ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರದ್ದು ಹತಾಶ ಹೇಳಿಕೆ – ವಿಕಾಸ್ ಹೆಗ್ಡೆ
ಕುಂದಾಪುರ: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಹಿಂದುತ್ವದ ಭದ್ರ ಕೋಟೆ ಉಡುಪಿ ಜಿಲ್ಲೆಗೆ ಸ್ವಾಗತ ಎನ್ನುವ ಕಾರ್ಕಳದ ಶಾಸಕ ಸುನೀಲ್ ಕುಮಾರ್ ರವರಿಗೆ ಅನುಭವದ ಹಾಗೂ ಮಾಹಿತಿಯ ಕೊರತೆಯಿದೆ. ಅವರು ಅಭಿವೃದ್ಧಿಯ, ಜನಪರ ಕಾಳಜಿಯ ಮೂಲಕ ಶಾಸಕರಾದವರಲ್ಲಾ ಬದಲಾಗಿ ಧರ್ಮ ಧರ್ಮದ ನಡುವೆ, ಜಾತಿ ಜಾತಿಯ ನಡುವೆ ವಿಷ ಬೀಜ ಬಿತ್ತಿ ಶಾಸಕರಾದವರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಇವತ್ತು ಜಿಲ್ಲೆಯ ಐದು ಶಾಸಕರು, ಸಂಸದರು ಬಿಜೆಪಿಯವರು ಇರಬಹುದು ಆದರೆ ಕರಾವಳಿಯ ಜನತೆ ಬಿಜೆಪಿಗಿಂತ ಹೆಚ್ಚು ಅಧಿಕಾರ ಕೊಟ್ಟದ್ದು ಕಾಂಗ್ರೆಸ್ ನವರಿಗೆ ಎನ್ನುವ ಮಾಹಿತಿ ದೂರದ ಚಿಕ್ಕಮಗಳೂರು ಜಿಲ್ಲೆಯಿಂದ ಬಂದ ಸುನೀಲ್ ಕುಮಾರ್ ರವರಿಗೆ ತಿಳಿದಿಲ್ಲಾ. ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಮನೋರಮಾ ಮದ್ವರಾಜ್, ಕೆ ಪ್ರತಾಪ್ ಚಂದ್ರ ಶೆಟ್ಟಿ, ವಸಂತ ಸಾಲ್ಯಾನ್, ಕೆ ಜಯಪ್ರಕಾಶ್ ಹೆಗ್ಡೆ, ಕೆ ಗೋಪಾಲ ಪೂಜಾರಿ, ಇವರೆಲ್ಲಾ ನಾಲ್ಕು, ಐದು ಅದಕ್ಕಿಂತ ಹೆಚ್ಚು ಭಾರಿ ಶಾಸಕರು, ಸಂಸದರು ಆದವರು. ಇವರೆಲ್ಲಾ ಕೇವಲ ಜನಪರ ಕಾಳಜಿ, ಅಭಿವೃದ್ಧಿಯ ಮೂಲಕ ಜನಪ್ರತಿನಿದಿನಗಳಾದವರು ಆದರೆ ಸುನೀಲ್ ಕುಮಾರ್ ಸುಳ್ಳುಗಳನ್ನು ಸತ್ಯ ಮಾಡಿ ಶಾಸಕರದವರು.
ಇವತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪ್ರಭಾಲ್ಯವಿರಬಹುದು ಆದರೆ ಇದೆಲ್ಲಾ ಶಾಶ್ವತ ಅಲ್ಲಾ ಎನ್ನುವ ಅರಿವು ಕಾರ್ಕಳದ ಶಾಸಕರಿಗೆ ಇಲ್ಲಾ,ಶಾಸಕರ ಮಾತಿನಲ್ಲಿ ಅಧಿಕಾರದ ಅಮಲು ಅವರ ನೆತ್ತಿಗೆ ಏರಿದಂತೆ ಇದೆ ಆದರೆ ಇದೆಲ್ಲಾ ಉಡುಪಿ ಜಿಲ್ಲೆಯ ಪ್ರಬುದ್ಧ ಮತದಾರರ ಮುಂದೆ ಹೆಚ್ಚು ದಿನ ಬಾಳುವುದಿಲ್ಲಾ. ಈಗಾಗಲೇ ಕಾರ್ಕಳದಲ್ಲಿ ಸೋಲಿನ ಸುಳಿವು ಅರಿತ ಶಾಸಕರು ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಐದೂ ಕ್ಷೇತ್ರಗಳಲ್ಲಿ ಗೆಲ್ಲುವುದರ ಮೂಲಕ ಕಾಂಗ್ರೆಸ್ ಗತ ವೈಭವಕ್ಕೆ ಮರಳಲಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.