ಕಲ್ಮಾಡಿ ಚರ್ಚಿನ ವಾರ್ಷಿಕ ಮಹೋತ್ಸವದ ಪ್ರಯುಕ್ತ ನೊವೆನಾ ಪ್ರಾರ್ಥನೆಗೆ ಚಾಲನೆ

Spread the love

ಕಲ್ಮಾಡಿ ಚರ್ಚಿನ ವಾರ್ಷಿಕ ಮಹೋತ್ಸವದ ಪ್ರಯುಕ್ತ ನೊವೆನಾ ಪ್ರಾರ್ಥನೆಗೆ ಚಾಲನೆ

ಉಡುಪಿ ; ಉಡುಪಿ ಸಮೀಪದ ಮಲ್ಪೆಯ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ 9 ದಿನಗಳ ನೋವೆನಾ ಪ್ರಾರ್ಥನೆಗೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು.

ಈ 9 ದಿನಗಳ ನೊವೆನಾ ಪ್ರಾರ್ಥನೆಗೆ ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳು ಹಾಗೂ ಉದ್ಯಾವರ ಚರ್ಚಿನ ಧರ್ಮಗುರುಗಳಾದ ವಂ ಸ್ಟ್ಯಾನಿ ಬಿ ಲೋಬೊ ಅವರು ಚರ್ಚ್ ಆವರಣದಲ್ಲಿ ವೆಲಂಕಣಿ ಮಾತೆಯ ಧ್ವಜವನ್ನು ಏರಿಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಪವಿತ್ರ ಬಲಿಪೂಜೆಯನ್ನು ನೇರವೇರಿಸಿ ಸಂದೇಶ ನೀಡಿದರು.

ಈ ವೇಳೆ ಉಡುಪಿ ವಲಯದ ಪ್ರಧಾನ ಧರ್ಮಗುರು ವಂ ವಲೇರಿಯನ್ ಮೆಂಡೊನ್ಸಾ, ಮಣಪಾಲ ಚರ್ಚಿನ ಧರ್ಮಗುರು ವಂ ಫ್ರೆಡ್ರಿಕ್ ಡಿಸೋಜಾ, ಕಲ್ಮಾಡಿ ಚರ್ಚಿನ ಧರ್ಮಗುರು ವಂ ಆಲ್ಬನ್ ಡಿಸೋಜಾ, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ ಹಾಗೂ ಇತರರು ಉಪಸ್ಥಿತರಿದ್ದರು.

ರಾಜ್ಯದ ಮೊದಲ ಹಾಗೂ ಭಾರತದಲ್ಲಿ ಮೂರನೇ ಹಡಗಿನಾಕಾರಾದ ಸ್ಟೆಲ್ಲಾ ಮಾರಿಸ್ ಚರ್ಚಿನ ವಾರ್ಷಿಕ ವೆಲಂಕಣಿ ಮಾತೆಯ ಪ್ರತಿಷ್ಠಾಪನಾ ಮಹೋತ್ಸವ ಪ್ರತಿವರ್ಷದಂತೆ ಈ ಬಾರಿಯೂ ಕೂಡ ಅಗಸ್ಟ್ 14-ಮತ್ತು 15 ರಂದು ವಿಜೃಂಭಣೆಯಿಂದ ಜರುಗಲಿದೆ.

ಈ 9 ದಿನಗಳ ನೊವೆನ ಸಮಯದಲ್ಲಿ ವಿಶೇಷ ಉದ್ದೇಶಗಳಿಗೋಸ್ಕರ ಪ್ರಾರ್ಥನೆಗಳನ್ನು ಮಾಡಲಾಗುವುದು ಎಂದರು.

ಅಗೋಸ್ಟ್ 5ರಂದು ಸಾಯಂಕಾಲ 3.45ಕ್ಕೆ ನೊವೆನಾ ಪ್ರಾರ್ಥನೆಗೆ ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳಾಗಿರುವ ವಂ.ಸ್ಟ್ಯಾನಿ ಬಿ ಲೋಬೊ ಚಾಲನೆ ನೀಡಲಿರುವರು. ಬಳಿಕ 4ಗಂಟೆಗೆ ನೊವೆನಾ ಪ್ರಾರ್ಥನೆ ಮತ್ತು ಬಲಿಪೂಜೆ ನಡೆಯಲಿರುವುದು.

ಅಗೊಸ್ತ್ 13ರಂದು ಮಧ್ಯಾಹ್ನ 2.30ಕ್ಕೆ ಆದಿಉಡುಪಿ ಜಂಕ್ಷನ್ ಬಳಿಯಿಂದ ಕಲ್ಮಾಡಿ ಚರ್ಚಿನವರೆಗೆ ಮಾತೆಯ ತೇರಿನ ಮೆರವಣಿಗೆ ನಡೆಯಲಿದ್ದು, ಉಡುಪಿ ಧರ್ಮಪ್ರಾಂತ್ಯದ ಜುಡಿಷಿಯಲ್ ವಿಕಾರ್ ವಂ. ವಾಲ್ಟರ್ ಡಿಮೆಲ್ಲೋ ಚಾಲನೆ ನೀಡಲಿದ್ದಾರೆ. ಬಳಿಕ 4ಗಂಟೆಗೆ ಪ್ರಾರ್ಥನೆ ಮತ್ತು ಬಲಿಪೂಜೆ ಜರುಗಲಿದೆ.

ಅಗೋಸ್ತ್ 14ರಂದ ಸಾಯಂಕಾಲ 4ಗಂಟೆಗೆ ಸಾಂಭ್ರಮಿಕ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಡಾ ಹೆನ್ರಿ ಡಿಸೋಜಾರವರು ನೆರವೇರಿಸಲಿದ್ದಾರೆ. ಅದೇ ದಿನ ಸಾಂಯಕಾಲ 6 ಗಂಟೆಗೆ ಕನ್ನಡ ಭಾಷೆಯಲ್ಲಿ ದಿವ್ಯ ಬಲಿಪೂಜೆ ನಡೆಯಲಿದೆ.

ಅಗೋಸ್ಟ್ 15ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಹಬ್ಬದ ವಿಶೇಷ ಬಲಿಪೂಜೆ ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಕೊಂಕಣಿಯಲ್ಲಿ ಬಲಿಪೂಜೆ ನಡೆಯಲಿದ್ದು, ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಮಧ್ಯಾಹ್ನ 12 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 4 ಗಂಟೆಗೆ ಕನ್ನಡದಲ್ಲಿ, 6 ಗಂಟೆಗೆ ಇಂಗ್ಲಿಷ್ ಭಾಷೆಯಲ್ಲಿ ದಿವ್ಯ ಬಲಿಪೂಜೆಗಳು ನಡೆಯಲಿದೆ.

ಅಗೋಸ್ತ್ 15ರಂದು ಬೆಳಿಗ್ಗೆ 10ಗಂಟೆ ಮತ್ತು ಮಧ್ಯಾಹ್ನ 12 ಗಂಟೆಗಳ ಬಲಿಪೂಜೆ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ


Spread the love