲೆಂದು ಅಡಿಗೆ ಕೋಣೆಗೆ ಹೋಗಿದ್ದರು. ಈ ವೇಳೆ ಚಹ ಆರ್ಡರ್ ಮಾಡಿದ ವ್ಯಕ್ತಿಯ ಜೊತೆಯಲ್ಲಿ ಇತರ ಮೂವರು ಹೋಟೆಲ್ ಒಳಗೆ ನುಗ್ಗಿ ತಲ್ವಾರ್‌ನಿಂದ ಇಮ್ತಿಯಾಝ್ ಅವರನ್ನು ಕಡಿದು ಕೊಲೆಗೈಯಲು ಯತ್ನಿಸಿದ್ದರು. ಗಾಯಗೊಂಡ ಇಮ್ತಿಯಾಝ್ ಹೊಟೇಲ್‌ನ ಹಿಂದಿನ ಬಾಗಿಲಿನಿಂದ ಓಡಿ ತಪ್ಪಿಸಿಕೊಂಡಿದ್ದರು.

ಈ ಘಟನೆ ನಡೆಯುವ ಸಂದರ್ಭ ಹಾಜರಿದ್ದ ಇಬ್ರಾಹೀಂ ನೀಡಿದ ದೂರಿನಂತೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ಆರೋಪಿ ಗುರುಪ್ರಸಾದ್ ನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.


Spread the love