ಕುಂದಾಪುರ: ಕಡಲಿಗಿಳಿದ ಯುವಕ ಸಮುದ್ರಪಾಲು

Spread the love

ಕುಂದಾಪುರ: ಕಡಲಿಗಿಳಿದ ಯುವಕ ಸಮುದ್ರಪಾಲು

  • ಮದುವೆ ಕಾರ್ಯಕ್ರಮಕ್ಕೆ ಬಂದ ತಿಪಟೂರಿನ‌ ಯುವಕನಿಗಾಗಿ ಮುಂದುವರೆದ ಶೋಧ ಕಾರ್ಯ

ಕುಂದಾಪುರ: ಕಡಲಿಗಿಳಿದ ಯುವಕನೋರ್ವ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ದುರ್ಘಟನೆ ತಾಲೂಕಿನ ಬೀಜಾಡಿಯ ಅರಬ್ಬೀ ಸಮುದ್ರದಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ನೀರು ಪಾಲಾಗಿರುವ ಯುವಕನನ್ನು ತಿಪಟೂರಿನ ನಿವಾಸಿ ಯೋಗೀಶ್ (23) ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ ಸ್ನೇಹಿತ ಸಂದೀಪ್ ಎನ್ನುವವರ ಜೊತೆಯಲ್ಲಿ ಬೀಜಾಡಿ ಗ್ರಾಮದ ದಾರಸ್ ಮನೆ ಸಮೀಪದ ಸಮುದ್ರದ ಕಿನಾರೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಡಲಿಗೆ ಇಳಿದಿದ್ದಾರೆ. ಈ ವೇಳೆ ರಕ್ಕಸ ಅಲೆಗಳು ಅಪ್ಪಳಿಸಿದ ಪರಿಣಾಮ ಆಯ ತಪ್ಪಿದ್ದಾರೆ. ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಗೆಳೆಯನ ರಕ್ಷಣೆಗೆ ಪ್ರಯತ್ನಿಸಿದರೂ, ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಅಲೆಗಳ ಆರ್ಭಟ ಜೋರಾಗಿಯೇ ಇದ್ದುದ್ದರಿಂದ ಏನೂ ಮಾಡಲು ಸಾಧ್ಯವಾಗದೇ ಬೊಬ್ಬೆ ಹಾಕಿದ್ದಾರೆ. ಸಂದೀಪ್ ಅವರ ಬೊಬ್ಬೆ ಕೇಳಿ ಬಂದ ಸ್ಥಳೀಯರು ಅವರನ್ನು ರಕ್ಷಣೆ ಮಾಡಿ ಬಳಿಕ ಯೋಗೀಶ್ ರಕ್ಷಣೆಗೆ ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.

ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಜಾಡಿ ಮನೆಯ ವಿನಯ್ ಎನ್ನುವವರ ಮನೆಯಲ್ಲಿ ನಡೆಯಬೇಕಾಗಿದ್ದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯೋಗೀಶ್ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಭೇಟಿ ನೀಡಿದ್ದು ನಾಪತ್ತೆಯಾದ ಯುವಕನಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.


Spread the love