ಜೋಡುಕರೆ ಕಂಬಳದ ಪೂರ್ವಭಾವಿ ರೈತೋತ್ಸವ ಕಾರ್ಯಕ್ರಮ ಉದ್ಘಾಟನೆ
ಕುಂದಾಪುರ: ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ, ಹಿರಿಯರು ಆರಂಭಿಸಿದ ಸಾಂಪ್ರದಾಯಿಕ ಕಂಬಳಂತಹ ಪಾರಂಪರಿಕ ನಿಲ್ಲಿಸಬಾರದು ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.
ಮುಳ್ಳಿಕಟ್ಟೆ ನಗುಸಿಟಿಯಲ್ಲಿ ಗುರುವಾರ ಸಂಜೆ ಬೈಂದೂರು ತಾಲ್ಲೂಕು ರೈತ ಸಂಘದ ಆಶ್ರಯದಲ್ಲಿ ನಡೆಯುವ ಜೋಡುಕರೆ ಕಂಬಳದ ಪೂರ್ವಭಾವಿ ನಡೆದ ರೈತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾರಂಪರಿಕವಾಗಿ ನಡೆಯುವ ಕಂಬಳ ನಿಂತರೆ ಊರಿಗೆ ಒಳಿತಾಗುವುದಿಲ್ಲ ಎನ್ನುವ ನಂಬಿಕೆ ಇದೆ. ರೈತನ ಕೋಣ ಚೆನ್ನಾಗಿದ್ದರೆ ರೈತ ಚೆನ್ನಾಗಿದ್ದಾನೆ ಎಂದರ್ಥ. ಕಂಬಳದ ಮನೆಯವರಿಗೆ ಊರಿನಲ್ಲಿ ವಿಶೇಷ ಗೌರವ ಇದೆ. ನಮ್ಮಲ್ಲಿರುವ ಸಹಕಾರ ಮನೋಭಾವ ಹಾಗೂ ಉದಾರತೆ ಪ್ರಪಂಚದ ಯಾವ ದೇಶದಲ್ಲಿಯೂ ಇಲ್ಲ. ನಾನು ಶಾಸಕನಾಗಿದ್ದಾಗ ಸಂಬಳ 750 ಇತ್ತು, ಈಗ 75,000 ಇದ್ದರೂ ಸಾಲೋದಿಲ್ಲ ಎನ್ನುತ್ತಾರೆ. ಅದರಲ್ಲೂ ಲಂಚದ ಸಂಗತಿಗಳು ಬೇರೆ. ಜನಪ್ರತಿನಿಧಿಗಳನ್ನು ಹದ್ದುಬಸ್ತಿನಲ್ಲಿಡುವುದು ರೈತನಿಂದ ಮಾತ್ರ ಸಾಧ್ಯ ಎಂದರು.
ಗುಜ್ಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಸೌಪರ್ಣಿಕಾ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ತ್ರಾಸಿ ಇದರ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು, ಹೊಸಾಡು ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಆರಾಟೆ, ಹೆಮ್ಮಾಡಿ ಜನತಾ ಪಿಯು ಕಾಲೇಜು ಪ್ರಾಂಶುಪಾಲ ಗಣೇಶ್ ಮೊಗವೀರ, ಕೃಷ್ಣ ದೇವಾಡಿಗ ಬೈಂದೂರು, ಬೈಂದೂರು ವಲಯ ಮರಾಠಿ ಸುಧಾರಕರ ಸಂಘದ ಅಧ್ಯಕ್ಷ ಭೋಜ ನಾಯ್ಕ್ ಇದ್ದರು.
ಬೈಂದೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೀಪಕ್ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಎಚ್.ಎಸ್.ಶೆಟ್ಟಿ ಹಾಗೂ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ತಗ್ಗರ್ಸೆ ನಾರಾಯಣ ಹೆಗ್ಡೆ, ಭೋಜರಾಜ್ ಶೆಟ್ಟಿ ಹಳ್ನಾಡ್ ಮಾತನಾಡಿದರು.
ಉದ್ಯಮಿ ಎಚ್.ಎಸ್.ಶೆಟ್ಟಿ, ಸಹಕಾರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನಾರಾಯಣ ಹೆಗ್ಡೆ ತಗ್ಗರ್ಸೆ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಹರ್ಕೂರು ಮಂಜಯ್ಯ ಶೆಟ್ಟಿ, ಹಕ್ಕಾಡಿ ಜಗದೀಶ್ ಪೂಜಾರಿ, ವಿಜಯ್ ಶಾಸ್ತ್ರಿ ಹಾಗೂ ಗುಜ್ಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಹೆಮ್ಮಾಡಿ ಜನತಾ ಪಿ.ಯು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ರಸೋಲ್ಲಾಸ ಹಾಗೂ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಮಂಗಳೂರು ಇವರಿಂದ ನಾಟ್ಯ ವೈಭವ ನಡೆಯಿತು.
ನಾವುಂದದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ದೀಪಕ್ ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಜ್ವಲ್ ಶೆಟ್ಟಿ, ಸಂತೋಷ ಪೂಜಾರಿ, ಗಣೇಶ್ ಪೂಜಾರಿ ಗೌರವಾರ್ಪಣೆ ಮಾಡಿದರು. ಅನೂಪ್ ದೇವಾಡಿಗ , ದಿಶಾಂತ್ ಡಿ ಶೆಟ್ಟಿ ಸ್ಮರಣಿಕೆ ಹಸ್ತಾಂತರಿಸಿದರು. ಆನಂದ ಖಾರ್ವಿ ವಂದಿಸಿದರು. ಪ್ರಣೂತ್ ಗಾಣಿಗ ಹಾಗೂ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.