Home Mangalorean News Kannada News ಕೃತಕ ನೆರೆಯ ಸಮಸ್ಯೆ ಉದ್ಭವವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು- ಶಾಸಕ ಕಾಮತ್

ಕೃತಕ ನೆರೆಯ ಸಮಸ್ಯೆ ಉದ್ಭವವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು- ಶಾಸಕ ಕಾಮತ್

Spread the love

ಕೃತಕ ನೆರೆಯ ಸಮಸ್ಯೆ ಉದ್ಭವವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು- ಶಾಸಕ ಕಾಮತ್

ಮಂಗಳೂರು: ಮಂಗಳೂರು ನಗರ ದಕ್ಷಿಣದಲ್ಲಿರುವ ರಾಜಕಾಲುವೆಗಳು, ಬೃಹತ್ ಚರಂಡಿಗಳು ಮತ್ತು ಒಂದು ಮೀಟರ್ ಅಗಲದ ಚರಂಡಿಗಳಲ್ಲಿ ತುಂಬಿರುವ ಹೂಳು, ತ್ಯಾಜ್ಯವನ್ನು ಸಮರೋಪಾದಿಯಲ್ಲಿ ಸ್ವಚ್ಚ ಮಾಡುವ ಪ್ರಕ್ರಿಯೆ ನಡೆಯಬೇಕಿದ್ದು, ಅದರಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆ ವಹಿಸಬೇಕು. ಅದರಿಂದ ಮಳೆಗಾಲದಲ್ಲಿ ಉಂಟಾಗುವ ಕೃತಕ ನೆರೆಯಂತಹ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳೂರು ನಗರದಲ್ಲಿರುವ ಡಿವೈಡರ್ ಗಳ ಪಕ್ಕದಲ್ಲಿ ಸಾಕಷ್ಟು ಮಣ್ಣು, ಮರಳು ಸೇರಿಕೊಂಡಿದೆ. ಹಾಗೇ ಅನೇಕ ಒಂದು ಮೀಟರ್ ಅಗಲದ ಚರಂಡಿಗಳಲ್ಲಿ ತುಂಬಿರುವ ಹೂಳುಗಳನ್ನು ತೆಗೆಯದೇ ಹಾಗೆ ಬಿಡಲಾಗಿದೆ. ಕೆಲವು ಕಡೆ ಹೂಳುಗಳನ್ನು ತೆಗೆದು ಚರಂಡಿಗಳ ಮೇಲೆ ಹಾಕಿ ಹಾಗೆ ಬಿಡಲಾಗಿದೆ. ಅಲ್ಲಿಂದ ಸಾಗಿಸುವ ಪ್ರಕ್ರಿಯೆ ಮಾಡಲಾಗಿಲ್ಲ. ಬೃಹತ್ ಚರಂಡಿಗಳು ಮತ್ತು ರಾಜಕಾಲುವೆಗಳ ಹೂಳುಗಳನ್ನು ಕೆಲವು ಭಾಗಗಳಲ್ಲಿ ತೆಗೆಯಲಾಗಿದೆ ಬಿಟ್ಟರೆ ಪೂರ್ಣವಾಗಿ ಆರಂಭದಿಂದ ಅಂತ್ಯದವರೆಗೂ ತೆಗೆಯಲಾಗಿಲ್ಲ. ಇನ್ನು ಕೆಲವು ದಿನಗಳ ಒಳಗೆ ಮಂಗಳೂರಿನಲ್ಲಿ ಮಳೆಗಾಲ ಶುರುವಾಗಲಿದೆ. ಮೊದಲ ಮಳೆಗೆ ತ್ಯಾಜ್ಯಗಳು ಚರಂಡಿಗಳನ್ನು ಸೇರಿದರೆ ಅದು ಬಹಳ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ ಎಂದು ಶಾಸಕ ಕಾಮತ್ ಹೇಳಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಾವು ನೇರವಾಗಿ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಕೆಲಸ ಮಾಡುವ ಹಾಗಿಲ್ಲ. ಆದ್ದರಿಂದ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಕರ್ತವ್ಯ ನಿರ್ವಹಿಸಬೇಕು. ವಾರದೊಳಗೆ ಎಲ್ಲೆಲ್ಲಿ ಹೂಳು ತೆಗೆಯುವ ಕೆಲಸ ಆಗಿಲ್ಲವೋ ಅದನ್ನು ಗುತ್ತಿಗೆದಾರರಿಂದ ಮಾಡಿಸಬೇಕು. ಡಿವೈಡರ್ ಬಳಿ, ರಸ್ತೆಯ ಅಂಚಿನಲ್ಲಿ, ಒಂದು ಮೀಟರ್ ಅಗಲದ ತೋಡುಗಳಲ್ಲಿ ಇರುವ ತ್ಯಾಜ್ಯವನ್ನು ತೆಗೆಯಲು ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಗೆ ಸೂಚನೆ ಕೊಟ್ಟು ಅವರು ಕೆಲಸ ಮಾಡಿದ್ದಾರಾ, ಇಲ್ವಾ ಎನ್ನುವುದನ್ನು ಪರಿಶೀಲಿಸಬೇಕು. ಇದೆಲ್ಲಾ ತಕ್ಷಣ ಆಗಬೇಕಿದೆ ಎಂದು ಶಾಸಕ ಕಾಮತ್ ತಿಳಿಸಿದರು.

ಇನ್ನು ಜನಸಾಮಾನ್ಯರು ತಮ್ಮ ವಾರ್ಡಿನಲ್ಲಿ ಹೂಳು ತೆಗೆಯದೇ ಬಿಟ್ಟಿರುವ ತೋಡುಗಳ ಬಗ್ಗೆ ಪಾಲಿಕೆಯ ಅಧಿಕಾರಿಗಳ ಗಮನ ಸೆಳೆಯಲು ಅಥವಾ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಿಂದ ಅಥವಾ ಪಾಲಿಕೆಯ ಕಮೀಷನರ್ ಕಚೇರಿಯಿಂದ ಒಂದು ವಾಟ್ಸಪ್ ಸಂಖ್ಯೆಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಬೇಕು. ಜನರು ತಮ್ಮ ವಾರ್ಡ್ ನಲ್ಲಿರುವ ಚರಂಡಿಗಳಲ್ಲಿ ಹೂಳು ತೆಗೆಯದೇ ಇದ್ದಲ್ಲಿ ಅದರ ಫೋಟೋ ತೆಗೆದು, ವಾರ್ಡ್ ವಿವರ ಬರೆದು ಆ ಸಂಖ್ಯೆಗಳಿಗೆ ಕಳುಹಿಸಿದರೆ ಅದರಿಂದ ಸಂವಹನ ಸುಲಭವಾಗುತ್ತದೆ. ಒಟ್ಟಿನಲ್ಲಿ ಕಳೆದ ಮಳೆಗಾಲದಲ್ಲಿ ಉಂಟಾದ ಸಮಸ್ಯೆ, ಕೃತಕ ನೆರೆಯಂತಹ ಘಟನೆ ಈ ಬಾರಿ ನಡೆಯಬಾರದು. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ತಪ್ಪಿದರೆ ನೀತಿ ಸಂಹಿತೆ ಸಡಿಲಿಕೆ ಆದ ನಂತರ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂದು ಶಾಸಕ ಕಾಮತ್ ಹೇಳಿದ್ದಾರೆ.


Spread the love

Exit mobile version