ಜೀವಕ್ಕೆ ಅಪಾಯವಿದ್ದ ಕಾರಣ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ: ಸಂಸದೆ ಶೋಭಾ ಕರಂದ್ಲಾಜೆ

Spread the love

ಜೀವಕ್ಕೆ ಅಪಾಯವಿದ್ದ ಕಾರಣ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ: ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು: ‘ಉಡುಪಿ ಕೃಷ್ಣಮಠದಲ್ಲಿ ಪ್ರಧಾನಿ ಜೀವಕ್ಕೆ ಅಪಾಯವಿತ್ತು. ಹೀಗಾಗಿ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಲಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಬುಧವಾರ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣ ಮಠಕ್ಕೆ ಭೇಟಿ ನೀಡದಿರುವುದರಿಂದ ನೋವಾಗಿದೆ’ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಂಗಳವಾರ ಬೇಸರ ವ್ಯಕ್ತಪಡಿಸಿದ್ದರು. ಉಡುಪಿಯಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಬಹುದು ಎಂಬ ನಿರೀಕ್ಷೆ ಹಲವರಲ್ಲಿ ಇತ್ತು. ಉಡುಪಿಗೆ ಬಂದ ಪ್ರಧಾನಿ ಕೃಷ್ಣನ ದರ್ಶನ ಏಕೆ ಪಡೆಯಲಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ, ‘ಕೃಷ್ಣಮಠದ ಪರಿಸರ ಪರಿಶೀಲಿಸಿದ್ದ ಎಸ್‌ಪಿಜಿ (ವಿಶೇಷ ಭದ್ರತಾ ದಳ) ಸಿಬ್ಬಂದಿ ಕೃಷ್ಣಮಠಕ್ಕೆ ಪ್ರಧಾನಿ ಭೇಟಿ ನೀಡುವುದು ಭದ್ರತೆಯ ದೃಷ್ಟಿಯಿಂದ ಸಮರ್ಪಕವಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಲಿಲ್ಲ’ ಎಂದು ವಿವರಿಸಿದ್ದಾರೆ.

‘ನಾನು ಅಧಿಕಾರಕ್ಕೆ ಬರುವ ಮೊದಲು ಹಲವು ಬಾರಿ ಉಡುಪಿ ಕೃಷ್ಣಮಠಕ್ಕೆ ಬಂದಿದ್ದೆ. ಈಗ ಇಷ್ಟು ಹತ್ತಿರ ಇದ್ದರೂ ಕೃಷ್ಣನ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮೋದಿ ವಿಷಾದ ವ್ಯಕ್ತಪಡಿಸಿದ್ದರು’ ಎಂದು ಶೋಭಾ ಹೇಳಿದ್ದಾರೆ.

‘ಕೃಷ್ಣಮಠಕ್ಕೆ ಒಮ್ಮೆ ಹೋಗದಿದ್ದರೆ ಅವರಿಗೆ ಕೃಷ್ಣಭಕ್ತಿ ಇಲ್ಲ ಎಂದು ಅರ್ಥವಲ್ಲ. ಕೃಷ್ಣನ ಭಕ್ತರು ಈ ವಿಷಯ ಅರ್ಥಮಾಡಿಕೊಳ್ಳಬೇಕು. ಅಪಪ್ರಚಾರಕ್ಕೆ ಕಿವಿಕೊಡಬಾರದು’ ಎಂದು ವಿನಂತಿಸಿದ್ದಾರೆ.


Spread the love