ಉಡುಪಿ ಬಿಜೆಪಿ ನಗರಸಭಾ ಸದಸ್ಯ, ಸಹಚರರಿಂದ ಮಹಿಳೆ ಮೇಲೆ ಹಲ್ಲೆ – ದೂರು ದಾಖಲು

Spread the love

ಉಡುಪಿ ಬಿಜೆಪಿ ನಗರಸಭಾ ಸದಸ್ಯ, ಸಹಚರರಿಂದ ಮಹಿಳೆ ಮೇಲೆ ಹಲ್ಲೆ – ದೂರು ದಾಖಲು

ಉಡುಪಿ: ಬಿಜೆಪಿ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಪತ್ನಿ ಹಾಗೂ ಸಹಚರರಿಂದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆನಡೆದಿದೆ ಎಂದು ಆರೋಪಿಸಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಕ್ಕುಂಜೆ ನಿವಾಸಿ ಸವಿತಾ ಹಾಗೂ ಬಾಲಕೃಷ್ಣ ಶೆಟ್ಟಿರವರಿಗೂ ಸುಮಾರು 4 ವರ್ಷಗಳಿಂದ ಸವಿತಾರ ಮನೆ ಜಾಗ ಹಾಗೂ ಗಂಡನ ಗ್ಯಾರೇಜ್ ವಿಚಾರದಲ್ಲಿ ತಕರಾರು ಇದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.

ಶನಿವಾರ ಬೆಳಿಗ್ಗೆ 10:30 ಗಂಟೆಗೆ ಹಾಗೂ ಮದ್ಯಾಹ್ನ 3:30 ಗಂಟೆಗೆ 2 ಬಾರಿ ಪ್ರಕರಣದ ಬಾಲಕೃಷ್ಣ ಶೆಟ್ಟಿ ತನ್ನ ಇತರ ಸಹಚರರೊಂದಿಗೆ ಸವಿತಾ ಅವರ ಗಂಡನ ಗ್ಯಾರೇಜ್ ನ ಬಳಿ ಹೋಗಿ ಮಣಿಪಾಲ ಠಾಣೆಯಲ್ಲಿ ದಾಖಲಿಸಿದ ಕೇಸ್ ನ್ನು ವಾಪಾಸು ಪಡೆಯುವಂತೆ ಇಲ್ಲದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿರುತ್ತಾರೆ.

ಸಂಜೆ ಸುಮಾರು 7:30 ಗಂಟೆಗೆ ಸವಿತಾ ಹಾಗೂ ಅವರ ಗಂಡ ಮತ್ತು ಮಕ್ಕಳು ಕಕ್ಕುಂಜೆ ನಾರಾಯಣ ನಗರದಲ್ಲಿರುವ ಗ್ಯಾರೇಜ್ ನ ಬಳಿ ಹೋಗಿದ್ದಾಗ ಬಾಲಕೃಷ್ಣಶೆಟ್ಟಿ ರವರು ಇತರ 29 ಜನರೊಂದಿಗೆ ಸವಿತಾ ಅವರ ಗಂಡನ ಗ್ಯಾರೇಜ್ ಬಳಿ ಸ್ಟೀಲ್ ರಾಡ್ ನ್ನು ಹಿಡಿದುಕೊಂಡು ಅಕ್ರಮ ಕೂಟ ಸೇರಿ ನಿಂತುಕೊಂಡಿದ್ದು, ಸವಿತಾರ ಗಂಡ ಗ್ಯಾರೇಜ್ ನ ಬಳಿ ನಿಂತ ವಿಚಾರದಲ್ಲಿ ಪ್ರಶ್ನಿಸಿದಾಗ ನಾವು ಗ್ಯಾರೇಜ್ ಕೀಳಲು ನಿಂತುಕೊಂಡಿದ್ದೇವೆ. ನೀನು ಏನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಸವಿತಾರ ಗಂಡನನ್ನು ದೂಡಿದ್ದು, ತಡೆಯಲು ಹೋದ ಸವಿತಾರಿಗೆ ಆರೋಪಿತರಾದ ಬಾಲಕೃಷ್ಣ ಶೆಟ್ಟಿ, ರಕ್ಷಿತಾ ಶೆಟ್ಟಿ, ರಾಜು, ಗಿರೀಶ್ ಎಂಬುವವರು ಸ್ಟೀಲ್ ರಾಡ್ ನಿಂದ ದೂರುದಾರರಿಗೆ ಹಲ್ಲೆ ನಡೆಸಿ ಗಿರೀಶನು ಸೀರೆ ಸೆರಗು ಎಳೆದು ಬಲಕೆನ್ನೆಗೆ ಹೊಡೆದಿರುತ್ತಾರೆ, ಅರುಣನು ಕೈಯಿಂದ ಎಳೆದು ಕೆಳಗೆ ಬೀಳಿಸಿ ಕಾಲಿನಿಂದ ತುಳಿದಿದ್ದು ಹಾಗೂ ಬಿಡಿಸಲು ಬಂದ ದೂರುದಾರರ ಗಂಡನಿಗೂ ಆರೋಪಿ ರಾಜು ಸ್ಟೀಲ್ ರಾಡ್ ನಿಂದ ಹಲ್ಲೆ ನಡೆಸಿರುತ್ತಾರೆ.

ಸವಿತಾ ಹಾಗೂ ಅವರ ಗಂಡ ಆಸ್ಪತ್ರೆಗೆ ಸೇರಲು ಸ್ಕೂಟರ್ ನಲ್ಲಿ ಹೋಗುವಾಗ ಕೂಡಾ ಆರೋಪಿತರು ಸ್ಕೂಟರ್, ಬೈಕ್ ಹಾಗೂ ಕಾರಿನಲ್ಲಿ ದೂರುದಾರರು ಹೋಗುತ್ತಿದ್ದ ಸ್ಕೂಟರ್ ನ್ನು ಹಿಂಬಾಲಿಸಿ ಆಸ್ಪತ್ರೆಗೆ ಹೋಗಬಾರದೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ಮಹಿಳಾ ಠಾಣೆ ಯಲ್ಲಿ ಅ.ಕ್ರ: 27/2024 ಕಲಂ: 143,144, 147, 148, 323, 324, 354 (ಬಿ), 341, 506 ಜೊತೆಗೆ 149 ಐ.ಪಿ.ಸಿಪ್ರಕರಣ ದಾಖಲಾಗಿದೆ.


Spread the love