Home Mangalorean News Kannada News ನೀರನ್ನು ಹೀರಿಕೊಳ್ಳುವ ವ್ಯವಸ್ಥೆಯಿಂದ ದೂರವಾಗುತ್ತಿದ್ದೇವೆ : ಕೆ.ಜಯಪ್ರಕಾಶ್ ಹೆಗ್ಡೆ

ನೀರನ್ನು ಹೀರಿಕೊಳ್ಳುವ ವ್ಯವಸ್ಥೆಯಿಂದ ದೂರವಾಗುತ್ತಿದ್ದೇವೆ : ಕೆ.ಜಯಪ್ರಕಾಶ್ ಹೆಗ್ಡೆ

Spread the love

ನೀರನ್ನು ಹೀರಿಕೊಳ್ಳುವ ವ್ಯವಸ್ಥೆಯಿಂದ ದೂರವಾಗುತ್ತಿದ್ದೇವೆ : ಕೆ.ಜಯಪ್ರಕಾಶ್ ಹೆಗ್ಡೆ

  • ʼಫೈನ್‌ ಪ್ಲಾಂಟ್‌ʼ ಮಾರುಕಟ್ಟೆ ಬಿಡುಗಡೆ, ʼಹೊಸ ಪುಟʼ ಅಪ್ಲಿಕೇಶನ್‌ ಲೋಕಾರ್ಪಣೆ.

ಕುಂದಾಪುರ: ತಂತ್ರಜ್ಞಾನ ಹಾಗೂ ಆಧುನಿಕತೆಯ ಕಾರಣಗಳಿಂದಾಗಿ ಸುಲಭ ವ್ಯವಸ್ಥೆಗಳತ್ತ ಮಾನವರು ಕೇಂದ್ರೀಕೃತರಾಗುತ್ತಿರುವುದರಿಂದ, ನೀರನ್ನು ಹೀರಿಕೊಳ್ಳುವ ನೈಸರ್ಗಿಕ ವ್ಯವಸ್ಥೆಯಿಂದ ನಾವು ದೂರವಾಗುತ್ತಿದ್ದೇವೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ಸಂಜೆ ಬೆಂಗಳೂರಿನ ಫೈನ್ ಪ್ಲಾಂಟ್ ರಿಸರ್ವ್ಯಯರ್ ಕಂಪೆನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʼ ಫೈನ್‌ ಪ್ಲಾಂಟ್‌ ʼ ಮಾರುಕಟ್ಟೆ ಬಿಡುಗಡೆ, ವಿದ್ಯಾರ್ಥಿಗಳಿಗೆ ಪ್ಲಾಂಟ್‌ ವಿತರಣೆ ಹಾಗೂ ʼಹೊಸ ಪುಟʼ ಅಪ್ಲಿಕೇಶನ್ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಸ್ತೆಗಳ, ಡ್ರೈನೇಜ್‌ಗಳು, ನೆಲಹಾಸುಗಳು ಕಾಂಕ್ರೀಟ್‌ಮಯವಾಗಿರುವುದರಿಂದ ನಮ್ಮ ಪಾದಗಳಿಗೆ ನೈಸರ್ಗಿಕ ಮಣ್ಣುಗಳೇ ಸ್ಪರ್ಶವಾಗುತ್ತಿಲ್ಲ. ಬದಲಾವಣೆ ಕಾರಣಗಳಿಂದಾಗಿ ನೀರನ್ನು ಹೀರಿಕೊಳ್ಳುವ ವ್ಯವಸ್ಥೆಯೇ ಈ ಭೂಮಿಯಲ್ಲಿ ಇಲ್ಲದಂತಾಗಿದೆ. ಮಾನವ ಸೃಷ್ಟಿಯಿಂದ ಆಗಿರುವ ಸಮಸ್ಯೆಗಳ ನಿವಾರಣೆಗೆ ಈ ವಿನೂತನವಾದ ಸಂಶೋಧನೆ ನಾಂದಿ ಹಾಡಿದಂತಿದೆ. ಪ್ಲಾಸ್ಟಿಕ್‌ ನಿರ್ಮೂಲನೆ, ಪರಿಸರ ರಕ್ಷಣೆ ಹಾಗೂ ಹಸಿರು ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸುವ ತುರ್ತು ಅಗತ್ಯವಿದೆ. ಜಲಮೂಲ ನಾಶವಾದಾಗ, ನಾವು ಆತಂಕ ಪಡುತ್ತೇವೆ. ಕಾಂಕ್ರೀಟ್ ನಂತಹ ಅವೈಜ್ಞಾನಿಕ ವ್ಯವಸ್ಥೆಯಿಂದ ಪರಿಸರ ನಾಶವಾಗುತ್ತಿದೆ. ಇಂತಹ‌ ಸಂದಿಗ್ಧ ಕಾಲದಲ್ಲಿ ಫೈನ್‌ ಪ್ಲಾಂಟ್‌ನಂತಹ ಸಂಶೋಧನೆ ನಡೆದಿರುವುದು ಶ್ಲಾಘನೀಯ. ಸರ್ಕಾರ ಮಟ್ಟದಲ್ಲಿಯೂ ಇಂತಹ ಸಂಶೋಧನೆಗಳಿಗೆ ಪ್ರೋತ್ಸಾಹ ದೊರಕುವಂತಾಗಬೇಕು ಎಂದರು.

ʼಹೊಸ ಪುಟʼ ಅಪ್ಲಿಕೇಶನ್‌ ಲೋಕಾರ್ಪಣೆ ಮಾಡಿ ಮಾತನಾಡಿದ ಬೆಂಗಳೂರಿನ ಬಿಬಿಎಂಪಿಯ ಅಪರ ಆಯುಕ್ತರಾದ ಅಜಿತ್‌ ಹೆಗ್ಡೆ ಶಾನಾಡಿ ಮಾತನಾಡಿ, ಪ್ರಾಕೃತಿಕತೆಯನ್ನು ಉಳಿಸುವ ಇಂತಹ ಸಂಶೋಧನೆ ಎಲ್ಲರಿಗೂ ತಲುಪುವಂತಾಗಲೂ. ಸಂಬಂಧಪಟ್ಟ ಇಲಾಖೆಗಳು ಕಾರ್ಯೋನ್ಮುಖವಾಗಬೇಕು. ಶಾಲೆ ಹಾಗೂ ಶಿಕ್ಷಣಾಸಕ್ತರನ್ನು ಒಂದುಗೂಡಿಸುವ ಹೊಸ ಪುಟ ಅಪ್ಲಿಕೇಶನ್ ಪರಿಣಾಮಕಾರಿಯಾಗಲು ಇದರ ಸದ್ಬಳಕೆ ಆಗಬೇಕು. ಹೀಗಾದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿ ನಿರ್ಮಾಣವಾಗುತ್ತದೆ ಎಂದರು.

ಶಾಸಕ ಎ.ಕಿರಣ್ ಕುಮಾರ್‌ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಫೈನ್‌ ಪ್ಲಾಂಟ್‌ ರಿಸರ್ವ್ಯಯರ್‌ ಪ್ರೈವೇಟ್‌ ಲಿಮಿಟೆಡ್‌ ಬೆಂಗಳೂರಿನ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.‌ಪ್ರಸನ್ನಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಮೊಳಹಳ್ಳಿ ದಿನೇಶ್‌ ಹೆಗ್ಡೆ ಜಯರತ್ನ ಹೆಗ್ಡೆ ಟ್ರಸ್ಟ್‌ (ರಿ.)ನ ಎಂ ದಿನೇಶ್‌ ಹೆಗ್ಡೆ ಮೊಳಹಳ್ಳಿ, ವಡೇರಹೋಬಳಿ ಸರ್ಕಾರಿ ಹಿ. ಪ್ರಾ. ಶಾಲೆ ನಿವೃತ್ತ ಮುಖ್ಯ ಶಿಕ್ಷಕರಾದ ಎ.ಚಂದ್ರಶೇಖರ್‌ ಶೆಟ್ಟಿ, ಕುಂದಾಪುರ ವಲಯ ಶಿಕ್ಷಣಾಧಿಕಾರಿ ಶೋಭಾ ಎಸ್.‌ ಶೆಟ್ಟಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ರವಿರಾಜ್‌ ಶೆಟ್ಟಿ ಜಿ., ಜಿಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ರಾಘವೇಂದ್ರ ಕುಲಾಲ್‌, ವಡೇರಹೋಬಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಾಲಚಂದ್ರ ಹೆಬ್ಬಾರ್‌ ಇದ್ದರು.

ಈ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಿಗೆ, ಪ್ರಮುಖ ದೇವಸ್ಥಾನಗಳಿಗೆ, ಇಗರ್ಜಿ, ಮಸೀದಿಗಳಿಗೆ, ಶಾಲಾ-ಕಾಲೇಜುಗಳಿಗೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಫೈನ್‌ ಪ್ಲಾಂಟ್‌ ಗಳನ್ನು ವಿತರಿಸಲಾಯಿತು.

ಪತ್ರಕರ್ತ ಕೆ. ಸಿ ರಾಜೇಶ್‌ ಸ್ವಾಗತಿಸಿದರು. ಸಂದೇಶ್‌ ಶೆಟ್ಟಿ ಸಳ್ವಾಡಿ ನಿರೂಪಿಸಿದರು. ಜೆಸಿಐ ಸಿಟಿ ಕುಂದಾಪುರದ ಸ್ಥಾಪಕಾಧ್ಯಕ್ಷ ಹುಸೇನ್‌ ಹೈಕಾಡಿ ವಂದಿಸಿದರು.


Spread the love

Exit mobile version