ಈಶಾ ಫೌಂಡೇಶನ್ ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗಿ
ಕೊಯಮತ್ತೂರು: ಮಹಾಶಿವರಾತ್ರಿ ಪ್ರಯುಕ್ತ ಈಶಾ ಫೌಂಡೇಶನ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪಾಲ್ಗೊಂಡಿದ್ದಾರೆ.
ಈಶಾ ಫೌಂಡೇಶನ್ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ದಕ್ಷಿಣದ ಕೈಲಾಸ ಎಂದು ಕರೆಯಲ್ಪಡುವ ವೆಳ್ಳಿಯಂಗಿರಿ ತಪ್ಪಲಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ ನಡೆದ ಅಹೋರಾತ್ರಿ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಿ, ಧ್ಯಾನ ಲಿಂಗ ಮತ್ತು ಲಿಂಗ ಭೈರವಿಗೆ ವಿಶೇಷ ಪ್ರಾರ್ಥನೆ ಕೂಡ ಸಲ್ಲಿಸಿದ್ದಾರೆ. ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿವಭಕ್ತರು ಪಾಲ್ಗೊಂಡಿದ್ದ ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, ಒರಿಸ್ಸಾ ರಾಜ್ಯಪಾಲ ಡಾ.ಹರಿಬಾಬು ಕಂಬಂಪಾಟಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರ ಖಾತೆಯ ರಾಜ್ಯ ಸಚಿವರಾದ ಎಲ್. ಮುರುಗನ್ ಭಾಗವಹಿಸಿದ್ದರು.
ಈ ವೇಳೆ ಸಂಸದ ಕ್ಯಾ. ಚೌಟ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
” ಈಶ ಫೌಂಡೇಶನ್ನಲ್ಲಿ ಮಹಾ ಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸುವುದು ನಿಜವಾಗಿಯೂ ಅಭೂತಪೂರ್ವ ಆಧ್ಯಾತ್ಮಿಕ ಅನುಭವವನ್ನು ನೀಡಿದೆ. ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ಮಾತ್ರವಲ್ಲ ಸದ್ಗುರು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು ಖುಷಿ ತಂದಿದೆ. ಸೌಂಡ್ಸ್ ಆಫ್ ಈಶ , ಪ್ರಾಜೆಕ್ಟ್ ಸಂಸ್ಕೃತಿ, ಈಶಾ ಗುರುಕುಲಂನ ವಿದ್ಯಾರ್ಥಿಗಳ , ಅಜಯ್ – ಅತುಲ್ ಮತ್ತು ಇತರ ಪ್ರಸಿದ್ಧ ಪ್ರದರ್ಶಕರಿಂದ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯರಾತ್ರಿ ಮಹಾಮಂತ್ರ ದೀಕ್ಷೆ, ಶಂಭೋ ಧ್ಯಾನ ಶಿವರಾತ್ರಿ ಜಾಗರಣೆಯಲ್ಲಿ ಚೈತನ್ಯಶೀಲರಾಗುವಂತೆ ಮಾಡಿದೆ.
ಸದ್ಗುರು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಯೋಗಕೇಂದ್ರವು ಸನಾತನವಾದ ಹಿಂದೂ ಧರ್ಮದ ವಿಚಾರಗಳನ್ನು ಜಗತ್ತಿನ ಮೂಲೆಗೆ ತಲುಪಿಸುವಲ್ಲಿ ಮಹತ್ತರವಾದ ಕೆಲಸ ಮಾಡುತ್ತಿದೆ ಹಾಗೂ ಮತಾಂತರದ ವಿರುದ್ಧ ಜಾಗೃತಿ ಮೂಡಿಸಿ ಧರ್ಮ ಶಿಕ್ಷಣವನ್ನು ನೀಡುತ್ತಿದೆ. ಜನರಿಗೆ ಯೋಗ ಮತ್ತು ಆಧ್ಯಾತ್ಮಿಕತೆಯ ಮಹತ್ವನ್ನು ಸಾರುತ್ತಿದೆ” ಎಂದು ಕ್ಯಾ. ಚೌಟ ಅವರು ಹೇಳಿದ್ದಾರೆ.