ಕೋವಿಡ್ ಸಭೆ : ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ – ಸಿದ್ದರಾಮಯ್ಯ

Spread the love

ಕೋವಿಡ್ ಸಭೆ : ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ – ಸಿದ್ದರಾಮಯ್ಯ

ಬೆಂಗಳೂರು: ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ, ಹೊಸ ಉಪತಳಿ ಪತ್ತೆ ವರದಿಯಾಗಿವೆ. ಆದರೂ ಕೋವಿಡ್ ಬಗ್ಗೆ ಆತಂಕ ಅನಗತ್ಯ. ಕ್ರಿಸ್ನಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ. ಜನ ಗುಂಪು ಸೇರುವೆಡೆ ಮಾಸ್ಕ್ ಧರಿಸಲು ಸರ್ಕಾರ ಸಲಹೆ ನೀಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಉನ್ನತಾಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಸ್ನಸ್ ಹಾಗೂ ಹೊಸ ವರ್ಷಕ್ಕೆ ಪ್ರತ್ಯೇಕವಾಗಿ ಹೊರಡಿಸುವುದಿಲ್ಲ, ಅದರ ಅಗತ್ಯವೂ ಇಲ್ಲ. ಜನರು ಗಾಬರಿಯಾಗಬಾರದು ಎಂದು ಅಭಯ ನೀಡಿದರು‌.

ಉಪಸಮಿತಿ ಮೇಲ್ವಿಚಾರಣೆ
ಕೋವಿಡ್ ನಿರ್ವಹಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ., ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ಮೇಲ್ವಿಚಾರಣೆ ಮಾಡಲು ಸಂಪುಟ ಉಪ ಸಮಿತಿ ರಚಿಸಲಾಗಿದೆ, ಔಷಧ ಖರೀದಿ, ಮಾಸ್ಕ್ ಕಡ್ಡಾಯ ಸೇರಿದಂತೆ ಎಲ್ಲ ವಿಷಯವನ್ನೂ ಸಂಪುಟ ಉಪ ಸಮಿತಿ ನಿರ್ಧಾರ ಮಾಡಲಿದೆ, ಇಂದಿನ ಸಚಿವ ಸಂಪುಟ ಸಭೆಯಲ್ಲೇ ಸಂಪುಟ ಉಪ ಸಮಿತಿ ರಚಿಸಲಾಗುತ್ತದೆ ಎಂದುಸಿಎಂ ಸಿದ್ದರಾಮಯ್ಯ ತಿಳಿಸಿದರು..

ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದ್ದ ಮೂರು ಜನರು ನಿಧನರಾಗಿದ್ದಾರೆ, ಮೂವರೂ ಕೂಡ ಕೋವಿಡ್ ನಿಂದಲೇ ಮೃತ ಎನ್ನಲಾಗಲ್ಲ, ಇತರ ಆರೋಗ್ಯ ಸಮಸ್ಯೆಗಳಿದ್ದವು. ಹೃದಯ, ಕಿಡ್ನಿ, ಶ್ವಾಸಕೋಶ ಸಮಸ್ಯೆ, ಮಧುಮೇಹ ಹಾಗು ಬಿಪಿ ಕಾಯಿಲೆಗೆ ಒಳಗಾಗಿದ್ದರು. ಆದರೂ ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವೈದ್ಯಕೀಯ ಇಲಾಖೆ ಪ್ರತ್ಯೇಕವಾಗಿ ಸಭೆ ನಡೆಸಲಾಗಿತ್ತು, ಇಂದು ಸಭೆ ನಡೆಸಿ ಸಲಹೆ ಪಡೆದಿದ್ದೇನೆ ಎಂದರು.

ತಪ್ಪು ಮರುಕಳಿಸಬಾರದು
ಯಾವುದೇ ಕಾರಣಕ್ಕೆ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು, ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಇರಬಾರದು, ಇತರ ರೋಗ ಇರುವವರನ್ನೂ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆಗೆ ಒಳಪಡಿಸಬೇಕು, ಕೋವಿಡ್ ಗೆ ಸಂಬಂಧಿಸಿದ ಚಿಕಿತ್ಸೆಯನ್ನೂ ಮಾಡಬೇಕು, ಯಾವುದೇ ಕೊರತೆ ಆಗಬಾರದು, ಔಷಧಿ ಕೊರತೆ ಆಗಬಾರದು, ಯಾರಿಗಾದರೂ ಅಗತ್ಯವಿದ್ದಲ್ಲಿ ವ್ಯಾಕ್ಸಿನ್ ಹಾಕಿ, ವ್ಯಾಕ್ಸಿನ್ ತೆಗೆದುಕೊಳ್ಳದವರಿಗೆ ವ್ಯಾಕ್ಸಿನೇಷನ್ ಮಾಡಲು ಸೂಚಿಸಿದ್ದೇನೆ ಎಂದರು.

ಜೆಎನ್.1 ಎನ್ನುವುದು ಓಮಿಕ್ರಾನ್ ನ ಉಪ ತಳಿಯಾಗಿದೆ. ರಾಜ್ಯದಲ್ಲಿ 92 ಜನರಿಗೆ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದೆ ಎಂದು ಗೊತ್ತಾಗಿದೆ, ಬೆಂಗಳೂರು ನಗರದಲ್ಲೇ 80 ಇದೆ,ಮೈಸೂರು 5 ,ಬಳ್ಳಾರಿ 3, ರಾಮನಗರ, ಮಂಡ್ಯದಲ್ಲಿ ತಲಾ 1 ಪಾಸಿಟಿವ್ ಇದೆ,72 ಜನರಿಗೆ ಮನೆಯಲ್ಲೇ ಕ್ವಾರಂಟೈನ್ ಗೆ ಹೇಳಿದ್ದು 20 ಜನರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 7 ಜನ ಐಸಿಯು ನಲ್ಲಿದ್ದಾರೆ. ಪ್ರತಿದಿನ 5 ಸಾವಿರ ಟೆಸ್ಟ್ ಗೆ ತಾಂತ್ರಿಕ ಸಲಹಾ ಸಮಿತಿಯವರು ಹೇಳಿದ್ದಾರೆ ರ್ಯಾಪಿಡ್ 1500 ಮತ್ತು ಆರ್ಟಿಪಿಸಿಆರ್ 3500 ಟೆಸ್ಟ್ ಸೇರಿ 5 ಸಾವಿರ ಟೆಸ್ಟ್ ಶನಿವಾರದಿಂದ ಆರಂಭಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗಾಗಿ ಕ್ಯಾಬಿನೆಟ್ ಸಬ್ ಕಮಿಟಿ ರಚಿಸಲು ನಿರ್ಧರಿಸಲಾಗಿದೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಉಪ ಸಮಿತಿ ರಚಿಸಲಾಗುತ್ತದೆ.ಸಲಹಾ ಸಮಿತಿ ಜೊತೆ ಇವರು ಸಂಪರ್ಕದಲ್ಲಿ ಇರಬೇಕು, ಎರಡೂ ಸಮಿತಿಗಳ ನಡುವೆ ಸಮನ್ವಯತೆ ಇರಬೇಕು, ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಸಂಪುಟ ಉಪ ಸಮಿತಿ ಅನುಷ್ಠಾನಕ್ಕೆ ತರಲಿದೆ ಎಂದರು.

ಗಡಿ ಭಾಗದಲ್ಲಿ ಹೆಚ್ಚು ತಪಾಸಣೆ ಮಾಡಬೇಕಿದೆ, ಕೋವಿಡ್ ಗೆ ಯಾರೂ ಭಯಪಡಬೇಕಾದ ಅಗತ್ಯ ಇಲ್ಲ ಆದರೆ ಎಚ್ಚರಿಕೆ ಕ್ರಮ ಅನುಸರಿಸಬೇಕು.ಜನಸಂದಣಿ ಇರುವ ಕಡೆ ಮಾಸ್ಕ್ ಧರಿಸಿ, 60 ವರ್ಷಕ್ಕೂ ಹೆಚ್ಚಿನ ವಯಸ್ಸಿನವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಸಲಹೆ ನೀಡುತ್ತಿದ್ದೇವೆ ಆದರೆ ಮಾಸ್ಕ್ ಕಡ್ಡಾಯ ಮಾಡುವ ಸ್ಥಿತಿ ಬಂದಿಲ್ಲ ಎಂದರು.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಡೆಡಿಕೇಟೆಡ್ ವಾರ್ಡ್ ಮೀಸಲಿಗೆ ಸೂಚಿಸಲಾಗಿದೆ, ಅಲ್ಲಿ ಎಲ್ಲಾ ವ್ಯವಸ್ಥೆ ಇರಬೇಕು, ಇತರ ರೋಗಗಳ ಚಿಕಿತ್ಸೆಗೂ ವ್ಯವಸ್ಥೆ ಇರಬೇಕು, ಆಕ್ಸಿಜನ್, ವೆಂಟಿಲೇಟರ್, ಬೆಡ್ ಎಲ್ಲಾ ಮೊದಲೇ ಸಿದ್ದಪಡಿಸಿಕೊಳ್ಳಬೇಕು, ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಹಣದ ಕೊರತೆಯಿಲ್ಲ
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ, ಟೆಸ್ಟ್ ಕಿಟ್ ದರ ಇತ್ಯಾದಿ ಕುರಿತು ಸಂಪುಟ ಉಪ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ವ್ಯಾಕ್ಸಿನೇಷನ್ ಉಚಿತವೋ, ದರ ನಿಗದಿಯೋ ಎಂದು ಸಂಪುಟ ಉಪ ಸಮಿತಿ ನಿರ್ಧರಿಸಲಿದೆ.ಕೋವಿಎ್ ನಿರ್ವಹಣೆಗೆ ಹಣಕಾಸಿನ ತೊಂದರೆ ಇಲ್ಲ, ಅಗತ್ಯ ಹಣಕಾಸು ಒದಗಿಸಲಾಗುತ್ತದೆ ಎಂದರು.

ಶಾಲೆಗಳಲ್ಲಿ ಮಾಸ್ಕ್ ಹಾಕುವುದು ಉತ್ತಮ ಆದರೆ ಕಡ್ಡಾಯಗೊಳಿಸುವ ಕುರಿತು ಸಂಪುಟ ಉಪ ಸಮಿತಿಯಲ್ಲಿ ನಿರ್ಧರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮಾಧ್ಯಮದವರು ಪ್ಯಾನಿಕ್ ಸೃಷ್ಟಿಸಬೇಡಿ
ಮಾಧ್ಯಮದವರು, ಚಾನಲ್ ನವರು ಅನಗತ್ಯ ಪ್ಯಾನಿಕ್ ಸೃಷ್ಟಿಸಬಾರದು. ಸದ್ಯ ಆತಂಕ ಪಡಬೇಕಾದ ಸಂದರ್ಭವೇ ಬಂದಿಲ್ಲ. ಪ್ಯಾನಿಕ್ ಸೃಷ್ಟಿಸಬೇಡಿ ಎಂದು ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು


Spread the love