Home Mangalorean News Kannada News ಗೌರಿ ಲಂಕೇಶ್ ಹತ್ಯಾ ಪ್ರಕರಣದಲ್ಲಿ ಅಮಾಯಕರ ಬಂಧನ ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ

ಗೌರಿ ಲಂಕೇಶ್ ಹತ್ಯಾ ಪ್ರಕರಣದಲ್ಲಿ ಅಮಾಯಕರ ಬಂಧನ ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ

Spread the love

ಗೌರಿ ಲಂಕೇಶ್ ಹತ್ಯಾ ಪ್ರಕರಣದಲ್ಲಿ ಅಮಾಯಕರ ಬಂಧನ ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಹಿಂದೂ ಸಂಘಟನೆಗಳ ವತಿಯಿಂದ ಮಹಾನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಗೌರಿ ಲಂಕೇಶ್ ಹತ್ಯಾ ಪ್ರಕರಣದಲ್ಲಿ ಅಮಾಯಕ ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಹೇಳಿಕೆಯನ್ನು ಪಡೆಯುವ ವಿಶೇಷ ತನಿಖಾ ದಳದ ತನಿಖೆಯನ್ನು ಖಂಡಿಸಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತೆ, ಹಜ್ ಹೌಸ್ ಗೆ ಹಿಂದೂಗಳ ಮೇಲೆ ಅಪರಿಮಿತ ಅತ್ಯಾಚಾರ ಮಾಡಿರುವ ಟಿಪ್ಪು ಸುಲ್ತಾನನ ಹೆಸರನ್ನು ಕೊಟ್ಟು ಅವನ ಉದಾತ್ತೀಕರಣ ಮಾಡುವ ನಿರ್ಣಯವನ್ನು ಸರ್ಕಾರವು ರದ್ದು ಪಡಿಸಬೇಕು ಹಾಗೂ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗೇರ , ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ವಿಶೇಷ ತನಿಖಾ ದಳವು ಕೆಲವು ಯುವಕರನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದೆ. ಈ ನಡುವೆ ಬಂಧಿತ ಆರೋಪಿಗಳಿಗೆ ಪೊಲೀಸರು ಚಿತ್ರಹಿಂಸೆಯನ್ನು ನೀಡಿ ಹೇಳಿಕೆಯನ್ನು ಪಡೆಯುತ್ತಿದ್ದಾರೆ. ಅವರಿಗೆ ಅವರ ಸಂವಿಧಾನದತ್ತ ಹಕ್ಕುಗಳಿಂದ ವಂಚಿಸಲಾಗುತ್ತಿದೆ, ಅವರಿಗೆ ಕಾನೂನು ಸಹಾಯ ನೀಡದಿರುವುದು, ಅವರ ಮಾನವಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು, ಅವರಿಗೆ ಬೆದರಿಸಿ, ಖಾಲಿ ಪೇಪರ್ ಮೇಲೆ ಸಹಿ ಪಡೆಯುವುದು ಮುಂತಾದ ಅಮಾನವೀಯ ರೀತಿಯಲ್ಲಿ ತನಿಖೆಯನ್ನು ನಡೆಸುತ್ತಿರುವುದು ಖಂಡನೀಯವಾಗಿದೆ. ಈ ಎಲ್ಲಾ ಘಟನಾವಳಿಗಳನ್ನು ಗಮನಿಸಿದಾಗ ಇದು ಅಮಾಯಕರನ್ನು ಸಿಲುಕಿಸಿ, ರಾಜಕೀಯ ಲಾಭ ಪಡೆಯಲು ಯಾವುದೋ ಕಾಣದ ಶಕ್ತಿಗಳು ತನಿಖಾ ಸಂಸ್ಥೆಯ ಹಿಂದೆ ಕೆಲಸ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ. ಕರ್ನಾಟಕದಲ್ಲಿ ಇದುವರೆಗೆ ೨೫ ಕ್ಕೂ ಅಧಿಕ ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕಾ ಸಂಘದ ಕಾರ್ಯಕರ್ತರ ಹತ್ಯೆಯಾಗಿದೆ. ಅದರಲ್ಲಿ ಬಹಳಷ್ಟು ಹತ್ಯೆಗಳು ವೈಚಾರಿಕ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿಯೇ ಘಟಿಸಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಕೇರಳದಲ್ಲಿಯೂ ವೈಚಾರಿಕ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಸಾಮ್ಯವಾದಿ ಪಕ್ಷದ ಕೈವಾಡವಿರುವುದು ಸಾಬೀತಾಗಿದೆ. ಇದೇ ಸಾಮ್ಯವಾದಿ ವಿಚಾರಸರಣಿಯವರೇ ಗೌರಿ ಹತ್ಯೆಯ ನಂತರ ದೇಶವ್ಯಾಪಿ ಏಕಕಾಲದಲ್ಲಿ ಪ್ರತಿಭಟನೆ ಮಾಡಿದರು. ಒಂದು ಕಡೆ ಸಾಮ್ಯವಾದಿ ಸಂಘಟನೆಗಳು ಹಿಂದುತ್ವವಾದಿ ಮುಖಂಡರ/ ಕಾರ್ಯಕರ್ತರ ಹತ್ಯೆಯನ್ನು ಮಾಡುತ್ತಿವೆ ಇದನ್ನು ಮುಚ್ಚಿಹಾಕಲು ಮತ್ತು ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಗೌರಿ ಲಂಕೇಶ ಹತ್ಯೆ ಪ್ರಕರಣದ ಆರೋಪವನ್ನು ಹಿಂದುತ್ವವಾದಿ ಸಂಘಟನೆಗಳ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದಾರೆಯೇ ಎಂಬುವುದು ಗಮನಕ್ಕೆ ಬರುತ್ತದೆ. ರಕ್ತಕ್ರಾಂತಿಯ ಇತಿಹಾಸ ಇರುವ ಸಾಮ್ಯವಾದಿ ವಿಚಾರಸರಣೆಯ ನಕ್ಸಲರ ಬೆದರಿಕೆಯೂ ಗೌರಿ ಲಂಕೇಶರವರಿಗೆ ಇತ್ತು ಎಂದು ಸ್ವತಃ ಗೌರಿಯ ಸಹೋದರ ಇಂದ್ರಜಿತ ಲಂಕೇಶರವರು ಪ್ರಾರಂಭದಲ್ಲಿ ಸಂಶಯ ವ್ಯಕ್ತ ಪಡಿಸಿದ್ದರು. ಆದರೆ ಉದ್ದೇಶಪೂರ್ವಕವಾಗಿ ಆ ಆಯಾಮದಿಂದ ತನಿಖೆಯನ್ನು ಮಾಡದೇ ತನಿಖಾ ಸಂಸ್ಥೆಗಳು ದುರ್ಲಕ್ಷ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಹಾಗಾಗಿ ಗೌರಿ ಹತ್ಯೆಯ ಹಿಂದೆ ನಕ್ಸಲರ ವಿಷಯದಲ್ಲಿ ಕೂಲಂಕುಷ ತನಿಖೆಯಾಗಬೇಕು. ಅಷ್ಟೇಅಲ್ಲದೇ ಇದು ವರೆಗೆ ಕರ್ನಾಟಕ ರಾಜ್ಯದಲ್ಲಿ ೨೫ ಕ್ಕೂ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಡೆಯಿತು. ಆದರೆ ಈ ಹತ್ಯೆಗಳ ಬಗ್ಗೆ ಯೋಗ್ಯ ತನಿಖೆ ನಡೆಯುತ್ತಿಲ್ಲ, ಬದಲಾಗಿ ಶ್ರೀ. ಶರತ್ ಮಡಿವಾಳ ಹತ್ಯೆಯ ಆರೋಪಿಗೆ ಜಾಮೀನು ಸಹ ನೀಡಲಾಗಿದೆ. ಒಟ್ಟಾರೆ ಹಿಂದೂ ಕಾರ್ಯಕರ್ತರ ಹತ್ಯೆ ತನಿಖೆಯನ್ನು ಉದ್ದೇಶ ಪೂರ್ವಕವಾಗಿ ಮೂಲೆಗುಂಪು ಮಾಡಲಾಗಿದೆ. ಹಾಗಾಗಿ ಹಿಂದೂ ಕಾರ್ಯಕರ್ತರ ಹತ್ಯೆಯ ತನಿಖೆಯನ್ನು ವಿಶೇಷ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ.

ಪತ್ರಕರ್ತೆ ಗೌರಿ ಹತ್ಯೆಯ ಪ್ರಕರಣದಲ್ಲಿ ಅಮಾಯಕರ ಯುವಕರನ್ನು ಬಂಧಿಸಿ, ರಾಜಕೀಯ ಲಾಭ ಪಡೆಯಲು ಅಮಾಯಕರನ್ನು ಬಲಿಪಶು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ. ಎಂದರು

ಅವರು ಮುಂದೆ ಮಾತನಾಡುತ್ತಾ, ಮಹಾರಾಷ್ಟ್ರದ ಶನಿಶಿಂಗಣಾಪೂರದ ಶ್ರೀ ಶನೈಶ್ವರ ದೇವಸ್ಥಾನವನ್ನು ಸರಕಾರೀಕರಣಗೊಳಿಸುವ ನಿರ್ಣಯವನ್ನು ಹಿಂಪಡೆಯಿರಿ, ಇಲ್ಲವಾದಲ್ಲಿ ಸರಕಾರದ ಮೇಲೆ ಶನಿದೇವರಷ್ಟೇ ಅಲ್ಲ, ಹಿಂದೂಗಳೂ ಕ್ರೋಧಿತರಾಗುವರು!

ತಮ್ಮನ್ನು ಹಿಂದುತ್ವವಾದಿಗಳೆಂದು ಹೇಳಿಕೊಳ್ಳುವ ಮಹಾರಾಷ್ಟ್ರ ಸರಕಾರವು ಶಿಂಗಣಾಪೂರದ ಶ್ರೀ ಶನೈಶ್ವರ ದೇವಸ್ಥಾನವನ್ನು ಸರಕಾರೀಕರಣಗೊಳಿಸಲು ನಿರ್ಧರಿಸಿದೆ. ಈ ಹಿಂದೆಯೂ ಮಹಾರಾಷ್ಟ್ರ ಸರಕಾರವು ಪಂಢರಪೂರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ, ತುಳಜಾಪುರ ಶ್ರೀ ತುಳಜಾಭವಾನಿ ದೇವಸ್ಥಾನ, ಮುಂಬಯಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಶಿರಡಿಯ ಶ್ರೀ ಸಾಯಿ ಸಂಸ್ಥಾನ, ಹಾಗೆಯೇ ‘ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ಸಮಿತಿ ರಚಿಸಿ ತನ್ಮೂಲಕ ಸರಿಸುಮಾರು ೩೦೬೭ ದೇವಸ್ಥಾನಗಳನ್ನು ವಶಕ್ಕೆ ಪಡೆಯಿತು. ದೇವನಿಧಿಯನ್ನು ಲೂಟಿಮಾಡುವ ಪಾಪಿ ವ್ಯಕ್ತಿಗಳನ್ನು ಶಿಕ್ಷಿಸದೇ ಇರುವ ಸರಕಾರಕ್ಕೆ ಶ್ರೀ ಶನೈಶ್ವರ ದೇವಸ್ಥಾನವನ್ನು ವಶಕ್ಕೆ ಪಡೆಯುವ ಯಾವುದೇ ನೈತಿಕ ಅಧಿಕಾರ ಉಳಿದಿಲ್ಲ. ಸರಕಾರವು ಶ್ರೀ ಶನೈಶ್ವರ ದೇವಸ್ಥಾನದ ಸರಕಾರೀಕರಣವನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ದೇವಸ್ಥಾನವನ್ನು ಪುನಃ ಭಕ್ತರ ವಶಕ್ಕೆ ನೀಡಬೇಕು.

ಸರಕಾರವು ತನ್ನ ವಶಕ್ಕೆ ಪಡೆದಿರುವ ದೇವಸ್ಥಾನದ ದೇವನಿಧಿಯನ್ನು ದೋಚುವವರ ಮೇಲೆ ಇಲ್ಲಿಯವರೆಗೂ ಕ್ರಮ ಜರುಗಿಸದೇ, ಆ ಭ್ರಷ್ಟಾಚಾರಿಗಳನ್ನು ಏಕೆ ಸುಮ್ಮನೆ ಬಿಡಲಾಗಿದೆಯೆಂದು ಉತ್ತರಿಸಬೇಕು. ಇಲ್ಲವಾದಲ್ಲಿ ಸರಕಾರದ ಮೇಲೆ ಶ್ರೀ ಶನಿದೇವರಷ್ಟೇ ಅಲ್ಲ, ಹಿಂದೂಗಳೂ ಕೂಡ ಕೋಪಗೊಳ್ಳುವರು ಎಂದು ಪ್ರತಿಭಟನಾಕಾರರು ಪ್ರತಿಕ್ರಿಯಿಸಿದರು.

ಹಜ್ ಹೌಸ್ ಗೆ ಹಿಂದೂಗಳ ಮೇಲೆ ಅಪರಿಮಿತ ಅತ್ಯಾಚಾರ ಮಾಡಿರುವ ಟಿಪ್ಪು ಸುಲ್ತಾನನ ಹೆಸರನ್ನು ಕೊಟ್ಟು ಅವನ ಉದಾತ್ತೀಕರಣ ಮಾಡುವ ನಿರ್ಣಯವನ್ನು ಸರ್ಕಾರವು ರದ್ದು ಪಡಿಸಬೇಕು !

ಇತಿಹಾಸದಲ್ಲಿ ಕ್ರೂರಕರ್ಮಿಯೆಂದೇ ನೋಂದಣಿಯಾದಂತಹ ಟಿಪ್ಪು ಸುಲ್ತಾನನ ಹೆಸರನ್ನು ಹಜ್ ಹೌಸ್ ಗೆ ಕೊಡುವ ನಿರ್ಣಯವನ್ನು ಕರ್ನಾಟಕದ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಸರಕಾರವು ತೆಗೆದುಕೊಂಡಿದೆ.

ಟಿಪ್ಪುವಿನ ಇತಿಹಾಸವೆಂದರೆ ಹಿಂದೂಗಳ ಮೇಲೆ ಅಪರಿಮಿತ ಅತ್ಯಾಚಾರ ಮಾಡಿರುವ ಮುಸ್ಲಿಂ ರಾಜನೆಂದೇ ಇದೆ ‘ ಹಜ್ ಹೌಸ್ ಗೆ ಹಿಂದೂವಿರೋಧಿ ಟಿಪ್ಪು ಸುಲ್ತಾನನ ಹೆಸರನ್ನು ನೀಡಿ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಸರಕಾರಕ್ಕೆ ಏನನ್ನು ಸಾಧಿಸಬೇಕಾಗಿದೆ? ಇದರಿಂದ ಜೆಡಿಎಸ್ ಮತ್ತು ಕಾಂಗ್ರೆಸ ಸರಕಾರಕ್ಕೆ ಮುಸಲ್ಮಾನರೂ ಟಿಪ್ಪು ಸುಲ್ತಾನನಂತೆ ಕ್ರೂರಕರ್ಮಿಯಾಗಬೇಕು, ಎಂದು ಸೂಚಿಸ ಬೇಕಾಗಿದೆಯೇ? ಈ ಮೊದಲೂ ಹಿಂದಿನ ಕಾಂಗ್ರೆಸ ಸರಕಾರವು ನಾಗರಿಕರು ಬೃಹತ್ ಪ್ರಮಾಣದಲ್ಲಿ ವಿರೋಧಿಸಿದರೂ, ‘ ಟಿಪ್ಪು ಜಯಂತಿಯನ್ನು ಸರಕಾರದ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಿತು. ಆದರೂ ಹಿಂದೂಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುವ ಎಲ್ಲ ಮುಸ್ಲಿಂಯೇತರರನ್ನು (ಹಿಂದೂಗಳನ್ನು) ಮುಸಲ್ಮಾನರನ್ನಾಗಿ ಪರಿವರ್ತಿಸುವ ಪ್ರತಿಜ್ಞೆ ಮಾಡುವ, ದೇವಸ್ಥಾನಗಳಲ್ಲಿ ಗೋಹತ್ಯೆ ಮಾಡುವ, ದೇವಸ್ಥಾನಗಳನ್ನು ಧ್ವಂಸಗೊಳಿಸಿ ದೇವತೆಗಳ ಮೂರ್ತಿಯನ್ನು ಭಗ್ನಗೊಳಿಸುವ ಇಂತಹ ಟಿಪ್ಪು ಸುಲ್ತಾನನ ಕ್ರೌರ್ಯುಶಾಲಿ ಇತಿಹಾಸವನ್ನು ನೋಡಿದರೆ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಹೆಸರು ‘ಹಜ್ ಭವನಕ್ಕೆ ಇಡುವುದೆಂದರೆ ಹಿಂದೂಗಳ ಧರ್ಮಭಾವನೆಯ ಮೇಲೆ ಉಪ್ಪು ಸವರಿದಂತಾಗುವುದು. ಆದುದರಿಂದ ಕರ್ನಾಟಕ ಸರಕಾರವು ‘ಹಜ್ ಹೌಸಗೆ ಟಿಪ್ಪು ಸುಲ್ತಾನನ ಹೆಸರು ಇಡುವ ನಿರ್ಣಯವನ್ನು ಹಿಂಪಡೆಯಬೇಕು ಎನ್ನುವ ಬೇಡಿಕೆಯನ್ನು ಸಹ ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.

ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಧರ್ಮೇಂದ್ರ, ಹಿಂದೂ ಯುವ ಸೇನೆಯ ವೀರಪ್ಪ, ಧರ್ಮಪ್ರೇಮಿಗಳಾದ ದಯಾನಂದ ವಳಚ್ಚಿಲ್, ಸತೀಶ್ ಉರ್ವ, ಮಂಜುನಾಥ ಅಡ್ಯಾರ್ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version