ಜಿಲ್ಲೆಯಲ್ಲಿ ಕಾಟಾಚಾರದ ಜನಸ್ಪಂದನ: ವಿಕಾಸ್ ಹೆಗ್ಡೆ ಆರೋಪ

Spread the love

ಜಿಲ್ಲೆಯಲ್ಲಿ ಕಾಟಾಚಾರದ ಜನಸ್ಪಂದನ: ವಿಕಾಸ್ ಹೆಗ್ಡೆ ಆರೋಪ

  • ಅಧಿಕಾರಿಗಳು ಜನವಿರೋಧಿ ನಿಲುವು ತೋರಿದರೆ ಉಗ್ರ ಹೋರಾಟದ ಎಚ್ಚರಿಕೆ

ಕುಂದಾಪುರ: ಜಿಲ್ಲೆಯಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿನ ಗೊಂದಲಗಳಿಗೆ ಅಧಿಕಾರಿಗಳ ಜನ ವಿರೋಧಿ ವರ್ತನೆಗಳೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ಜನಸ್ಪಂದನ ಕಾರ್ಯಕ್ರಮವು ಉಡುಪಿ ಜಿಲ್ಲೆಯ ಹೆಚ್ಚಿನ ತಾಲ್ಲೂಕುಗಳಲ್ಲಿ ಗೊಂದಲಗಳು ಏರ್ಪಡಲು ಅಧಿಕಾರಿಗಳ ಜನವಿರೋಧಿ ವರ್ತನೆಗಳೇ ಕಾರಣ. ಜಿಲ್ಲೆಯಲ್ಲಿನ ಜನಸ್ಪಂದನ ಕಾರ್ಯಕ್ರಮಗಳು ಕೇವಲ ಕಾಟಾಚಾರಕ್ಕೆ ನಡೆಯುತ್ತಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲಾ. ಇಲಾಖೆಯ ಮೆಟ್ಟಿಲುಗಳನ್ನು ವರ್ಷಗಳಿಂದ ಹತ್ತಿ ಇಳಿಯುವುದು ಬಿಟ್ಟರೆ ಜನರಿಗೆ ಸಮಸ್ಯೆಗಳ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ‌.

ಕುಂದಾಪುರ ತಾಲ್ಲೂಕಿನ ಜನಸ್ಪಂದನ ಕಾರ್ಯಕ್ರಮವಾಗಿ ತಿಂಗಳು ಕಳೆಯುತ್ತಾ ಬಂದರೂ ಸಮಸ್ಯೆಗಳ ಪರಿಹಾರ ಕೋರಿ ಅರ್ಜಿ ನೀಡಿದ ಹೆಚ್ಚಿನವರಿಗೆ ಸಂಬಂಧಿತ ಇಲಾಖೆಗಳಲ್ಲಿ ಹಾರಿಕೆಯ ಉತ್ತರ ದೊರೆಯುತ್ತಿದೆ. ಮುಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ ಹಿಂದೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದ ಅರ್ಜಿ, ಅದರಲ್ಲಿ ವಿಲೇವಾರಿ ಆದ ಅರ್ಜಿ, ಬಾಕಿ ಇರುವ ಅರ್ಜಿ, ಅರ್ಜಿ ಬಾಕಿ ಇರಲು ಕಾರಣವೇನು ಎನ್ನುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಬೇಕು ಹಾಗೂ ಅಧಿಕಾರಿಗಳು ಜನರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಅಧಿಕಾರಿಗಳು ಜನವಿರೋಧಿ ನಿಲುವು ತೋರಿದರೆ ಅದರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ದೂರು ನೀಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ‌.


Spread the love