Home Mangalorean News Kannada News ಇ-ಆಟೋ ಸಂಚಾರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಮನವಿ: ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್

ಇ-ಆಟೋ ಸಂಚಾರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಮನವಿ: ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್

Spread the love

ಇ-ಆಟೋ ಸಂಚಾರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಮನವಿ: ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್
 
ಮಂಗಳೂರು: ಮಂಗಳೂರು ನಗರದಲ್ಲಿ ಇ ಆಟೋರಿಕ್ಷಾ ಸಾಕಷ್ಟು ಸಂಖ್ಯೆಯಲ್ಲಿದ್ದು, ಇದರಿಂದಾಗಿ ಹಾಲಿ ಆಟೋರಿಕ್ಷಾಗಳ ಬಾಡಿಗೆಗೆ ತೊಂದರೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಮಾತ್ರವಲ್ಲ ಇ ಆಟೋಗಳ ಓಡಾಟಕ್ಕೆ ಹಾಲಿ ಆಟೋ ರಿಕ್ಷಾ ಚಾಲಕರು ಅವಕಾಶ ನೀಡುವುದಿಲ್ಲ ಎಂಬ ದೂರೂ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಉಭಯ ಆಟೋರಿಕ್ಷಾಗಳ ಬಿಕ್ಕಟ್ಟು ಶಮನಕ್ಕೆ ಸಭೆ ಕರೆದು ಇತ್ಯರ್ಥಪಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದರು.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ದೂರಿಗೆ ಸ್ಪಂದಿಸಿ ಅವರು ಮಾತನಾಡಿದರು.

ಫೋನ್-ಇನ್ ಕಾರ್ಯಕ್ರಮದಲ್ಲೂ ಈ ಬಗ್ಗೆ ಪ್ರತ್ಯೇಕ ದೂರು ಕೇಳಿಬಂದಿದೆ. 1997ರಲ್ಲಿ ಆರ್‌ಟಿಎ ಸಭೆ ನಡೆಸಿದಾಗ ಮಂಗಳೂರಿನ ಜನಸಂಖ್ಯೆ 1.97 ಲಕ್ಷ ಇತ್ತು. ಈಗ ಇದು 7-8 ಲಕ್ಷ ತಲುಪಿದೆ. ಹಾಗಾಗಿ ಆಟೋರಿಕ್ಷಾಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಕೇಂದ್ರ ಸರಕಾರ ಹಾಗೂ ಹಸಿರುಪೀಠದ ಪರಿಸರ ಮಾಲಿನ್ಯ ತಡೆಗಟ್ಟುವ ಆದೇಶ ಹಿನ್ನೆಲೆಯಲ್ಲಿ ಇ ಆಟೋಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಹಿಂದಿನ ಜಿಲ್ಲಾಧಿಕಾರಿಗಳು ಹೆಚ್ಚಿನ ಇ ಆಟೋಗಳ ಸಂಚಾರಕ್ಕೆ ಮಿತಿ ವಿಧಿಸಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಪರಿಸರಸ್ನೇಹಿ ಆಟೋಗಳಿಗೆ ನಿರ್ಬಂಧ ವಿಧಿಸುವುದು ಬರುವುದಿಲ್ಲ. ಹಾಗಾಗಿ ಹೊಂದಾಣಿಕೆಯಿಂದ ಈ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕಾಗಿದೆ. ಈ ಕುರಿತು ಶೀಘ್ರವೇ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳುವ ಅಗತ್ಯತೆಯನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಲಾಗಿದೆ ಎಂದರು.

ಮಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ಹಾಗೂ ವಾಹನಗಳ ಪಾರ್ಕಿಂಗ್ ಉಲ್ಲಂಘನೆಗೆ ಸಂಬಂಧಿಸಿ ಸೂಕ್ತ ಕಾರ್ಯಾಚರಣೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದರು.

ನಗರದ ಕಂಕನಾಡಿ, ಕೇಂದ್ರ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಸ್ತೆ ಮೇಲೆ ಬೀದಿಬದಿ ವ್ಯಾಪಾರ ನಡೆಯುತ್ತಿದೆ. ತಳ್ಳು ಗಾಡಿಗಳ ವ್ಯಾಪಾರಸ್ಥರು ಅಲ್ಲೇ ಪಕ್ಕದಲ್ಲಿ ಕುರ್ಚಿ ಹಾಕಿ ಕುಳಿತುಕೊಳ್ಳುತ್ತಾರೆ. ಇದರಿಂದ ಪಾದಚಾರಿ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರೊಬ್ಬರು ಆಗ್ರಹಿಸಿದರು.

ನಗರದ ಮಾರ್ನಮಿಕಟ್ಟೆ, ನಂದಿಗುಡ್ಡ ಸೇರಿದಂತೆ ಹಲವು ರಸ್ತೆಗಳ ಬದಿಯಲ್ಲೇ ಗ್ಯಾರೇಜ್ ರೀತಿಯ ವ್ಯವಹಾರ ನಡೆಯುತ್ತಿದ್ದು, ಸಾಕಷ್ಟು ವಾಹನಗಳು ರಸ್ತೆಯುದ್ದಕ್ಕೂ ರಿಪೇರಿಗಾಗಿ ನಿಲ್ಲಿಸಲಾಗುತ್ತದೆ. ಇದರಿಂದ ಪಾದಾಚಾರಿಗಳು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಪೊಲೀಸ್ ಆಯುಕ್ತರು ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದರು.

ಕಾಟಿಪಳ್ಳ, ಬೈಕಂಪಾಡಿ, ಮೂಡುಬಿದಿರೆ, ಕಡಂದಲೆ, ಮೂಲ್ಕಿ ಮತ್ತಿತರ ಕಡೆಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಮಕ್ಕಳು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ. ಅತ್ತಾವರದಲ್ಲಿ ನೋ ಎಂಟ್ರಿ ಫಲಕ ನಾಪತ್ತೆಯಾಗಿದೆ. ಟಿ.ವಿ.ರಮಣ ಪೈ ಹಾಲ್‌ನಿಂದ ಕಾರ್‌ಸ್ಟ್ರೀಟ್‌ಗೆ ಹೋಗುವಲ್ಲಿ 90 ಡಿಗ್ರಿ ತಿರುವು ಇದ್ದು, ಆಗಾಗ ಅಪಘಾತ ಸಂಭವಿಸುತ್ತಿರುತ್ತದೆ. ಮೂಲ್ಕಿ ಬಸ್ಟೇಂಡ್‌ನಲ್ಲಿ ವಾಹನ ದಟ್ಟಣೆಯಿಂದಾಗಿ ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ ಎಂಬ ಹಲವು ದೂರುಗಳು ಫೋನ್‌ಇನ್ ಮೂಲಕ ಸಾರ್ವಜನಿಕರಿಂದ ವ್ಯಕ್ತವಾಯಿತು.

ಇವುಗಳಿಗೆಲ್ಲ ಉತ್ತರಿಸಿದ ಕಮಿಷನರ್ ಅನುಪಮ್ ಅಗರ್‌ವಾಲ್, ಮಂಗಳೂರಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು. ಫುಟ್‌ಪಾತ್ ಅತಿಕ್ರಮಣ, ನೋ ಪಾರ್ಕಿಂಗ್‌ಗಳಲ್ಲಿ ನಿಲುಗಡೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ವಾಹನ ದಟ್ಟಣೆ ಇರುವಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಕಾರುಗಳಲ್ಲಿ ಟಿಂಟ್ ಗ್ಲಾಸ್ ಅಳವಡಿಕೆಗೆ ಅವಕಾಶ ಇಲ್ಲ. ಅವುಗಳ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುವುದು. ಟಿಂಟ್ ಗ್ಲಾಸ್ ಕಾರುಗಳಿಗೆ ದಂಡ ವಿಧಿಸುವುದು ಮಾತ್ರವಲ್ಲ ಟಿಂಟ್ ಗ್ಲಾಸ್ ಸ್ಥಳದಲ್ಲೇ ತೆರವುಗೊಳಿಸಲು ಸೂಚಿಸಲಾಗುವುದು ಎಂದರು.

ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್, ಸಂಚಾರಿ ಎಸಿಪಿ ನಝ್ಮಾ ಫರೂಕಿ ಉಪಸ್ಥಿತರಿದ್ದರು.


Spread the love

Exit mobile version