ಕುಂದಾಪುರ : ಸಮುದ್ರ ಪಾಲಾಗಿದ್ದ ಯುವಕನ ಶವ ಪತ್ತೆ

Spread the love

ಕುಂದಾಪುರ : ಸಮುದ್ರ ಪಾಲಾಗಿದ್ದ ಯುವಕನ ಶವ ಪತ್ತೆ

ಕುಂದಾಪುರ: ಬೀಜಾಡಿಯಲ್ಲಿನ ಸಮಾರಂಭಕ್ಕೆಂದು ಸ್ನೇಹಿತನ ಜೊತೆಯಲ್ಲಿ ಬಂದು ಅರಬ್ಬಿ ಕಡಲಿನ ಅಲೆಗಳ ರಭಸದಲ್ಲಿ ಕೊಚ್ಚಿ ಹೋಗಿದ್ದ ತಿಪಟೂರು ಮೂಲದ ಟಿ.ಆರ್.ಯೋಗೀಶ್(23) ಎಂಬ ಯುವಕ ಶವ ಒಂದು ವಾರದ ಬಳಿಕ ಸೋಮವಾರ ಕಾರಾವಾರದ ಕಡಲ ತೀರದಲ್ಲಿ ಪತ್ತೆಯಾಗಿದೆ.

ವಿವಾಹ ಸಮಾರಂಭಕ್ಕೆಂದು ಸ್ನೇಹಿತ ಸಂದೀಪ್ ಎನ್ನುವವರ ಜೊತೆಯಲ್ಲಿ ತಿಪಟೂರಿನಿಂದ ಬೈಕ್‌ನಲ್ಲಿ ಬಂದಿದ್ದ ಯೋಗೀಶ್ ಜೂ.19ರಂದು ಸಂಜೆ ಬೀಜಾಡಿ ಗ್ರಾಮದ ದಾರಸ್‌ಮನೆ ಎಂಬಲ್ಲಿ ವಾಯು ವಿಹಾರಕ್ಕೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ಅರಬ್ಬಿ ಕಡಲಿನ ಅಲೆಗಳಲ್ಲಿ ಕೊಚ್ಚಿ ಹೋಗಿದ್ದರು. ಸ್ನೇಹಿತ ಕೂಗಿಗೆ ಸ್ಪಂದಿಸಿದ ಸ್ಥಳೀಯರು ನೆರವಿಗೆ ಧಾವಿಸಿದ್ದರೂ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ನೀರಿನಲ್ಲಿ ಕಣ್ಮರೆಯಾದ ಕ್ಷಣದಿಂದ ಯುವಕ ಪತ್ತೆಗೆ ಪೊಲೀಸ್ ಹಾಗೂ ಕರಾವಳಿ ಪೊಲೀಸ್ ಪಡೆಯ ಮಾರ್ಗದರ್ಶನದಲ್ಲಿ ಸ್ಥಳೀಯ ಹಾಗೂ ಗಂಗೊಳ್ಳಿ ಮೂಲದ ಯುವಕರ ತಂಡಗಳು ನಿರಂತ ಹುಡುಕಾಟ ನಡೆಸುತ್ತಿದ್ದರೂ, ಅವರ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ತ್ರಾಸಿಯ ಕಂಚುಗೋಡು ಸಮೀಪ ಕಡಲಿನಲ್ಲಿ ಯೋಗೀಶ್ ಅವರ ಹೋಲಿಕೆ ಇರುವ ಮೃತ ದೇಹ ತೇಲುತ್ತಿರುವ ಬಗ್ಗೆ ಸ್ಥಳೀಯ ಮೀನುಗಾರರು ನೀಡಿದ ಮಾಹಿತಿಯನ್ವಯ ಬೀಜಾಡಿಯ ಯುವಕರ ತಂಡ ಅಲ್ಲಿಗೆ ಧಾವಿಸಿದ್ದರೂ, ಮಳೆ ಹಾಗೂ ಗಾಳಿಯ ಕಾರಣದಿಂದ ಶವವನ್ನ ಕಾಣುವ ಪ್ರಯತ್ನ ಯಶಸ್ವಿಯಾಗಿರಲಿಲ್ಲ.

ತಿಪಟೂರಿನಲ್ಲಿ ಟೈಲರ್ ವೃತ್ತಿ ಮಾಡಿಕೊಂಡಿದ್ದ ಯೋಗೀಶ್ ಅವರ ತಂದೆ ಟಿ.ರಾಜೇಶ್ ಅವರು, ದುರ್ಘಟನೆಯ ಮಾಹಿತಿ ಪಡೆದುಕೊಂಡು ಕುಟುಂಬ ಸಹಿತವಾಗಿ ಬೀಜಾಡಿಗೆ ಬಂದು ಕಾಣೆಯಾದ ಮಗನ ಹುಡುಕಾಟಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಮಗ ಕಾಣೆಯಾಗಿ 6 ದಿನಗಳು ಕಳೆದಿದ್ದರೂ, ಆತನ ಬಗ್ಗೆ ಯಾವುದೆ ಕುರುಹುಗಳು ದೊರಕದೆ ಇದ್ದುದರಿಂದ, ಹತಾಶರಾಗಿ ಕಣ್ಣಿರು ಸುರಿಸುತ್ತಿದ್ದ ಹೆತ್ತವರು, ನಮ್ಮ ಮಗನನ್ನು ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಿದ್ದ ದೃಶ್ಯ ಕಲ್ಲೆದೆಯನ್ನು ಕರಗಿಸುವಂತೆ ಇತ್ತು.

ಸೋಮವಾರ ಕರ್ನಾಟಕ ಟೈಲರ್ಸ್‌ ಅಸೋಸೀಯೇಶ್‌ನ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಕಡಲ ನೀರಿನಲ್ಲಿ ನಾಪತ್ತೆಯಾಗಿರುವ ಯೋಗೀಶ್ ಅವರ ಪತ್ತೆಗೆ ವಿಶೇಷ ಕಾಳಜಿ ವಹಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿತ್ತು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಈ ಕುರಿತು ಮನವಿ ಸಲ್ಲಿಸಲಾಗಿತ್ತು.


Spread the love