ಉಡುಪಿ ನಗರಸಭೆಯಲ್ಲಿ ಸ್ವಚ್ಚ ಆಡಳಿತಕ್ಕಾಗಿ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಿ ; ಪ್ರಮೋದ್ ಮಧ್ವರಾಜ್

Spread the love

ಉಡುಪಿ ನಗರಸಭೆಯಲ್ಲಿ ಸ್ವಚ್ಚ ಆಡಳಿತಕ್ಕಾಗಿ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಿ ; ಪ್ರಮೋದ್ ಮಧ್ವರಾಜ್

ಉಡುಪಿ: ಮುಂಬರುವ ನಗರಸಭಾ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ವಾರ್ಡ್ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿ ಸಮರ್ಥ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ನಗರಸಭಾ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ಹಗರಣಗಳಿಲ್ಲದೆ ಸ್ವಚ್ಚ ಆಡಳಿತ ನೀಡಿದೆ. ಪಕ್ಷ ಬೇಧವಿಲ್ಲದೆ ಎಲ್ಲಾ ವಾಡ್ಗಳಲ್ಲಿಯೂ ಕೋಟ್ಯಾಂತರ ರೂಪಾಯಿ ಅನುದಾನದೊಂದಿಗೆ ಅಭಿವೃದ್ಧಿಗೊಳಿಸಿದೆ. ಉಡುಪಿಯ ಇತಿಹಾಸದಲ್ಲಿಯೇ ಇಷ್ಟು ಗರಿಷ್ಠ ಅಭಿವೃದ್ಧಿ ಕೆಲಸಗಳು ಯಾವತ್ತೂ ಆಗಿಲ್ಲ ಎಂದು ಕಾಂಗ್ರೆಸ್ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ನಗರಸಭಾ ಚುನಾವಣಾ ಪೂರ್ವ ತಯಾರಿ ಸಭೆಯಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ರವರು ಹೇಳಿದರು.

ನಗರಸಭೆಯ ಬಿಜೆಪಿಯ ಹಿಂದಿನ ಆಡಳಿತದಲ್ಲಿ 8000 ನೀರಿನ ಸಂಪರ್ಕಗಳು ಇದ್ದರೆ ಈಗ ಕಾಂಗ್ರೆಸ್ ಆಡಳಿತವು 18500 ಸಂಪರ್ಕಗಳ ಏರಿಕೆಯೊಂದಿಗೆ ಜನರಿಗೆ ನೀರಿನ ಸೌಲಭ್ಯವನ್ನು ಒದಗಿಸಿದೆ. ಕಳೆದ ಐದು ವರ್ಷಗಳಲ್ಲಿ ಉಡುಪಿ ನಗರಸಭೆಗೆ 503 ಕೋಟಿ ಅನುದಾನವನ್ನು ರಾಜ್ಯ ಸರಕಾರದಿಂದ ತಂದು ಸಮಗ್ರ ಅಭಿವೃದ್ಧಿಗೊಳಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇರುವುದರಿಂದ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ಬಂದಾಗ ಮಾತ್ರ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿಗೊಳಿಸಲು ಸಾಧ್ಯ. ಈ ಹಿನ್ನಲೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಇನ್ನೊಮ್ಮೆ ಬೆಂಬಲಸುವುದರಲ್ಲಿ ಸಂಶಯವಿಲ್ಲ ಎಂದರು. ಬಿಜೆಪಿಯ ಈ ಹಿಂದಿನ ಘೋಷಣೆ ಮಿಷನ್ – 30 ಇದ್ದದ್ದು ಈಗ 15ಕ್ಕೆ ಬಂದಿದೆ ಕಾರ್ಯಕರ್ತರು ಇದನ್ನು 10ಕ್ಕೆ ಇಳಿಸಲು ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆಯವರು ಮಾತನಾಡುತ್ತಾ ಮಾಜಿ ಸಚಿವರು ತಮ್ಮ ಆಡಳಿತಾವಧಿಯಲ್ಲಿ ನಗರಸಭೆಗೆ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿಗೊಳಿಸಿ ಉಡುಪಿ ನಗರಸಭೆಯನ್ನು ರಾಜ್ಯಕ್ಕೆ ಮಾದರಿಯಾಗಿಸಿದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಉಡುಪಿ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಗೆಲ್ಲಿಸಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ಚುನಾವಣಾ ಪೂರ್ವ ತಯಾರಿಯಾಗಿ ಪ್ರಣಾಳಿಕ ಸಮಿತಿ, ವೀಕ್ಷಕರ ಸಮಿತಿ ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಹಾಗೂ ಪಕ್ಷದ ಮುಖಂಡರುಗಳಾದ ಅಶೋಕ್ ಕುಮಾರ್ ಕೊಡವೂರು, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೆರೋನಿಕಾ ಕರ್ನೇಲಿಯೋ, ಅಮೃತ್ ಶೆಣೈ, ಭಾಸ್ಕರ್ ರಾವ್ ಕಿದಿಯೂರು, ಕುಶಲ್ ಶೆಟ್ಟಿ, ಶಬ್ಬೀರ್ ಅಹ್ಮದ್, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಹರೀಶ್ ಕಿಣಿ, ದಿವಾಕರ ಕುಂದರ್, ಲಕ್ಷ್ಮಣ ಶೆಣೈ, ಜ್ಯೋತಿ ಹೆಬ್ಬಾರ್, ಪ್ರಥ್ವಿರಾಜ್ ಶೆಟ್ಟಿ, ಗೋಪಾಲ್, ಅಣ್ಣಯ್ಯ ಶೇರಿಗಾರ್, ಮೀನಾಕ್ಷಿ ಮಾಧವ ಬನ್ನಂಜೆ, ಸಂಧ್ಯಾ ತಿಲಕ್ರಾಜ್, ಚಂದ್ರಿಕಾ ಶೆಟ್ಟಿ, ಅನಂತ್ ನಾಯ್ಕ್, ಸುಧಾಕರ ಶೆಟ್ಟಿ ಮೈರ್ಮಾಡಿ, ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


Spread the love