ಜನಿವಾರ ಕಟ್ ವಿವಾದ ಬೆನ್ನಲ್ಲೇ, ಉಡುಪಿಯಲ್ಲಿ ಮತ್ತೆ ಮುನ್ನಲೆಗೆ ಬಂದ ಹಿಜಾಬ್ ವಿಚಾರ!
ಉಡುಪಿ: ರಾಜ್ಯದ ಕೆಲವೆಡೆ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣದ ಬೆನ್ನಲ್ಲೆ ಹಿಂದೆ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ವಿವಾದದಲ್ಲಿ ಪ್ರಮುಖವಾಗಿದ್ದ ವಿದ್ಯಾರ್ಥಿನಿ ಟ್ವೀಟ್ ಮಾಡುವ ಮೂಲಕ ಸರಕಾರಕ್ಕೆ ಪ್ರಶ್ನಿಸಿದ್ದಾರೆ.
ಹಿಜಾಬ್ ವಿವಾದದಲ್ಲಿದ್ದ ವಿದ್ಯಾರ್ಥಿನಿ ಆಲಿಯಾ ಅಸಾದಿ ತನ್ನ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು ಜನಿವಾರ ಹಾಕಿದ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಬ್ರಾಹ್ಮಣನ ನೋವು ಮತ್ತು ಹಿಜಾಬ್ ಕಾರಣ ಪರೀಕ್ಷೆ ಬಹಿಷ್ಕಾರಕ್ಕೊಳಗಾದ ಮುಸ್ಲಿಂ ಹೆಣ್ಮಕ್ಕಳ ನೋವು ಒಂದೇ ಅಲ್ಲವೇ? ಮತ್ಯಾಕೆ ತಾರತಮ್ಯ, ಜನಿವಾರ ಬ್ರಾಹ್ಮಣರಿಗೆ ಎಷ್ಟು ಅತ್ಯಗತ್ಯವೋ ಹಿಜಾಬ್ ಕೂಡ ನಮಗೆ ಅಷ್ಟೇ ಅಗತ್ಯ. ಇಲ್ಲಿ ಜನಿವಾರವನ್ನು ತಡೆದ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡ್ತಾರೆ ಹಿಜಾಬಿಗಳಿಗೆ ಕಾಲೇಜು ಗೇಟ್ ಬಂದ್ ಮಾಡಿದ ಅಧಿಕಾರಿಗೆ ಯಾವ ಶಿಕ್ಷೆಯೂ ಇಲ್ಲ.
ಬ್ರಾಹ್ಮಣ ವಿದ್ಯಾರ್ಥಿಗೆ ಉಚಿತ ಇಂಜಿನಿಯರ್ ಸೀಟ್ ನೀಡುತ್ತೀರಿ, ನಮ್ಮನ್ನು ಇದುವರೆಗೂ ಪರೀಕ್ಷೆ ಬರೆದಿದ್ದೀರೋ ಇಲ್ಲವೋ ಎಂದು ಸೌಜನ್ಯಕ್ಕಾದರೂ ಕೇಳಿಲ್ಲ, ಇದು ನಮ್ಮ ವ್ಯವಸ್ಥೆ.!! ಎಂದು ಬರೆದುಕೊಳ್ಳುವ ಮೂಲಕ ಸರಕಾರದ ವಿರುದ್ದ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ.