ಉಡುಪಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

Spread the love

ಉಡುಪಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಉಡುಪಿ: 133 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಯಾವ ಉದ್ದೇಶಕ್ಕಾಗಿ ಸ್ಥಾಪನೆಗೊಂಡಿತ್ತೋ ಆ ಕಲ್ಪನೆಗೆ ಅಭದ್ರತೆಯ ಮುಸುಕು ಆವರಿಸಿದೆ. ಜಾತ್ಯಾತೀತ ಚಿಂತನೆಯಲ್ಲಿ ನಂಬಿಕೆ ಇಲ್ಲದ ಆಡಳಿತರೂಢ ಬಿಜೆಪಿ ಸಮಾಜವನ್ನು ವಿಭಜನೆ ಮಾಡುವತ್ತ ಪ್ರೇರೇಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾನ್ಯ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್‍ರವರು ಹೇಳಿದರು.

ಕಾಂಗ್ರೆಸ್ ಪಕ್ಷ ಪ್ರಥಮವಾಗಿ ಸ್ವಾತಂತ್ರ್ಯಕ್ಕಾಗಿ ಹೊರಾಡಿದರೆ ಸ್ವಾತಂತ್ರ್ಯ ಗಳಿಸಿದ ನಂತರ ಭದ್ರ ಬುನಾದಿಯೊಂದಿಗೆ ದೇಶವನ್ನು ಕಟ್ಟುವ ಕಾರ್ಯಕ್ಕೆ ತೊಡಗಿಸಿಕೊಂಡಿತು. ಇಂದು ಪಕ್ಷದ ಮುಖಂಡರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಆದರೆ ಸ್ವಾತಂತ್ರ್ಯ ಸಿಕ್ಕಿದ ನಂತರ ಹುಟ್ಟಿಕೊಂಡ ಪಕ್ಷಗಳು ಸ್ವಾರ್ಥದೊಂದಿಗೆ ಹುಟ್ಟಿದ ಪಕ್ಷಗಳಾಗಿವೆ. ಅಭಿವೃದ್ಧಿಯೊಂದಿಗೆ ಸಹಬಾಳ್ವೆ, ಸಹಚಿಂತನೆ, ಸಮಾನತೆಯನ್ನು ಕಂಡುಕೊಂಡ ಭಾರತ ದೇಶದಲ್ಲಿ ಇಂದು ವೈಷಮ್ಯವನ್ನು ಬಿತ್ತುವ, ಅನಾಗರಿಕ ಹೇಳಿಕೆಗಳನ್ನು ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಹಬಾಳ್ವೆ ಚಿಂತನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದರು.

ಸಮಾರಂಭದಲ್ಲಿ ಪಕ್ಷದ ಮುಖಂಡರಾದ ಜನಾರ್ದನ ತೋನ್ಸೆ, ಕೃಷ್ಣರಾಜ ಸರಳಾಯ, ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ಸತೀಶ್ ಅಮೀನ್ ಪಡುಕರೆ, ಪ್ರಖ್ಯಾತ್ ಶೆಟ್ಟಿ, ಶ್ಯಾಮಲ ಭಂಡಾರಿ, ಜಯಶ್ರೀ ಕೃಷ್ಣರಾಜ್, ಶಂಕರ್ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ಕೀರ್ತಿ ಶೆಟ್ಟಿ, ಯತೀಶ್ ಕರ್ಕೆರ, ಹಬೀಬ್ ಅಲಿ, ಶಶಿಧರ ಶೆಟ್ಟಿ ಎಲ್ಲೂರು, ಇಬ್ರಾಹಿಂ ಕಾಪು, ಸುಂದರ್ ಶೆಣೈ ಕೋಟಾ, ಕೃಷ್ಣಪ್ಪ ಪೂಜಾರಿ, ಪೃಥ್ವಿರಾಜ್ ಶೆಟ್ಟಿ, ವಿಶ್ವಾಸ್ ಅಮೀನ್, ಪ್ರಶಾಂತ್ ಪೂಜಾರಿ, ಸಾಯಿರಾಜ್, ಆಕಾಶ್ ರಾವ್, ಸುಜಯ ಪೂಜಾರಿ, ಗಣೇಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು. ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.


Spread the love