Home Mangalorean News Kannada News ಪೆನ್ ಡ್ರೈವ್ ಪ್ರಕರಣ; ಉಪ್ಪು ತಿಂದವನು ನೀರು ಕುಡಿಯಲೇಬೇಕು – ಎಚ್ ಡಿ ಕುಮಾರಸ್ವಾಮಿ

ಪೆನ್ ಡ್ರೈವ್ ಪ್ರಕರಣ; ಉಪ್ಪು ತಿಂದವನು ನೀರು ಕುಡಿಯಲೇಬೇಕು – ಎಚ್ ಡಿ ಕುಮಾರಸ್ವಾಮಿ

Spread the love

ಪೆನ್ ಡ್ರೈವ್ ಪ್ರಕರಣ; ಉಪ್ಪು ತಿಂದವನು ನೀರು ಕುಡಿಯಲೇಬೇಕು – ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ  ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ, ಇನ್ನು ಈ ಬಗ್ಗೆ ಪ್ರಜ್ವಲ್ ರೇವಣ್ಣ ಅವರ ಚಿಕ್ಕಪ್ಪ, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ   ಅವರು ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನಾಗಲಿ ದೇವೇಗೌಡರಾಗಲಿ ಎಂದೂ ಸಹ ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಂತ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಯಾರಾದರೂ ಕಷ್ಟ ಹೇಳಿಕೊಂಡು ಬಂದರೆ ಅವರ ಕಷ್ಟ ಪರಿಹರಿಸಿ ಕಳುಹಿಸಿದ್ದೇವೆ. ನಾವಂತೂ ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಗೌರವ ನೀಡಿದ್ದೇವೆ ಎಂದು ಹೇಳಿದರು.

ಈ ಬಗ್ಗೆ ಎಸ್ಐಟಿ ತನಿಖೆಗೆ ಈಗಾಗಲೇ ಸರ್ಕಾರ ಆದೇಶ ಮಾಡಿದೆ. ಎಸ್‌ಐಟಿ ತನಿಖೆಯಿಂದ ವಾಸ್ತವಾಂಶ ಹೊರಗೆ ಬರಲಿ. ಈ ನೆಲದ ಕಾನೂನಿನಲ್ಲಿ ಯಾರೇ ತಪ್ಪು ಮಾಡಿದರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಾವಂತೂ ಯಾವುದಕ್ಕೂ ತಪ್ಪು ಮಾಡಿದ ವಿಷಯದಲ್ಲಿ ಯಾರಿಗೂ ಕ್ಷಮಿಸುವ ಪ್ರಶ್ನೆಯಿಲ್ಲ. ತನಿಖೆಯ ವರದಿ ಸಂಪೂರ್ಣ ಹೊರಗೆ ಬರಲಿ ಬಂದ ನಂತರ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಜಿಟಿ ದೇವೇಗೌಡ ಹೇಳಿದ್ದೇನು?
ಇನ್ನು ಈ ಪ್ರಕರಣದ ಬಗ್ಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಮಾತನಾಡಿದ್ದು, ಈಗಾಗಲೇ ಮಹಿಳೆಯರಿಗೆ ದೌರ್ಜನ್ಯ ಮಾಡಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ಸರ್ಕಾರ ಕೂಡ ಎಸ್ಐಟಿ ತನಿಖೆಗೆ ನೀಡಿದೆ . ಸರ್ಕಾರದ ನಿರ್ಧಾರವನ್ನ ಸ್ವಾಗತ ಮಾಡುತ್ತೇನೆ. ಯಾರೇ ತಪ್ಪು ಮಾಡಿದರು ಶಿಕ್ಷೆ ಆಗಬೇಕು. ತಪ್ಪು ಸಾಬೀತಾದರೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ. ವಿಡಿಯೋಗಳನ್ನು ನಾನು ನೋಡಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿದ್ದೇನೆ ಎಂದು ತಿಳಿಸಿದರು.

ಚುನಾವಣಾ ಸಂದರ್ಭದಲ್ಲಿ ಏನು ಏನು ಮಾಡಬೇಕು. ಎದುರಾಳಿಗಳನ್ನ ಸೋಲಿಸಲು ಎಲ್ಲ ಪ್ರಯತ್ನ ನಡೆಯುತ್ತೆ. ಸರ್ಕಾರ ನಿಮ್ಮ ಕೈಯಲ್ಲಿದೆ. ತನಿಖೆ ಸಂಸ್ಥೆಗಳು ನಿಮ್ಮ ಕೈಯಲ್ಲಿ ಇವೆ. ಸಿಐಡಿ,ಎಸ್ಐಟಿ ಎಲ್ಲ ಎಲ್ಲ ನಿಮ್ಮ ಕೈಯಲ್ಲಿವೆ. ನೀವು ಯಾವ ತನಿಖೆ ಮಾಡಿಸಿದರು ನಾವು ಸ್ವಾತ ಮಾಡುತ್ತೇವೆ. ನಾವು ಎಲ್ಲರನ್ನೂ ಕಾಯುವುದಕ್ಕೆ ಆಗಲ್ಲ. ಪಕ್ಷ ಏನು ಮಾಡುತ್ತೆ? ಏನ್ ಆಗಿದೆ ಎಂದು ತನಿಖೆ ಮಾಡುತ್ತಿದ್ದಾರೆ. ಎಲ್ಲವೂ ಹೊರಗಡೆ ಬರುತ್ತೆ. ಪ್ರತಿಯೊಬ್ಬ ಪ್ರಜೆ ಸಹ ಹೆಣ್ಣು ಮಕ್ಕಳ ಗೌರವ ಕೊಡುತ್ತಾರೆ. ನಾನು ಕೋರ್ ಕಮಿಟಿ ಅಧ್ಯಕ್ಷನಾಗಿ ನನ್ನ ಇತಿಮಿತಿಯಲ್ಲಿ ಮಾತನಾಡುತ್ತೇನೆ. ಇನ್ನುಳಿದಂತೆ ಇದ್ಯಾವುದು ಗೊತ್ತಿಲ್ಲ.ಇಲ್ಲಿಯವರೆಗೆ ಯಾವುದು ಗೊತ್ತಿಲ್ಲ ಎಂದರು.


Spread the love

Exit mobile version