ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನ ಮಡಕೆ ಮಾರಾಟ: ಹಳೆಯದರ ಮೆಲುಕು

Spread the love

ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನ ಮಡಕೆ ಮಾರಾಟ: ಹಳೆಯದರ ಮೆಲುಕು

ಬೆಳ್ತಂಗಡಿ: ಸನಾತನ ಕಾಲದಿಂದ ಮಣ್ಣಿನ ಮಡಕೆ ತಯಾರಿಸುವುದು ಭಾರತೀಯರ ಸಾಂಪ್ರದಾಯಿಕ ಕಸುಬು. ಇಂದು ಎಲ್ಲರ ಮನೆಗಳಲ್ಲಿ ಸ್ಟೀಲ್ ಪಾತ್ರೆಗಳು ರಾರಾಜಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕುಂಬಾರನ ಮಡಕೆಗೆ ಎಲ್ಲೋ ಒಂದು ಕಡೆ ಬೆಲೆ ಬರುತ್ತಿದೆ. ಬಹಳ ಹಿಂದೆ ಮಡಕೆ ತಯಾರಿಸಿ ಮನೆಗೆ ತಂದು ಮಾರಾಟ ಮಾಡುವ ಕ್ರಮವೊಂದಿತ್ತು. ಆದರೆ ಇಂದು ಮಡಕೆಗಳ ಮಾರಾಟದ ಹಂತದಲ್ಲಿ ವಿಸ್ತರಣೆಯನ್ನು ಪಡೆದುಕೊಂಡು ಜಾತ್ರೆಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ ಅಲ್ಲದೆ ಇತರ ಕಾರ್ಯಕ್ರಮಗಳ ಮೂಲಕ ಪ್ರಚಾರಗಿಟ್ಟಿಸಿಕೊಂಡು ಪ್ರಸಿದ್ಧಿ ಪಡೆದುಕೊಂಡಿದೆ. ಕೇವಲ ಗೃಹೋಪಯೋಗಿ ಅಲ್ಲದೆ ಅಲಂಕಾರಿಕ ವಸ್ತುವಾಗಿ ಮಡಕೆ ತನ್ನ ಇರುವಿಕೆಯ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಸಫಲತೆಯನ್ನು ಪಡೆದಿದೆ.

ಈ ಬಾರಿ ಉಜಿರೆಯಲ್ಲಿ ನಡೆದ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಹಲವಾರು ವಿಭಿನ್ನತೆಗಳಿಗೆ ಸಾಕ್ಷಿಯಾಗಿದೆ. ಬೆಳ್ತಂಗಡಿ ತಾಲೂಕಿನ ಲಾಲ್ಯದ ವಿವೇಕ ನಗರದ ಸಂಜಯ್ ಕುಂಬಾರ ಎಂಬುವವರ ಮಡಕೆ ಮಾರಾಟ ಪ್ರಮುಖ ಆಕರ್ಷಣೆಯಾಗಿತ್ತು. ಮಡಕೆ ತಯಾರಿಕೆಯು ಇವರ ವಂಶ ಪಾರಂಪರ್ಯದ ಕಸುಬಾಗಿದ್ದು, ತಂದೆ-ಮಗ ಇಂದು ನಡೆಸಿಕೊಂಡು ಹೋಗುತ್ತಿದ್ದಾರೆ. ಬಹಳ ಜಾಗರೂಕತೆಯಿಂದ ಈ ಮಡಕೆಯನ್ನು ಸಿದ್ಧಪಡಿಸಲಾಗುತ್ತದೆ.

ಮಡಕೆಯನ್ನು ಹೊಡೆದು ಹಾಕುವುದು ಸುಲಭದ ಕೆಲಸವಾದರು, ತಯಾರಿಸುವುದು ಕಷ್ಟದ ಸಂಗತಿ.ಬಿತ್ತನೆಯಾಗುವ ಮುನ್ನ ಗದ್ದೆಯಿಂದ ಮಣ್ಣು ತಂದು ಶೇಖರಿಸಿಕೊಂಡು ನಂತರ ಅದನ್ನು ಚಕ್ರದಲ್ಲಿ ಮಣ್ಣನ್ನು ಹದಮಾಡಿ ನಂತರ ಅದರಿಂದ ಮಡಕೆಯನ್ನು ತಯಾರಿಸುತ್ತಾರೆ. ವೈಜ್ಞಾನಿಕವಾಗಿ ಆಹಾರವನ್ನು ಮಡಕೆಯಲ್ಲಿ ತಯಾರಿಸುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಇವರು ತಯಾರಿಸುವಂತಹ ಪಾತ್ರೆಗಳೆಂದರೆ ಹೂಜಿ (ಅನ್ನ ತಯಾರಿಸಲು), ಬಿಸಾಲೆ(ಪದಾರ್ಥಕ್ಕಾಗಿ), ತಟ್ಟೆ, ಕಾವಲಿ(ದೊಸೆಗಾಗಿ) ಮೊದಲಾದವುಗಳನ್ನು ತಯಾರಿಸಿ ಬದುಕು ಸಾಗಿಸುತ್ತಿದ್ದಾರೆ. ಬೇರೆ ಯಾವುದೇ ಕಸುಬುಗಳನ್ನು ಮಾಡದೇ ಕೇವಲ ಮಡಕೆಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.ಸಾಹಿತ್ಯ ಅಭಿಮಾನಿಗಳೂ ಈ ಮಡಕೆಗಳತ್ತ ತಮ್ಮ ಕಣ್ಣಚಿತ್ತ ಹರಿಸಿ ಹೋಗುತ್ತಿದ್ದಾರೆ. ಸ್ವತಃ ತಯಾರಿಸಿದ ಮಡಕೆಗಳು ಕನ್ನಡ ಸಾಹಿತ್ಯ ಸಮೇಳನದಲ್ಲಿ ನೋಡುಗರ ಮನಮೆಚ್ಚುವ ಹಾಗೆ ಮತ್ತೆ ಪುರಾತನ ಕಾಲವನ್ನು ನೆನೆಪಿಸಿದವು

ವರದಿ: ಪಲ್ಲವಿ ಜೋಶಿ, ದಿವ್ಯ ಪೂಜಾರಿ, ಚಿತ್ರ : ಪೌಲೋಸ್


Spread the love