Home Mangalorean News Kannada News ಡಿ. 30: ಮಣಿಪಾಲದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಡಿ. 30: ಮಣಿಪಾಲದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Spread the love

ಡಿ. 30: ಮಣಿಪಾಲದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ: ಉಡುಪಿ ತಾಲೂಕು ಘಟಕದ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 30 ಶನಿವಾರ ಮಣಿಪಾಲದ ಶ್ರೀ ಕ್ಷೇತ್ರ ಶಿವಪಾಡಿ ಉಮಾ ಮಹೇಶ್ವರ ದೇವಸ್ಥಾನದ ಶ್ರೀ ರಮಾನಂದ ಸ್ಮೃತಿ ಮಂಟಪದಲ್ಲಿ ನಡೆಯಲಿದೆ ಎಂದು ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಹೆಚ್ ಪಿ ಹೇಳಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಳಗ್ಗೆ 8:15 ರಿಂದ ರಾತ್ರಿ 8:15 ರವರೆಗೆ ನಿರಂತರ 12 ಗಂಟೆಗಳ ಕಾರ್ಯಕ್ರಮದಲ್ಲಿ ಮಣಿಪಾಲದ ಎಂ ಐ ಟಿ ಬಸ್ ನಿಲ್ದಾಣದಿಂದ ಮೆರವಣಿಗೆಯೊಂದಿಗೆ ಸಮ್ಮೇಳನಾಧ್ಯಕ್ಷರಾದ ಎಚ್ ಶಾಂತರಾಜ್ ಐತಾಳ್ ಅವರನ್ನು ಸ್ವಾಗತಿಸಲಾಗುವುದು.

9:25ಕ್ಕೆ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್ ಧ್ವಜಾರೋಹಣ, ಹಾಗೂ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರಿಂದ ಪರಿಷತ್ ಧ್ವಜಾರೋಹಣ ನಡೆಯಲಿರುವುದು. 9:30ಕ್ಕೆ ಹರ್ಷಿತಾ ಉಡುಪ ಹಾಗೂ ಪ್ರಣಮ್ಯ ತಂತ್ರಿ ಅವರಿಂದ ಯಕ್ಷ ನಾಟ್ಯ ವೈಭವ ನಡೆಯಲಿದೆ. 10 ಗಂಟೆಗೆ ಸರಿಯಾಗಿ ದಿವಂಗತ ತಾರಾ ಭಟ್ ನೆನಪಿನ ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಸಾಹಿತಿ ನೆಂಪು ನರಸಿಂಹ ಭಟ್ ಉದ್ಘಾಟಿಸಲಿದ್ದಾರೆ ಬಳಿಕ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು ಅಂತರಾಷ್ಟ್ರೀಯ ಕಲಾವಿದ, ಪರಿಸರವಾದಿ ದಿನೇಶ್ ಹೊಳ್ಳ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಸಾಧಕರಾದ ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪುರು, ಕಲಾವಿದ ಮನೋಹರ್ ನಾಯಕ್ ಅಂತರಾಷ್ಟ್ರೀಯ ಕ್ರೀಡಾಪಟು ಅರುಣಾಕಲಾ ರಾವ್, ಸಮಾಜ ಸೇವಕ ರವೀಂದ್ರ ಶೆಟ್ಟಿ ಕಡೆಕಾರ್ ಇವರನ್ನು ಅಭಿನಂದಿಸಲಾಗುವುದು.

ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಅಂಚೆ ಕಾರ್ಡ್ ಕಥೆಗಳು (ಗೃಹಿಣಿಯರಿಗಾಗಿ), ಯುವ ಕವಿಗೋಷ್ಠಿ, ಅಲ್ಲಿ ಇಲ್ಲಿ ಹಾಸ್ಯ ಗೋಷ್ಠಿ , ಅಧ್ಯಕ್ಷರೊಂದಿಗೆ ಮುಖಾಮುಖಿ ಮುಂತಾದ ವಿವಿಧ ಗೋಷ್ಠಿಗಳು ನಡೆಯಲಿದೆ.

ತಾಲೂಕು ಅಧ್ಯಕ್ಷ ರವಿರಾಜ್ ಎಚ್ ಪಿ ಅವರ ಅಧ್ಯಕ್ಷತೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಎನ್. ಎ. ಮಧ್ಯಸ್ಥ (ಪಕ್ಷಿ ಪ್ರಪಂಚ) , ಪ್ರೊ. ಬಾಲಕೃಷ್ಣ ಮದ್ದೋಡಿ ಮಣಿಪಾಲ (ಶಿಕ್ಷಣ), ಡಾ. ವೈ ಸುದರ್ಶನ ರಾವ್ (ವೈದ್ಯಕೀಯ), ಡಾ. ರಶ್ಮಿ ಅಮ್ಮೆಂಬಳ (ಮಾಧ್ಯಮ), ಕೃಷ್ಣ ಸೆಟ್ಟಿಬೆಟ್ಟು (ಯೋಧ), ಲಿಯಾಖತ್ ಆಲಿ (ಚಿತ್ರಕಲೆ) , ನಿದೀಶ್ ಕುಮಾರ್ ಪರ್ಕಳ (ಛಾಯಾಗ್ರಹಣ ), ವಿನಯ ಸರೋಜಾ ಕುಮಾರಿ (ಶಿಕ್ಷಣ), ರಂಜಿತ್ ಶೆಟ್ಟಿ (ಸಾಂಸ್ಕೃತಿಕ ), ಸಂಜೀವ ಪಾಟೀಲ್ ಪರ್ಕಳ (ಸಾಹಿತ್ಯ ), ನಿತ್ಯಾನಂದ ಕಬಿಯಾಡಿ (ಭಜನೆ), ವಿದುಷಿ ಉಷಾ ಹೆಬ್ಬಾರ್ (ಸಂಗೀತ), ಸುಗುಣ ಶಂಕರ್ ಸುವರ್ಣ ಮಣಿಪಾಲ (ಉದ್ಯಮ ), ಗೋಪಿ ಹಿರೇಬೆಟ್ಟು (ವ್ಯಂಗ್ಯ ಚಿತ್ರ), ಕೃತಿ ಆರ್. ಸನಿಲ್ (ನೃತ್ಯ), ಸುಶೀಲ ಆರ್. ರಾವ್ ಬೈಲೂರು (ಸಾಹಿತ್ಯ ) ಮಹಮ್ಮದ್ ಮೌಲ (ಸಮಾಜ ಸೇವೆ ), ರತ್ನಾಕರ ಕಲ್ಯಾಣಿ ಪೆಡೂ೯ರು (ರಂಗಭೂಮಿ). ವಿದ್ಯಾ ವಿಶ್ವೇಶ (ರಂಗೋಲಿ ), ಸುಜಾತ ಜೆ. ಶೆಟ್ಟಿ (ಔಷದ) ಹಾಗೂ ಪರ್ಕಳದ ಅಜ್ಜ ಅಜ್ಜಿ ಹೋಟೆಲ್ ದಂಪತಿಗಳಾದ ಶ್ರೀಮತಿ ವಸಂತಿ ಪ್ರಭು , ಶ್ರೀ ಗೋಪಾಲಕೃಷ್ಣ ಪ್ರಭು .

ಪರಿಸರದ ಸಂಘ- ಸಂಸ್ಥೆಗಳಾದ ಮಂಗಳ ಕಲಾ ಸಾಹಿತ್ಯ ವೇದಿಕೆ ಪಕ೯ಳ, ಸರಿಗಮ ಭಾರತಿ ಪರ್ಕಳ, ಗೋಳಿಕಟ್ಟೆ ಫ್ರೆಂಡ್ಸ್ ಪರ್ಕಳ, ರತ್ನ ಸಂಜೀವ ಕಲಾಮಂಡಲಿ ಸರಳೆಬೆಟ್ಟು , ವಿಘ್ನೇಶ್ವರ ಕಲಾಭವನ ಪರ್ಕಳ, ವಿಪಂಚಿ ಕಲಾಬಳಗ ಮಣಿಪಾಲ ಇವರನ್ನು ಸನ್ಮಾನಿಸಲಾಗುವುದು. ಸಮಾರಂಭದ ಸಮಾರೋಪ ಭಾಷಣವನ್ನು ಪ್ರೊ . ಮುರಳೀಧರ ಉಪಾಧ್ಯ ಹಿರಿಯಡಕ ಮಾಡಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಗುರು ವಸಂತಿ ಸಾಂಸ್ಕೃತಿಕ ವೇದಿಕೆ ಮಣಿಪಾಲ ಇದರ ಕಲಾವಿದರಿಂದ ‘ಕಾದಿರುವಳು ಶಬರಿ ‘ ಎಂಬ ನಾಟಕ ಪ್ರದರ್ಶನಗೊಳ್ಳಲಿದೆಎಂದರು.

ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ಭುವನ ಪ್ರಸಾದ್ ಹೆಗ್ಡೆ, ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love

Exit mobile version