ಇನ್ನೊಂದು ಧರ್ಮವನ್ನು ಅರಿತಾಗ ಅದರ ಬಗ್ಗೆ ಗೌರವ ಪ್ರೀತಿ ಮತ್ತು ವಿಶ್ವಾಸ ಹುಟ್ಟುತ್ತದೆ – ವಂ|ಡೆನಿಸ್ ಡೆಸಾ

Spread the love

ಇನ್ನೊಂದು ಧರ್ಮವನ್ನು ಅರಿತಾಗ ಅದರ ಬಗ್ಗೆ ಗೌರವ ಪ್ರೀತಿ ಮತ್ತು ವಿಶ್ವಾಸ ಹುಟ್ಟುತ್ತದೆ – ವಂ|ಡೆನಿಸ್ ಡೆಸಾ

ಉಡುಪಿ: ಇನ್ನೊಂದು ಧರ್ಮದ ಧರ್ಮಗ್ರಂಥಗಳನ್ನು ಒದಿಕೊಂಡು ಅವರ ಆಚಾರ ವಿಚಾರಗಳು ಮತ್ತು ಭೋಧನೆಗಳನ್ನು ತಿಳಿದುಕೊಂಡಾಗ ಅದರ ಜನರ ಬಗ್ಗೆ ಗೌರವ ಪ್ರೀತಿ ಮತ್ತು ವಿಶ್ವಾಸ ಹುಟ್ಟುತ್ತದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು.

ಅವರು ಶುಕ್ರವಾರ ಚರ್ಚಿನ ಸಭಾಂಗಣದಲ್ಲಿ ಜಮಾತೆ-ಇಸ್ಲಾಮಿ-ಹಿಂದ್ ಇದರ ಮಲ್ಪೆ ಘಟಕದ ನೇತೃತ್ವದಲ್ಲಿ ಪ್ರವಾದಿ ಸಂದೇಶ ಅಭಿಯಾನದ ಪ್ರಯುಕ್ತ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಗತ್ತಿನ ಎಲ್ಲಾ ಧರ್ಮಗಳು ಮಾನವೀಯತೆ, ಸಾಮರಸ್ಯದ ಬದುಕಿನ ಭೋಧನೆ ಮಾಡುತ್ತವೆ. ಪ್ರವಾದಿ ಮಹಮ್ಮದ್ ಪೈಗಂಬರ್ ಭೋಧಿಸಿದ ದಯೆ, ಕ್ಷಮೆ, ನ್ಯಾಯ ಹಾಗೂ ಸಮಾನತೆ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ. ಮಾನವ ದ್ವೀಪದಲ್ಲಿ ಬದುಕುತ್ತಿಲ್ಲ ಬದಲಾಗಿ ಒಂದು ಸಮುದಾಯದಲ್ಲಿ ಬದುಕುತ್ತಿದ್ದೇವೆ. ಆದುದರಿಂದ ನನಗೆ ಸಮುದಾಯದ ಅಗತ್ಯವಿದೆ, ಹಂಚಿ ಬದುಕುವ ಅಗತ್ಯವಿದೆ. ನಾವು ಪ್ರತಿಯೊಬ್ಬರು ಗೋಡೆಯಲ್ಲಿರುವ ಒಂದು ಇಟ್ಟಿಗೆಯ ಹಾಗೆ . ಒಂದೊಂದು ಇಟ್ಟಿಗೆಯ ಜೋಡಣೆಯಿಂದ ಒಂದು ಗೋಡೆ ನಿಲ್ಲುತ್ತದೆ. ಜೊತೆಯಾಗಿ ನಿಂತರೆ ಯಾವ ಪಂಥಾಹ್ವಾನಗಳನ್ನು ಗೆಲ್ಲಬಹುದು. ಸಮಾಜದಲ್ಲಿ ಇಂದು ಸತ್ಯ, ವಿಶ್ವಾಸ ಮತ್ತು ಸಹಿಷ್ಣುತೆ ಮಾಯವಾಗಿದ್ದು ಅದನ್ನು ಉಳಿಸುವತ್ತ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಹಿಂದೂ ಧರ್ಮದ ಪರವಾಗಿ ಮಾತನಾಡಿದ ತೊಟ್ಟಂ ಸಮನ್ವಯ ಸರ್ವ ಧರ್ಮ ಸಮಿತಿ ಇದರ ಅಧ್ಯಕ್ಷರಾದ ರಮೇಶ್ ತಿಂಗಳಾಯ ಕೂಡಿ ಬಾಳುವುದು ನಮ್ಮ ಪೂರ್ವಜರು ನಮಗೆ ಹಾಕಿಕೊಟ್ಟ ಸಂಸ್ಕೃತಿಯಾಗಿದೆ. ಇಂದು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಪರಸ್ಪರ ಅಪನಂಬಿಕೆಗಳು ಹುಟ್ಟಿವೆ. ಇದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ತುಂಬಿದ್ದು ಸರ್ವ ಧರ್ಮಿಯರು ಒಟ್ಟಾಗಿ ಸೇರಿದಾಗ ಸಹಬಾಳ್ವೆಯ ಸಂದೇಶ ಸಾರಿದಂತಾಗುತ್ತದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ಅಧ್ಯಕ್ಷರಾದ ಜನಾಬ್ ಇಸಾಕ್ ಪುತ್ತೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಂದು ಧರ್ಮಗ್ರಂಥಗಳು ಇನ್ನೊಬ್ಬರಿಗೆ ನೋವಾಗದಂತೆ ವರ್ತಿಸುವ ಸಂದೇಶವನ್ನು ಸಾರಿದ್ದು ಅದರಂತೆ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಪರಸ್ಪರ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸಗಳು ನಡೆಯಬೇಕು ಎಂದರು.

ಸಮನ್ವಯ ಸರ್ವಧರ್ಮ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ, ಮಲ್ಪೆ ಸಿಎಸ್ಐ ಚರ್ಚಿನ ಪಾಸ್ಟರ್ ವಂ|ಎಡ್ವಿನ್ ಸೋನ್ಸ್, ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷರಾದ ಗಣೇಶ್ ನೆರ್ಗಿ ಉಪಸ್ಥಿತರಿದ್ದರು.

ಮಲ್ಪೆ ಅಬುಬಕ್ಕರ್ ಜಾಮೀಯಾ ಮಸೀದಿ ಇಮಾಮ್ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಇದರ ಅಧ್ಯಕ್ಷರಾದ ಜನಾಬ್ ಬಿ ಸಿರಾಜ್ ಅಹ್ಮದ್ ಧನ್ಯವಾದವಿತ್ತರು. ಜಿ ಶುಐಬ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments