ಕಾರ್ಯಕರ್ತರ ನೋವಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಕರ್ತವ್ಯ – ಪ್ರೊ.ಚ.ನ. ಶಂಕರ ರಾವ್

Spread the love

ಕಾರ್ಯಕರ್ತರ ನೋವಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಕರ್ತವ್ಯ – ಪ್ರೊ.ಚ.ನ. ಶಂಕರ ರಾವ್

ಮಂಗಳೂರು: ಜನಪ್ರತಿನಿಧಿಗಳಾದವರು ಜನರ ಅಹವಾಲು ಕೇಳುವುದನ್ನು, ಕಾರ್ಯಕರ್ತರ ನೋವಿಗೆ ಸ್ಪಂದಿಸುವುದನ್ನು ಎಂದಿಗೂ ಮರೆಯಬಾರದು. ಸರ್ಕಾರದ ಯೋಜನೆ, ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ಗುರಿಯಾಗಬೇಕು ಎಂದು ಎಬಿವಿಪಿ ಹಿರಿಯರಾದ ಪ್ರೊ.ಚ.ನ. ಶಂಕರ ರಾವ್ ಹೇಳಿದರು.

ದಕ್ಷಿಣ ಕನ್ನಡ ಬಿಜೆಪಿ ಲೋಕಸಭೆ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಮಂಗಳೂರಿನ ಎವಿವಿಪಿ ಕಾರ್ಯಾಲಯಕ್ಕೆ ತೆರಳಿ, ಹಿರಿಯ ಕಾರ್ಯಕರ್ತರ ಆಶೀರ್ವಾದ ಕೇಳಿದರು. ಹತ್ತಿದ ಏಣಿಯನ್ನು ಯಾವತ್ತೂ ಮರೆಯಬೇಡಿ. ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದನ್ನು ರೂಢಿಸಿಕೊಳ್ಳಿ ಎಂದು ಶಂಕರರಾಯರು ಕಿವಿಮಾತು ಹೇಳಿದರು. ಇದೇ ವೇಳೆ, ಮಾತನಾಡಿದ ಕ್ಯಾಪ್ಟನ್ ಬೃಜೇಶ್ ಚೌಟ, ಸೇನೆಯಿಂದ ನಿವೃತ್ತಿ ಪಡೆದು ಸಾರ್ವಜನಿಕ ಜೀವನಕ್ಕಿಳಿದಾಗ ನನ್ನ ಜೊತೆ ನಿಂತಿದ್ದು ಎಬಿವಿಪಿ. ನನ್ನ ಕಷ್ಟ ಕಾಲದಲ್ಲಿ ಎಬಿವಿಪಿ ಕಾರ್ಯಕರ್ತರು ಜೊತೆಯಾಗಿದ್ದಾರೆ. ಇವರ ನೆರವನ್ನು ನಾನೆಂದಿಗೂ ಮರೆಯಲ್ಲ ಎಂದು ಹೇಳಿದರು. ಈ ವೇಳೆ, ಕೇಶವ ಬಂಗೇರ, ರವಿ ಮಂಡ್ಯ ಇದ್ದರು.

ಶನಿವಾರ ಬೆಳಗ್ಗೆ ಬೃಜೇಶ್ ಚೌಟ ಅವರು, ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ ಶೆಟ್ಟಿ, ವಿಶ್ವ ಹಿಂದು ಪರಿಷತ್ ಹಿರಿಯ ಮುಖಂಡ ಎಂ.ಬಿ. ಪುರಾಣಿಕ್ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದರು. ಇದಲ್ಲದೆ, ಪದವಿನಂಗಡಿ ಕೊರಗಜ್ಜನ ಗುಡಿ, ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಬಂಟ್ವಾಳ ಕಾಶಿ ಮಠಕ್ಕೆ ಭೇಟಿ ನೀಡಿ, ಕಾಶಿ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಸಂಜೆಯ ವೇಳೆಗೆ ತಲಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿದರಲ್ಲದೆ, ತಮ್ಮ ಕುಟುಂಬದ ತರವಾಡು ಮನೆಯಾದ ತಲಪಾಡಿ ದೊಡ್ಡಮನೆಗೆ ಭೇಟಿ ನೀಡಿ ಕ್ಯಾಪ್ಟನ್ ಬೃಜೇಶ್ ಚೌಟ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


Spread the love