ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಗ್ರಹಣ ಮತ್ತು ಇಫ್ತಾರ್ ಕೂಟ
ಉಡುಪಿ: ಅಧಿಕಾರಕ್ಕಾಗಿ ಕೆಲವರು ನಡೆಸುವ ಜಾತಿ ಧರ್ಮದ ಕೆಟ್ಟ ರಾಜಕಾರಣಕ್ಕೆ ಬಲಿಯಾಗುವುದು ಎಲ್ಲರನ್ನು ಒಳಗೊಂಡ ಸಮಾಜವೇ ಆಗಿದೆ. ಸಮಾಜದ ಎಲ್ಲರೂ ಮನುಷ್ಯರ ಮನಸ್ಸನ್ನು ಒಡೆದು ಆಳುವ ರಾಜಕೀಯ ಷಡ್ಯಂತ್ರದ ವಿರುದ್ಧ ಜಾಗ್ರತರಾಗಬೇಕಾಗಿದೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ ಸೊರಕೆಯವರು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಪದಗ್ರಹಣ ಕಾರ್ಯಕ್ರಮ ಮತ್ತು ಸೌಹಾರ್ದ ಇಫ್ತಾರ್ ಕೂಟ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷ ಶರ್ಪುದ್ದೀನ್ ಶೇಖ್ ಮಾತನಾಡಿ ” ಇಲ್ಲಿನ ಎಲ್ಲ ಸಮುದಾಯಗಳು ದೇಶ ಮತ್ತು ರಾಜ್ಯಕ್ಕೆ ಕಾಲಕಾಲಕ್ಕೆ ಉನ್ನತ ಕೊಡುಗೆಗಳನ್ನು ನೀಡಿದ ವ್ಯಕ್ತಿತ್ವಗಳನ್ನು ಹೊಂದಿರುವ ಸಮುದಾಯಗಳಾಗಿವೆ. ಇಂದಿಗೂ ಸಮುದಾಯಗಳ ನಡುವೆ ಕೊಡುಕೊಳ್ಳುವ ಮತ್ತು ಕೂಡಿ ಬಾಳುವ ಮನಸ್ಥಿತಿ ಇದೆ. ಅಲ್ಪಸಂಖ್ಯಾತರ ಘಟಕವು ಸಮಾಜವನ್ನು ಬೆಸೆಯುವ ಕಾರ್ಯ ಮಾಡಲಿದೆ “ಎಂದು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೌಲಾನಾ ಇರ್ಷಾದ್ ಸಅದಿ ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ಲೇಖಕ ಮುಷ್ತಾಕ್ ಹೆನ್ನಾಬೈಲ್, ಹರೀಶ್ ಕಿಣಿ, ಅಮೃತ್ ಶೆಣೈ, ಅಶೋಕ್ ಕುಮಾರ್ ಕೊಡವೂರ್ ಅಧ್ಯಕ್ಷತೆ ವಹಿಸಿದ್ದರು. ನಾಯಕರಾದ ಪ್ರಸಾದ್ ರಾಜ್ ಕಾಂಚನ್, ಫಾದರ್ ವಿಲಿಯಮ್ ಮಾರ್ಟಿಸ್, ಮುಶ್ತಾಕ್ ಅಹಮದ್ ಬೆಳ್ವೆ, ನಖ್ವಾ ಯಾಹ್ಯ ,ಮುಹಮ್ಮದ್ ಮೌಲಾ, ರಮೇಶ್ ಕಾಂಚನ್, ನವೀನ್ ಚಂದ್ರ ಶೆಟ್ಟಿ, ಗೀತಾ ವಾಗ್ಳೆ ಮುಂತಾದ ಗಣ್ಯರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಡಾ. ಫಾರೂಕ್ ಚಂದ್ರನಗರ್ ಮತ್ತು ನಾಗೇಶ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು. ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ರೋಷನ್ ರೋಡ್ರಿಗಸ್ ಧನ್ಯವಾದ ಸಮರ್ಪಿಸಿದರು. ರಮೀಜ್ ಹುಸೇನ್, ಹಮೀದ್ ಯೂಸೂಫ್ ಸಹಕರಿಸಿದರು..