ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈಯವರ “ಕಡಲಾಚೆಯ ರಮ್ಯ ನೋಟ ದುಬಾಯಿ” ಪುಸ್ತಕ ಮಂಗಳೂರಿನಲ್ಲಿ ಬಿಡುಗಡೆ
ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರ್ ಸಾರಥ್ಯದ ಸಾಹಿತ್ಯಪರ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆಯುವ 42ನೇ ಯ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಮತ್ತು ಲೇಖಕ ದುಬಾಯಿಯ ಬಗ್ಗೆ ಪ್ರಕಟಿತ ಲೇಖನಗಳ ಸಂಕಲನ “ಕಡಲಾಚೆಯ ರಮ್ಯ ನೋಟ ದುಬಾಯಿ” ಕೃತಿ ಮಂಗಳೂರು ಪತ್ರಿಕಾ ಭವನದಲ್ಲಿ 2025ನೇ ಮಾರ್ಚ್ 4ನೇ ತಾರೀಕು ಮಂಗಳವಾರ 11.00 ಗಂಟೆಗೆ ನಡೆದ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆಯಾಯಿತು. ಪ್ರಾರಂಭದಲ್ಲಿ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸರ್ವರನ್ನು ಸ್ವಾಗತಿಸಿ, ಪ್ರಸ್ತಾವಿಕ ಭಾಷಣದಲ್ಲಿ ಕೃತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಲೋಕಾರ್ಪಣೆ ಮಾಡಿದರು. ದುಬಾಯಿಯಲ್ಲಿ ಕನ್ನಡ ಪುಸ್ತಕವನ್ನು ತನ್ನದೇ ಆದ ಶೈಲಿಯಲ್ಲಿ ರಚಿಸಿ ದುಬಾಯಿಯಲ್ಲಿರುವ ವಾಸ್ತು ಶಿಲ್ಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಅತ್ಯಂತ ಸುಂದರವಾದ ವರ್ಣ ಚಿತ್ರದೊಂದಿಗೆ ಓದುಗರಿಗೆ ಮುಟ್ಟಿಸುವಲ್ಲಿ ಕೃತಿ ಯಶಸ್ವಿಯಾಗಿದೆ. ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಚಿತ್ರ ಶಿಲ್ಪ ಕಲಾವಿದ, ಕ್ರಿಯಾತ್ಮಕ ಕಲಾನಿರ್ದೇಶಕರು ಹಾಗೂ ಲೇಖಕರಾಗಿರುವ ಬಿ. ಕೆ. ಗಣೇಶ್ ರೈಯವರು ತಮ್ಮ ಲೇಖನಗಳನ್ನು ಬರೆದು ಪ್ರಕಟಿಸಲು ಅವಕಾಶಗಳನ್ನು ಕಲ್ಪಿಸಿರುವ ಎಲ್ಲಾ ಮಾಧ್ಯಮಗಳಿಗೆ ತನ್ನ ಕೃತಜ್ಜತೆಗಳನ್ನು ಸಲ್ಲಿಸಿ, ತನ್ನ ಪ್ರತಿಭೆಗೆ ಸದಾ ಪ್ರೋತ್ಸಾಹ ಬೆಂಬಲ ನೀಡಿರುವ ಸ್ನೇಹಿತರು, ಸಂಘ ಸಂಸ್ಥೆಗಳಿಗೆ ಧನ್ಯವಾದಗಳನ್ನು ಸಲ್ಲಿಸಿ, ಕೃತಿಯ ಮೊದಲ ಪ್ರತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಗೆ ಅರ್ಪಣೆ ಮಾಡಿ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಶುಭಾಶೀರ್ವಾದ ಪಡೆದು ಹಾಗೂ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವರವರಿಂದ ಶುಭ ಸಂದೇಶವನ್ನು ಪಡೆದು ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಯಾಗಿರುವುದಕ್ಕೆ ತಮ್ಮ ಕನಸು ನನಸಾಗಿದೆ ಎಂದು ಸರ್ವರಿಗೂ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಡಲಾಚೆಯ ರಮ್ಯ ನೋಟ ದುಬಾಯಿ ಕೃತಿಗೆ ಮುನ್ನುಡಿಯನ್ನು ಬರೆದಿರುವ ಡಾ. ಅರುಣಾ ನಾಗರಾಜ್ ರವರು ಕೃತಿಯಲ್ಲಿರುವ ಒಂದೊಂದು ಲೇಖನಗಳು ಸಂಪೂರ್ಣ ಮಾಹಿತಿಯೊಂದಿಗೆ ಓದುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೈಯಲ್ಲಿ ಈ ಒಂದು ಕೃತಿ ಇದ್ದರೆ ಸಮಗ್ರ ದುಬಾಯಿಯನ್ನು ಸಂಪೂರ್ಣವಾಗಿ ಪ್ರವಾಸ ಮಾಡಿಕೊಂಡು ಬಂದಿರುವ ಅನುಭವಾಗುತ್ತದೆ ಎಂದು ತಮ್ಮ ಮೆಚ್ಚುಗೆಯನ್ನು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಶ್ರೀ ಶ್ರೀನಿವಾಸ್ ನಾಯಕ್ ಇಂದಾಜೆ ವಿದೇಶದ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಗಣೇಶ್ ರೈಯವರ ಸಾಧನೆಗಳನ್ನು ಶ್ಲಾಘಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸರ್ವೋತ್ತಮ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಗಣೇಶ್ ರೈಯವರು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಕರ್ನಾಟಕದ ಕಲೆ ಭಾಷೆ ಸಂಸ್ಕೃತಿಯನ್ನು ಕಳೆದ ಎರಡುವರೆ ದಶಕಗಳಿಂದ ನಿರಂತರವಾಗಿ ಮಾಡಿಕೋಡು ಬರುತ್ತಿದ್ದು, ಶಿಲ್ಪಿಯಾಗಿ, ಚಿತ್ರಕಾರರಾಗಿ, ಕಾರ್ಯಕ್ರಮ ನಿರೂಪಕರಾಗಿ ಸಮಾಜ ಸೇವಕರಾಗಿ, ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಹೊಂದಿರುವ ಗಣೇಶ್ ರೈಯವರು ಲೇಖಕ ಬರಹಗಾರರಗಿ ನೂರಾರು ಗಣ್ಯರ ಸಂದರ್ಶನ ಲೇಖನಗಳನ್ನು ಪ್ರಕಟಿಸುತ್ತಾ ಇದೀಗ ದುಬಾಯಿಯ ಸಂಪೂರ್ಣ ಚಿತ್ರಣವಿರುವ ಕಡಲಾಚೆಯ ರಮ್ಯ ನೋಟ ದುಬಾಯಿ ಕೃತಿಯನ್ನು ಪ್ರಕಟಿಸಿರುವುದು ದುಬಾಯಿಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಸಂದಿರುವ ಗೌರವ ಎಂದು ಗಣೇಶ್ ರೈಯವರ ಸಾಧನೆಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶ್ರೀಮತಿ ಸುರೇಖಾ ಯಳವಾರ ರವರು ಕಾರ್ಯಕ್ರಮವನ್ನು ಅತ್ಯಂತ ಸೊಗಸಾಗಿ ನಿರೂಪಣೆ ಮಾಡಿ ಕೊನೆಯಲ್ಲಿ ವಂದನಾರ್ಪಣೆಯನ್ನು ಸಲ್ಲಿಸಿದರು.