ಕರ್ನಾಟಕ ಸರ್ಕಾರ ಜನ ವಿರೋಧಿಯಾಗಿದ್ದು, ಜನರ ಪ್ರೀತಿಯನ್ನು ಕಳೆದುಕೊಂಡಿದೆ: ಅಣ್ಣಾಮಲೈ
ಉಡುಪಿ: ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಬಳಿಕ ಗ್ಯಾಸ್ ಬಳಕೆ ಜಾಸ್ತಿ ಆಗುತ್ತಿದೆ ಅಲ್ಲದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ದರ ಏರಿಕೆಯಾಗಿದೆ ಆದ್ದರಿಂದ ದರ ಏರಿಕೆ ಅನಿವಾರ್ಯ ಎಂದು ಬಿಜೆಪಿ ಮುಖಂಡ ಕೆ ಅಣ್ಣಾ ಮಲೈ ಹೇಳಿದರು.
ಅವರು ಬುಧವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಗ್ಯಾಸ್ ದರ ಏರಿಕೆ ಬಗ್ಗೆ ಕಾಂಗ್ರೆಸ್ ನಲ್ಲಿ ಆರ್ಥಿಕ ತಜ್ಞರು ಇದ್ದಾರೆ ಅವರು ಹೇಳಬೇಕು ಆದರೆ ಕಾಂಗ್ರೆಸ್ನ ಆರ್ಥಿಕ ತಜ್ಞರು ಸತ್ಯ ಮಾತನಾಡುವುದಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ದರ ಏರಿಕೆಯಾಗಿದೆ, ಅವಾಗ ದರ ಏರಿಕೆ ಅನಿವಾರ್ಯ, ಏರಿಕೆ ಮಾಡದಿದ್ದಲ್ಲಿ ಒಂದು ಹಂತದ ಮೇಲೆ ಆಯಿಲ್ ಮಾರ್ಕೆಟಿಂಗ್ ಕಂಪನಿಗೂ ಕಷ್ಟವಾಗುತ್ತದೆ. ಆಯಿಲ್ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುವಾಗ ಸರ್ಕಾರ ಮಧ್ಯ ಪ್ರವೇಶಿಸಿ ಏರಿಕೆಯಾಗದಂತೆ ನೋಡಿಕೊಂಡಿದ್ದಾರೆ ಎಂದರು.
ಗ್ಯಾಸ್ ಹೊರದೇಶದಿಂದ ಬರಬೇಕು, ನಮ್ಮಲ್ಲಿ ಉತ್ಪಾದನೆ ಇಲ್ಲ ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ಯಾಸ್ ಬಳಕೆ ಜಾಸ್ತಿ ಆಗುತ್ತಿದೆ, ಒಂದು ಹಂತದ ಮೇಲೆ ಆಯಿಲ್ ಮಾರ್ಕೆಟಿಂಗ್ ಕಂಪನಿಯವರಿಗೆ ನಷ್ಟಭರಿಸಲು ಸಾಧ್ಯವಾಗಲ್ಲ ಆದ್ದರಿಂದ ಜನರಿಗೆ ಹೊರೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ. ಈಗಿನ ಬೆಲೆ ಏರಿಕೆ ಪರಿಸ್ಥಿತಿ ತಾತ್ಕಾಲಿಕ ಎಂದು ಭಾವಿಸುತ್ತೇನೆ ಎಂದರು.
2014ರಲ್ಲಿ ಭಾರತದಲ್ಲಿ ಶೇಕಡ 64 ಜನರಲ್ಲಿ ಮಾತ್ರ ಗ್ಯಾಸ್ ಬಳಕೆಯಲ್ಲಿತ್ತು ಆದರೆ ಇವತ್ತು ಶೇಕಡ 100 ಗ್ಯಾಸ್ ಬಳಸುತ್ತಾರೆ ಆದ್ದರಿಂದ ಗ್ಯಾಸ್ ಅನ್ನು ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಕೇಂದ್ರ ಸರಕಾರದ ಜೊತೆಗಿರಬೇಕು. ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರದೀಪ್ ಪುರಿ ಅವರು ವಿಶ್ವಮಟ್ಟದಲ್ಲಿ ಗ್ಯಾಸ್ ಲಭ್ಯತೆ ಹುಡುಕುತ್ತಿದ್ದಾರೆ ಮತ್ತು ಈಗಿನ ಪರಿಸ್ಥಿತಿ ತಾತ್ಕಾಲಿಕ ಎಂದು ನಾನು ನಂಬುತ್ತೇನೆ ಎಂದರು.
ನಾನು ಕರ್ನಾಟಕ ಸರ್ಕಾರವನ್ನು ಹೊರಗಿನಿಂದ ಇದ್ದು ನೋಡುತ್ತಿದ್ದೇನೆ. ಸರ್ಕಾರದಲ್ಲಿರುವ ಒಬ್ಬ ದೊಡ್ಡ ಮನುಷ್ಯ, ಒಬ್ಬ ಪವರ್ ಫುಲ್ ವ್ಯಕ್ತಿ ಸಿಡಿ ಹನಿಟ್ರ್ಯಾಪ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕರ್ನಾಟಕದ ಜನರ ಸಂಸ್ಕೃತಿ, ಶ್ರೀಮಂತವಾಗಿದೆ ಆದರೆ ಇಲ್ಲಿನ ಸರ್ಕಾರ ಜನ ವಿರೋಧಿಯಾಗಿದೆ, ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ ಎನ್ನುವುದನ್ನು ಇಡೀ ದೇಶ ನೋಡುತ್ತಿದೆ. ಬಿಜೆಪಿಯ ಜನಾಕ್ರೋಶ ಯಾತ್ರೆ, ಎಲ್ಲರೂ ಜನರ ಜೊತೆಯಾಗಬೇಕು. ಸದ್ಯಕ್ಕೆ ಕರ್ನಾಟಕದಲ್ಲಿ ಚುನಾವಣೆ ಇಲ್ಲ ಆದರೆ ಜನರ ಪ್ರೀತಿಯನ್ನು ಸರ್ಕಾರ ಕಳೆದುಕೊಂಡಿದೆ. ಜನರು ಪ್ರೀತಿ ಕೊಟ್ಟು ಬಿಜೆಪಿ ಜೊತೆ ಯಾತ್ರೆಯಲ್ಲಿ ಭಾಗವಹಿಸಬೇಕು. ರಾಜ್ಯದಿಂದ ಕಾಂಗ್ರೆಸ್ ತೆಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ವಕ್ಫ್ ಮಸೂದೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅಣ್ಣಾಮಲೈ ವಕ್ಫ್ ಆಕ್ಟ್ ಗೆ ಅನೇಕ ತಿದ್ದುಪಡಿಗಳು ಆಗುತ್ತಲೇ ಬಂದಿದೆ. 1995ರಲ್ಲಿ ಅತಿ ದೊಡ್ಡ ತಿದ್ದುಪಡಿ ಆಗಿದ್ದು, 2013 ಕಾಂಗ್ರೆಸ್ ಸರಕಾರದಲ್ಲಿ ತಿದ್ದುಪಡಿ ದೊಡ್ಡ ಮಟ್ಟದಲ್ಲಿ ಆಗಿತ್ತು. 2025 ಅತಿ ದೊಡ್ಡ ಬದಲಾವಣೆ ತರಲಾಗಿದೆ. ಪ್ರಜಾಪ್ರಭುತ್ವದಲ್ಲಿ ತಿದ್ದುಪಡಿ ಆಗುತ್ತದೆ, ಜನರು ಅರ್ಥ ಮಾಡಿಕೊಳ್ಳಬೇಕು. ವಕ್ಫ್ ದೇಶದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿದೆ. 39 ಲಕ್ಷ ಎಕರೆ ಭೂಮಿಯನ್ನು ಹೊಂದಿದ್ದು, ರೈಲ್ವೆ ಇಲಾಖೆ ಕೈಯಲ್ಲಿ ಕೇವಲ 52 ಲಕ್ಷ ಎಕರೆ ಇರುವುದು. ಕಳೆದ ಹತ್ತು ವರ್ಷದಲ್ಲಿ 21 ಲಕ್ಷ ಎಕರೆ ಸೇರಲ್ಪಟ್ಟಿದೆ. 2013ವರೆಗೆ 18 ಲಕ್ಷ ಎಕರೆ ಇತ್ತು ಯಾರು ಕೂಡ ಬಂದು ಇದು ನನ್ನ ಭೂಮಿ ಎಂದು ಹೇಳುವಂತಿಲ್ಲ. ಇದರಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಏನು ಅನ್ನುವುದು ಮುಖ್ಯ. ಬಹಳ ಅದ್ಭುತವಾದ ಬದಲಾವಣೆಯೊಂದಿಗೆ ಜಾರಿ ಮಾಡಿದ್ದಾರೆ.
ಇಸ್ಲಾಂ ಧರ್ಮದಲ್ಲಿರುವ ಅಕ್ಕಂದಿರಿಗೆ ತಾಯಂದಿರಿಗೆ ಅನುಕೂಲವಾಗಲಿದ್ದು, ಬಡ ಮುಸ್ಲಿಮರಿಗೆ ಇದರಿಂದ ಅನುಕೂಲವಾಗಲಿದೆ. ಶಿಯಾ ಸುನ್ನಿ ಮುಸ್ಲಿಮರು ಮಾತ್ರ ಪರಿಗಣನೆಯಲ್ಲಿದ್ದರು. ಇದರಲ್ಲಿ ಅಘಾಖಾನ್ ಮುಸ್ಲಿಂ ,ಬೋರ ಮುಸ್ಲಿಮರಿಗೂ ಅವಕಾಶ ಸಿಕ್ಕಿದೆ. ಇದು ಸಂವಿಧಾನ ವಿರೋಧಿ ಅಲ್ಲ. ತಮಿಳುನಾಡಿನಲ್ಲಿ ಡಿಎಂಕೆ ನ್ಯಾಯಾಲಯದ ಮೊರೆ ಹೋಗಿದ್ದು ಎಲ್ಲಾ ಕೇಸುಗಳು ಡಿಸ್ಮಿಸ್ ಆಗಲಿವೆ ಎಂದರು.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ನಾವೆಲ್ಲಾ ರಾಷ್ಟ್ರೀಯ ಪಕ್ಷದ ಸದಸ್ಯರಾಗಿದ್ದು ನಾನೊಬ್ಬ ಕಾರ್ಯಕರ್ತ ಪಕ್ಷ ನನಗೆ ಒಂದು ಜವಾಬ್ದಾರಿ ಕೊಟ್ಟಿತ್ತು. ಇನ್ನೊಂದು ಜವಾಬ್ದಾರಿ ಕೊಟ್ಟರೂ, ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಕೆಲಸ ಮಾಡುವುದು ಮಾತ್ರ ನನ್ನ ಕರ್ಮ, ಏನೇ ಅವಕಾಶಕೊಟ್ಟರು ಕೆಲಸ ಮಾಡುತ್ತೇನೆ.
ತಮಿಳುನಾಡಿನಲ್ಲಿ ಚುನಾವಣೆ ಬರುತಿದ್ದು ಗೃಹ ಮಂತ್ರಿಯವರನ್ನು ತಮಿಳುನಾಡು ವಿಪಕ್ಷ ನಾಯಕ ಪಳನಿ ಸ್ವಾಮಿ ಭೇಟಿಯಾಗಿದ್ದಾರೆ. ಗೃಹ ಸಚಿವರು ಮೈತ್ರಿಯ ಬಗ್ಗೆ ಮಾತನಾಡಿದ್ದಾರೆ. ಎಐಡಿಎಂ ಕೆ ಕುರಿತ ನನ್ನ ನಿಲುವು ಎಲ್ಲರಿಗೂ ಗೊತ್ತು. ಡಿಎಂಕೆಯನ್ನು ಅಧಿಕಾರದಿಂದ ಇಳಿಸುವುದು ಎಲ್ಲರ ಉದ್ದೇಶವಾಗಿದ್ದು ನಮ್ಮ ನಂಬರ್ ಒನ್ ಕಾರ್ಯಕ್ರಮ ಅದು. ಎಐಡಿಎಂ ಕೆ ಬಹಳ ದೊಡ್ಡ ದ್ರವಿಡಿಯನ್ ಪಕ್ಷವಾಗಿದ್ದು ಗೃಹ ಸಚಿವರನ್ನು ಭೇಟಿ ಆಗಿರುವುದರಿಂದ ಸಂದೇಶ ಸ್ಪಷ್ಟವಾಗಿದೆ. ಎ ಐ ಡಿ ಎಂ ಕೆ ಬಿಜೆಪಿ ಜೊತೆ ಮೈತ್ರಿ ಬಯಸುತ್ತಿದ್ದು ಗೃಹ ಸಚಿವರು ಮೈತ್ರಿಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.
ನಾನು ಎಲ್ಲಿ ಇರಬೇಕು ಯಾವ ಪೊಸಿಷನ್ನಲ್ಲಿ ಇರಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂದು ಪಕ್ಷಕ್ಕೆ ಗೊತ್ತಿದೆ. ಏನೇ ತೀರ್ಮಾನ ತೆಗೆದುಕೊಂಡರು ನಾನೊಬ್ಬ ಕಾರ್ಯಕರ್ತನಾಗಿದ್ದು ತಮಿಳುನಾಡಿನಲ್ಲಿ ಬದಲಾವಣೆ ಆಗಲಿದೆ. ಪಕ್ಷಕ್ಕೆ ಇನ್ನೊಂದು ಅವಕಾಶ ಸಿಗಬಹುದು. ಮಹಾರಾಷ್ಟ್ರ ಒರಿಸ್ಸಾ ಪ್ರಾಮಾಣಿಕ ಪ್ರಯತ್ನದಿಂದ ಏನಾಗಿದೆ ಎಂದು ಗೊತ್ತು. ತಮಿಳುನಾಡು ಒಂದು ಸುದೀರ್ಘ ಕಾಲದ ಆಟವಾಗಿದ್ದು, ಬಹಳ ವರ್ಷದಿಂದ ನಾವು ತಾಳ್ಮೆಯಿಂದ ಕಾದಿದ್ದೇವೆ ಕಾಯುತ್ತೇವೆ, ಇನ್ನೂ 20 ವರ್ಷ 30 ವರ್ಷ ಬೇಕಾದರೂ ಆಗಲಿ ಅಧಿಕಾರಕ್ಕೆ ಬರುತ್ತೇವೆ, ಪಕ್ಷದ ನಿರ್ಧಾರಕ್ಕೆ ಕಾರ್ಯಕರ್ತರಾಗಿ ಒಪ್ಪಿಗೆ ಕೊಡಬೇಕು. ಪಕ್ಷ ರಾಷ್ಟ್ರೀಯ ಮಟ್ಟದಿಂದ ಆಲೋಚನೆ ಮಾಡುತ್ತದೆ ಎಂದರು.
ತಮಿಳುನಾಡಿನಲ್ಲಿ ಡಿಎಂಕೆ ಎಷ್ಟು ಗಲೀಜು ಸರಕಾರ ಮಾಡುತ್ತಿದೆ ಎನ್ನು ನೋಡುತ್ತಿದ್ದೇವೆ. ಈಗಾಗಲೇ 13 ಸಚಿವರ ಮೇಲೆ ಭ್ರಷ್ಟಾಚಾರ ಪ್ರಕರಣ ನ್ಯಾಯಾಲಯದಲ್ಲಿದೆ. ಒಬ್ಬ ಮಂತ್ರಿ ಒಂದುವರೆ ವರ್ಷ ಜೈಲಿನಲ್ಲಿದ್ದು ಮತ್ತೆ ಮಂತ್ರಿಯಾಗಿದ್ದಾರೆ. ದೀರ್ಘಕಾಲಿನ ದೃಷ್ಟಿಕೋನದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಜಕೀಯದಲ್ಲಿ ಅಧಿಕಾರಕ್ಕಿಂತ ತಾಳ್ಮೆ ಮುಖ್ಯವಾಗಿದ್ದು ತಾಳ್ಮೆಯಿಂದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಒಂದಲ್ಲ ಒಂದು ದಿನ ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ನಮ್ಮ ಪಕ್ಷದಲ್ಲಿ ರಾಜೀನಾಮೆ ವಿಚಾರ ಬರುವುದಿಲ್ಲ ಆದರೆಮುಂದಿನ ರಾಜ್ಯ ಅಧ್ಯಕ್ಷ ಚುನಾವಣೆ ಆಗುವಾಗ ನಾನು ಸ್ಪರ್ಧೆಯಲ್ಲಿ ಇರಲ್ಲ ಯಾವಾಗ ಬೇಕಿದ್ದರೂ ರಾಜ್ಯಾಧ್ಯಕ್ಷ ಚುನಾವಣೆ ಆಗಬಹುದು ಎಂದರು.