ಕುಂದಾಪುರ ಛಾಯಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಿರೀಶ್ ಜಿ.ಕೆ ಅವಿರೋಧ ಆಯ್ಕೆ
- ಸ್ವಂತ ಕಟ್ಟಡದಲ್ಲಿ ಗುಣಮಟ್ಟದ ಸೇವೆ ನೀಡಲು ಸಕಲ ಪ್ರಯತ್ನ: ಗಿರೀಶ್ ಜಿ.ಕೆ ಭರವಸೆ
ಕುಂದಾಪುರ: ಛಾಯಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಕುಂದಾಪುರ ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಗಿರೀಶ್ ಜಿ.ಕೆ, ಉಪಾಧ್ಯಕ್ಷರಾಗಿ ಸುಧೀರ್ ಬಿದ್ಕಲ್ ಕಟ್ಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ವಿ.ಎಮ್.ಕೆ ಟವರ್ ನಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆಯಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಗಿರೀಶ್ ಜಿ.ಕೆ ಹಾಗೂ ಉಪಾಧ್ಯಕ್ಷರಾಗಿ ಸುಧೀರ್ ಬಿದ್ಕಲ್ ಕಟ್ಟೆ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಪುಂಡಲೀಕ ಶಾನುಭಾಗ್, ದಿನೇಶ್ ಗೋಡೆ, ಬಾಲಕೃಷ್ಣ ಶೆಟ್ಟಿ, ಸುಖಪಾಲ್ ಖಾರ್ವಿ, ವಿಠಲ ಬಿ, ಪ್ರೀತಿ ಶೆಟ್ಟಿ, ಗಣೇಶ್ ಪೂಜಾರಿ, ಗ್ರೇಶನ್ ಡಯಾಸ್, ವಿ. ಸರಿತಾ, ಅನ್ನಪೂರ್ಣ ಆಯ್ಕೆಯಾಗಿದ್ದಾರೆ.
ಈ ವೇಳೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಗಿರೀಶ್ ಜಿ.ಕೆ, ಛಾಯಗ್ರಾಹಕರ ಹಿತದೃಷ್ಠಿಯಿಂದ ಅವರ ಉದ್ಯಮಕ್ಕೆ ಸಹಕಾರವಾಗಲಿ ಎನ್ನುವ ನಿಟ್ಟಿನಲ್ಲಿ ದಿವಂಗತ ಅಶೋಕ್ ಶೆಟ್ಟಿಯವರು ಸ್ಥಾಪಿಸಿದ ಈ ಸಂಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತೇವೆ. ಛಾಯಗ್ರಾಹಕರಿಗೆ ಮಾತ್ರವಲ್ಲದೇ ಸಾರ್ವಜನಿಕರೂ ಅನುಕೂಲವಾಗುವ ನಿಟ್ಟಿನಲ್ಲಿ ಸಂಸ್ಥೆ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇತರ ಸಹಕಾರಿ ಸಂಸ್ಥೆಗೆ ಸರಿಸಮಾನವಾಗಿ ಪೈಪೋಟಿ ಕೊಡಬೇಕು ಎನ್ನುವ ಕನಸು ಕಂಡಿದ್ದ ಅಶೋಕ್ ಶೆಟ್ಟಿಯವರ ಕನಸು ನನಸು ಮಾಡಲು ನಾವೆಲ್ಲರೂ ಜೊತೆಯಾಗಿ ಅವಿರತವಾಗಿ ಶ್ರಮಿಸುತ್ತೇವೆ. ಮುಂದಿನ ದಿನಗಳಲ್ಲಿ ಛಾಯಗ್ರಾಹಕರಿಗೂ ಹಾಗೂ ಸಾರ್ವಜನಿಕರಿಗೂ ಇನ್ನೂ ಹೆಚ್ಚಿನ ಗುಣಮಟ್ಟದ ಸೇವೆ ಕೊಡಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ಸದೃಢಪಡಿಸುತ್ತೇವೆ. ನಮ್ಮ ಸೇವಾವಧಿಯಲ್ಲಿ ಸ್ವಂತ ಜಾಗದಲ್ಲಿ, ಸ್ವಂತ ಕಟ್ಟಡದಲ್ಲಿ ನಮ್ಮ ಸಂಸ್ಥೆ ನಿರ್ಮಾಣ ಮಾಡುವ ಕನಸು ಕಂಡಿದ್ದು, ಅದನ್ನು ನನಸಾಗಿಸುತ್ತೇವೆ ಎಂದರು.
ಕುಂದಾಪುರ-ಬೈಂದೂರು ಎಸ್.ಕೆ.ಪಿ.ಎ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಉಪ್ಪುಂದ, ಸಲಹಾ ಸಮಿತಿ ಅಧ್ಯಕ್ಷ ದಿನೇಶ್ ಗೋಡೆ ಮಾತನಾಡಿದರು. ಸುನಿಲ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕುಂದಾಪುರ-ಬೈಂದೂರು ಎಸ್.ಕೆ.ಪಿ.ಎ ಕಾರ್ಯದರ್ಶಿ ದಿನೇಶ್ ರಾಯಪ್ಪನಮಠ, ಉಪಾಧ್ಯಕ್ಷರಾದ ಚಂದ್ರಕಾಂತ್, ಸುರೇಶ್ ಮೊಳಹಳ್ಳಿ ಮತ್ತಿತರರು ಇದ್ದರು.