Home Mangalorean News Kannada News ಟಿ.ಜೆ ಅಬ್ರಹಾಂ 193 ಕೋಟಿ ರೂಪಾಯಿ ವಂಚನೆ ದೂರು ದಾಖಲಿಸಿದಾಗ ರಾಜೀನಾಮೆ ನೀಡಿದ್ದೀರಾ?

ಟಿ.ಜೆ ಅಬ್ರಹಾಂ 193 ಕೋಟಿ ರೂಪಾಯಿ ವಂಚನೆ ದೂರು ದಾಖಲಿಸಿದಾಗ ರಾಜೀನಾಮೆ ನೀಡಿದ್ದೀರಾ?

Spread the love

ಟಿ.ಜೆ ಅಬ್ರಹಾಂ 193 ಕೋಟಿ ರೂಪಾಯಿ ವಂಚನೆ ದೂರು ದಾಖಲಿಸಿದಾಗ ರಾಜೀನಾಮೆ ನೀಡಿದ್ದೀರಾ?

  • ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನೆ

ಉಡುಪಿ: ಪ್ರಮೋದ್ ಮಧ್ವರಾಜ್ ರವರೇ ಮೂಡ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿರುವ ತಾವು ಕರ್ನಾಟಕದ ಮೀನುಗಾರಿಕ,ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾಗಿದ್ದ ವೇಳೆ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು 193 ಕೋಟಿ ರೂಪಾಯಿ ಮೊತ್ತದ ವಂಚನೆ ಮಾಡಿದ ದೂರು ತಮ್ಮ ಮೇಲೆ ದಾಖಲಿಸಿದ್ದ ಸಂದರ್ಭದಲ್ಲಿ ತಾವು ರಾಜೀನಾಮೆ ನೀಡಿದ್ದೀರಾ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.

ಇಂದು ಸಿದ್ದರಾಮಯ್ಯ ಅವರ ವಿರುದ್ದ ರಾಜಕೀಯ ಪ್ರೇರಿತರಾಗಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಆಬ್ರಹಾಂ ಸೇರಿದಂತೆ ಮೂವರು ವ್ಯಕ್ತಿಗಳು ಖಾಸಗಿ ದೂರು ನೀಡಿದ್ದು ಪ್ರಕರಣದಲ್ಲಿ ಎಲ್ಲಿ ಕೂಡ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಆದರೂ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಸುಳ್ಳು ದೂರು ರಾಜ್ಯಪಾಲರಿಗೆ ನೀಡಲಾಗಿದೆ.

ಅಂದು ತಮ್ಮ ವಿರುದ್ದ ಇದೇ ಸಾಮಾಜಿಕ ಕಾರ್ಯಕರ್ತ ಟಿ ಜೆ ಆಬ್ರಹಾಂ  ವಂಚನೆ ಮಾಡಿದ ದೂರು ದಾಖಲಿಸಿದ್ದ ಆ ಸಂದರ್ಭದಲ್ಲಿ   ಜವಾಬ್ದಾರಿ ಯುತ ಸಚಿವರಾಗಿದ್ದ ತಮ್ಮ ರಾಜೀನಾಮೆಯನ್ನು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ  ಕೇಳಿರಲಿಲ್ಲ. ಅಂದು ಆ ವ್ಯಕ್ತಿ ತಮ್ಮ ವಿರುದ್ದ ಸುಳ್ಳು ದೂರನ್ನು ದಾಖಲಿಸಿದ್ದು ತಾವು ಕೂಡ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಪಡೆದು ಹೊರಬಂದಿದ್ದಿರಿ ಎನ್ನುವುದು ಮರೆಯಬೇಡಿ. ಅಂತೆಯೇ ಸಿದ್ದರಾಮಯ್ಯ ಅವರು ಕೂಡ ಮೂಡ ಪ್ರಕರಣದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ ಆದ್ದರಿಂದ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ

ತಾವು ಕಾಂಗ್ರೆಸ್ ಪಕ್ಷ ಬಿಟ್ಟು ಇಂದು ಬಿಜೆಪಿಯಲ್ಲಿ ಇರಬಹುದು ಆದರೆ ತಮಗೆ ಹಿಂದೆ ಇದೇ ಅಬ್ರಹಾಂ ನೀಡಿದ ಮಾನಸಿಕ ಕಿರುಕುಳ ಮರೆಯಬಾರದು. ಆರೋಪ ಮಾಡುವಾಗ ಕೂಡ ಹಿಂದೆ ಮುಂದೆ ನೋಡುವ ಜಾಯಮಾನ ಇರಲಿ. ತಾವು ಇಂದು ಬಿಜೆಪಿ ಪಕ್ಷದಲ್ಲಿ ಕೂಡ ಎಲ್ಲಿಯೂ ಸಲ್ಲದವರಂತೆ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರಿಗಾಗಿ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲಾಗದ ತಾವು ಮತ್ತು ತಮ್ಮ ಬಿಜೆಪಿ ಪಕ್ಷ ಇಂತಹ ಮೋಸದ ವ್ಯಕ್ತಿಗಳೊಂದಿಗೆ ಸೇರಿಕೊಂಡು ನಡೆಸುತ್ತಿರುವ ಕೆಟ್ಟ ರಾಜಕೀಯವನ್ನು ನಾವು ಪ್ರಬಲವಾಗಿ  ಖಂಡಿಸುತ್ತೇವೆ. ಸಿದ್ದರಾಮಯ್ಯ ಅವರ ಬದುಕು ತೆರೆದ ಪುಸ್ತಕವಾಗಿದ್ದು  ಕೂಡಲೇ ಈ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬರಲಿದ್ದಾರೆ ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version