ಗ್ರಾಮೀಣ ವಲಯ ಆಟೋ ರಿಕ್ಷಾ ಉಡುಪಿ ನಗರ ಭಾಗಕ್ಕೆ ಪ್ರವೇಶಿಸಲು ಅನುಮತಿ : ಯಶ್ಪಾಲ್ ಸುವರ್ಣ
ಉಡುಪಿ: ನಗರ ಭಾಗಕ್ಕೆ ಗ್ರಾಮಾಂತರ ವಲಯದ ಆಟೋ ರಿಕ್ಷಾಗಳಿಗೆ ಪ್ರವೇಶ ನಿಷೇಧ ಮಾಡಿ ದಂಡ ವಿಧಿಸುತ್ತಿರುವ ಬಗ್ಗೆ ರಿಕ್ಷಾ ಚಾಲಕರ ಮನವಿಯ ಬಗ್ಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.
ಸಭೆಯಲ್ಲಿ ಈ ಹಿಂದಿನಂತೆ ಉಡುಪಿ ತಾಲ್ಲೂಕು (ಬ್ರಹ್ಮಾವರ ಹಾಗೂ ಕಾಪು ತಾಲೂಕು ಸಹಿತ) ವ್ಯಾಪ್ತಿಯ ಆಟೋ ರಿಕ್ಷಾಗಳಿಗೆ ಉಡುಪಿ ನಗರ ಪ್ರವೇಶಿಸಲು ಅನುಮತಿ ನೀಡುವಂತೆ ನಿರ್ಣಯಿಸಲಾಯಿತು.
ಗ್ರಾಮಾಂತರ ಭಾಗದ ಆಟೋ ರಿಕ್ಷಾಗಳು ಉಡುಪಿ ನಗರದಲ್ಲಿ ಬಾಡಿಗೆ ಮಾಡದೇ ಕೇವಲ ಪ್ರಯಾಣಿಕರನ್ನು ಉಡುಪಿ ನಗರಕ್ಕೆ ಕರೆತರಲು ಹಾಗೂ ಉಡುಪಿ ನಗರ ಭಾಗದ ರಿಕ್ಷಾಗಳು ಗ್ರಾಮಾಂತರ ಭಾಗಕ್ಕೆ ಪ್ರವೇಶಿಸಲು ಅವಕಾಶ ನೀಡುವ ಬಗ್ಗೆ ನಿರ್ಣಯಿಸಲಾಯಿತು.
ಉಡುಪಿ ನಗರದಲ್ಲಿ ರಿಕ್ಷಾ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ನಗರಸಭೆ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ರಿಕ್ಷಾ ಚಾಲಕರು ಉಡುಪಿ ಜನತೆಗೆ ಗೌರವಯುತವಾಗಿ ಸೇವೆ ನೀಡುವ ನಿಟ್ಟಿನಲ್ಲಿ ಪೂರಕ ನಿಯಮಾವಳಿಗಳನ್ನು ರೂಪಿಸಲಾಗುವುದು.
ಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ನಗರಸಭೆ ಪೌರಾಯುಕ್ತರಾದ ಉದಯ ಶೆಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಉಪಸ್ಥಿತರಿದ್ದರು.