Home Mangalorean News Kannada News ಅಕ್ರಮ ಮರಳುಗಾರಿಕೆ ತಡೆ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿ ಸ್ವತಂತ್ರರು: ಪ್ರಮೋದ್ ಮಧ್ವರಾಜ್

ಅಕ್ರಮ ಮರಳುಗಾರಿಕೆ ತಡೆ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿ ಸ್ವತಂತ್ರರು: ಪ್ರಮೋದ್ ಮಧ್ವರಾಜ್

Spread the love

ಅಕ್ರಮ ಮರಳುಗಾರಿಕೆ ತಡೆ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿ ಸ್ವತಂತ್ರರು: ಪ್ರಮೋದ್ ಮಧ್ವರಾಜ್

ಉಡುಪಿ: ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಪ್ರತಿಯೊಬ್ಬ ಪ್ರಾಮಾಣಿಕ ಅಧಿಕಾರಿಗಳ ಕೆಲಸದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ ಅಲ್ಲದೆ ಅವರಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಮುಕ್ತವಾಗಿರಿಸಿದ್ದೇನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಸಹಾಯಕ ಕಮೀಷನರ್ ಶಿಲ್ಪಾನಾಗ್ ಅವರ ಹಲ್ಲೆಯ ಬಳಿಕ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮತ್ತು ಎಸಿಯವರ ಕರ್ತವ್ಯವದ ವೇಳೆ ನಡೆದ ಹಲ್ಲೆಯನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ಅಲ್ಲದೆ ಅವರುಗಳ ಕಾರ್ಯತತ್ಪರತೆ, ದಕ್ಷತೆ ಪ್ರಾಮಾಣಿಕತೆ, ಮತ್ತು ಬದ್ದತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ. ಘಟನೆ ನಡೆದ ದಿನ ರಾತ್ರಿ 12.15 ಗಂಟೆಗೆ ಜಿಲ್ಲಾಧಿಕಾರಿಗಳು ಮೆಸ್ಸೆಜ್ ಮೂಲಕ ಮಾಹಿತಿ ನೀಡಿದ್ದರು. 3.45 ಕ್ಕೆ ಜಿಲ್ಲಾ ಎಸ್ಪಿಯವರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಿರಂತರವಾಗಿ ನಾನು ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಇತರ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ಗುಂಡ್ಲುಪೇಟೆ ಉಪಚುನಾವಣೆಯ ಕೆಲಸದಲ್ಲಿ ನಾನಿದ್ದಿದ್ದು, ದೈಹಿಕವಾಗಿ ನಾನು ಇಲ್ಲಿ ಇಲ್ಲದೆ ಹೋದರೂ ಮಾನಸಿಕವಾಗಿ ಉಡುಪಿಯಲ್ಲೇ ಇದ್ದೆ.

ಘಟನೆಯ ಕುರಿತು ಏನೆಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ನಾನು ಸೂಚನೆ ಕೊಟ್ಟ ಮೇರೆಗೆ ಸಂಪೂರ್ಣ ಸ್ವಾತಂತ್ರ್ಯ ಜಿಲ್ಲಾಡಳಿತಕ್ಕೆ ಇತ್ತು. ಎಷ್ಟೋ ಬಾರಿ ನಾನೇ ಸ್ವತಃ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಮತ್ತು ಕ್ರಮ ಕೈಗೊಳ್ಳಲು ಕೂಡ ಎಸಿಯವರಿಗೆ ಸೂಚನೆ ನೀಡಿದ್ದೇ. ನನಗೆ ಬೇಕಾದವರೂ ಕೂಡ ಮರಳುಗಾರಿಕೆ ನಡೆಸುತ್ತಿದ್ದದ್ದನ್ನು ಕೂಡ ನಾನು ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ನಾನು ಎಂದಿಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡಲು ಸಿದ್ದನಿಲ್ಲ.

ಜಿಲ್ಲೆಯಲ್ಲಿ ಮರಳು ಸಮಸ್ಯೆ ಬಂದಾಗ ಪುನಃ ಜನ ಮಾತನಾಡುತ್ತಾರೆ. ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಸುಪ್ರಿಂಕೋರ್ಟಿನ ಹಸಿರುಪೀಠ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಯಾವುದೇ ಹೊಸ ಪರವಾನಿಗೆ ನೀಡಲು ಅವಕಾಶವಿಲ್ಲ ಹೊಸ ಪರಿವಾನಿಗೆ ನೀಡಬೇಕಾದರೆ ಅದಕ್ಕೆ ಹಲವಾರು ನಿಯಮವಾಳಿಗಳೀದ್ದು ಅದರಂತೆ ಕ್ರಮ ಕೈಗೊಳ್ಳಬೇಕಾಗಿದೆ. ಕೇಂದ್ರದ ಸೂಚನೆ ಪರಿಪಾಲನೆ ಮಾಡಬೇಕಾಗಿದ್ದು, ಹಿಂದಿನ ಜಿಲ್ಲಾಧಿಕಾರಿ ಅದನ್ನು ಪರಿಪಾಲನೆ ಮಾಡದ ಪರಿಣಾಮ ಇಂತಹ ಸಮಸ್ಯೆಗೆ ಕಾರಣವಾಗಿದೆ. ನಿಯಮವಳಿ ಪ್ರಕಾರ ಹೊಸ ಲೈಸನ್ಸ್ ನೀಡಲು ನಾನು ಈಗಾಗಲೇ ಜಿಲ್ಲಾಧಿಕಾರಿಯವರ ಜೊತೆ ಸಭೆ ನಡೆಸಿ ಮುಂದುವರೆಯಲು ಸೂಚನೆ ನೀಡಿದ್ದೆನೆ ಅದು ನಡೆಯುತ್ತಿದೆ. ನಾನ್ ಸಿಆರ್ ಝಡ್ ವಿಚಾರ ಸದನ ಉಪಸಮಿತಿಯ ಎದುರು ಇದ್ದು, ಒಂದು ರಾಜ್ಯದಲ್ಲಿ ಎರಡು ನೀತಿ ಮಾಡದೆ ಒಂದೆ ರೀತಿಯ ಮರಳು ನೀತಿ ಮಾಡುವ ನಿಟ್ಟಿನಲ್ಲಿ ಹಲವಾರು ಸುತ್ತಿನ ಮಾತುಕತೆ ಕೂಡ ನಡೆದಿದೆ. ಸದ್ಯದಲ್ಲಿಯೇ ಕರಡು ನೀತಿಯನ್ನು ರಚಿಸಿ ಅದನ್ನು ಸದಸ್ಯರುಗಳಿಗೆ ನೀಡಿ ಅವರ ಅಭಿಪ್ರಾಯ ಪಡೆದು ಹೊಸ ನೀತಿಯನ್ನು ರೂಪಿಸಲಾಗುವುದು ಎಂದರು. ಸಮಸ್ಯೆಗಳನ್ನು ಒಂದೇ ದಿನದಲ್ಲಿ ಪರಿಹರಿಸಲು ಅಸಾಧ್ಯ ಸರಿಯಾಗಿ ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಒಂದುವೇಳೆ ತರಾತುರಿಯಲ್ಲಿ ನೀತಿ ರೂಪಿಸಿದೆ ಮುಂದೆ ಯಾರಾದರೂ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನೆ ಮಾಡಿದರೆ ಮತ್ತೆ ಪುನಃ ಸಮಸ್ಯೆ ಉಂಟಾಗುತ್ತದೆ ಎಂದರು.

ಹಿಂದೆ ದಿವಂಗತ ಡಾ ವಿ ಎಸ್ ಆಚಾರ್ಯ ಸಚಿವರಾಗಿದ್ದ ಯಾವುದೇ ನಿಯಮಗಳು ರಚನೆಯಾಗಿರಲಿಲ್ಲ ಆದರೆ ಈಗ ಕೆಲವೊಂದು ನಿಯಮಗಳು ರೂಪಿಸಲ್ಪಟ್ಟಿದ್ದು, ಜಾಗರುಕತೆಯಿಂದ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ನಮ್ಮ  ಉದ್ದೇಶ ಜಿಲ್ಲೆಯ ಜನರಿಗೆ ಅಧಿಕೃತವಾಗಿ ಸಕ್ರಮವಾಗಿ ಮರಳು ಒದಗಿಸುವುದು ಆಗಿದೆ. ಹಿಂದಿನ ಜಿಲ್ಲಾಧಿಕಾರಿಗಳು ಇದ್ದ ಸಮಯದಲ್ಲಿ ಅಕ್ರಮವಾಗಿ ಮರಳನ್ನು ಬೇರೆ ಜಿಲ್ಲೆಗಳಿಗೆ ಸಾಗಿಸಲಾಗುತ್ತಿತ್ತು ಅದನ್ನು ನಿಲ್ಲಿಸುವಂತೆ ನಾನು ವಿನಂತಿಸಿದರೂಕೂಡ ಅವರ ಕ್ರಮ ಕೈಗೊಳ್ಳದ ಪರಿಣಾಮ ಇಂದು ಇಂತಹ ಸ್ಥಿತಿ ಒದಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಅಕ್ರಮ ಮರಳು ಲಾರಿಗಳು ತಿರುಗಿ ರಸ್ತೆಗಳು ಹಾಳಾದ ಪರಿಣಾಮ ಜನರು ದಂಗೆಯೆದ್ದು ನ್ಯಾಯಲಯದ ಮೆಟ್ಟಿಲೇರಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ನನಗೆ ಎರಡು ಕರ್ತವ್ಯ ಕೂಡ ಇದೆ ಒಂದು ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸುವುದರೊಂದಿಗೆ ಜಿಲ್ಲೆಯ ಜನರಿಗೆ ಮರಳನ್ನು ಒದಗಿಸುವುದು. ಎರಡನ್ನೂ ಕಾನೂನಿನ ಚೌಕಟ್ಟಿನಲ್ಲಿ ನಡೆಸಬೇಕಾಗಿದೆ ಎಂದರು.

ಘಟನೆ ನಡೆದು ಐದು ದಿನಗಳ ಬಳಿಕ ಜಿಲ್ಲೆಗೆ ಬಂದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರ ಸಚಿವರು ನನಗೆ ಮುಖ್ಯಮಂತ್ರಿಗಳು ಉಪಚುನಾವಣೆಯ ಜವಾಬ್ದಾರಿಯನ್ನು ವಹಿಸಿದ್ದು ಎಪ್ರಿಲ್ 7 ರ ತನಕ ಬೇರೆ ಕಡೆ ಎಲ್ಲಿಗೂ ತೆರಳದಂತೆ ಸೂಚನೆ ನೀಡಿದ್ದರು. ನಾನು ಇಲ್ಲಿ ಬಂದು ಮಾಡುವಂತಹದ್ದು ಏನು ಇಲ್ಲ. ನನ್ನ ಸೂಚನೆ ಮೇರೆಗೆ ಎಲ್ಲ ಕೆಲಸಗಳು ಸಸೂತ್ತವಾಗಿ ನಡೆಯುತ್ತಿವೆ. ಈಗಾಗಲೇ ಬಂಧನ, ಅಕ್ರಮ ಮರಳುಗಾರಿಕೆ ವಿರುದ್ದ ಕಠಿಣ ಕ್ರಮ ಜರುಗತ್ತಿದೆ. ನಾನು ಇಲ್ಲದೆಯೂ ಆಗಬೇಕಾದ ಕೆಲಸ ಆಗುತ್ತಿದೆ, ಒಂದು ವೇಳೆ ನಾನು ಇದ್ದಿದ್ದರೆ ಅದಕ್ಕೆ ವಿರೋಧ ಪಕ್ಷದವರು ಇನ್ನೋಂದೆ ಆರ್ಥ ಕಲ್ಪಿಸುತ್ತಿದ್ದರು. ವಿರೋಧ ಪಕ್ಷದವರದ್ದು ಎರಡು ನಾಲಗೆ ಅವರ ಮುಂದೆ ಹೇಗೆ ಮಾತನಾಡಿದರೂ ತಪ್ಪಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಹಲ್ಲೆಯಾದ ಸ್ಥಳದ ಧಕ್ಕೆ ಯಾರದ್ದು ಎನ್ನುವುದು ಇನ್ನೂ ಪತ್ತೆ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದಾಗ ಈ ಕುರಿತು ಪೋಲಿಸ್ ವರಿಷ್ಠಾಧಿಕಾರಿಯವರ ಬಳಿ ಮಾತನಾಡುತ್ತೇನೆ.ತನಿಖೇ ಸರಿಯಾದ ನಿಟ್ಟಿನಲ್ಲಿ ನಡೆಯುತ್ತಿದೆ ಎಂದರು. ಇದರಲ್ಲಿ ಗಣಿ ಇಲಾಖೆಯ ನಿರ್ಲಕ್ಷ ಇದ್ದ ಬಗ್ಗೆ ಕೂಡ ಮಾಹಿತಿ ಇದೆ ಅವರ ವಿರುದ್ದವೂ ಕ್ರಮ ಕೈಗೊಳ್ಳಬೇಕಾಗಿದೆ ಅದರ ಬಗ್ಗೆ ಚಿಂತನೆ ನಡೆಸಲಾಗುವುದು. ಮರಳು ಮಾಫಿಯಾಕ್ಕೆ ಉಸ್ತುವಾರಿ ಸಚಿವರೇ ನೇತೃತ್ವ ವಹಿಸಿದ್ದಾರೆ ಎಂದು ಹೇಳುತ್ತಿರುವ ಅಪಾದನೆಯನ್ನು ಸಚಿವರು ಸಾರಾಸಗಟಾಗಿ ತಳ್ಳಿಹಾಕಿದರು.


Spread the love

Exit mobile version