ತಾಯಿ, ಮಕ್ಕಳ ಹತ್ಯೆ ಆಘಾತಕಾರಿ, ಆದಷ್ಟು ಬೇಗ ಆರೋಪಿ ಬಂಧಿಸುವ ವಿಶ್ವಾಸ – ರಮೇಶ್ ಕಾಂಚನ್

Spread the love

ತಾಯಿ, ಮಕ್ಕಳ ಹತ್ಯೆ ಆಘಾತಕಾರಿ, ಆದಷ್ಟು ಬೇಗ ಆರೋಪಿ ಬಂಧಿಸುವ ವಿಶ್ವಾಸ – ರಮೇಶ್ ಕಾಂಚನ್

ಉಡುಪಿ: ಜಿಲ್ಲೆಯ ನೇಜಾರುವಿನಲ್ಲಿ ದೀಪಾವಳಿಯ ಹಬ್ಬದಂದು ಬೆಳ್ಳಂಬೆಳಗ್ಗೆ ಅಕ್ರಮವಾಗಿ ಮನೆಗೆ ನುಗ್ಗಿ ತಾಯಿ ಮತ್ತು ಮೂವರು ಮಕ್ಕಳ ಅಮಾನುಷ ಕೊಲೆಯು ನಡೆದಿದ್ದು ಇದು ಅತ್ಯಂತ ಆಘಾತಕಾರಿ ಘಟನೆಯಾಗಿದ್ದು ಇಡೀ ಜಿಲ್ಲೆಯು ದೀಪಾವಳಿ ಹಬ್ಬದ ಸಂಭ್ರದಲ್ಲಿರುವಾಗ ನೋವಿನ ವಾತಾವರಣ ಸೃಷ್ಟಿ ಮಾಡುವಂತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಹೇಳಿದ್ದಾರೆ.

ಬುದ್ದಿವಂತರ ಜಿಲ್ಲೆ ಎಂದು ಹೆಸರು ಪಡೆದಿರುವ ಉಡುಪಿಯಲ್ಲಿ ಇಂತಹ ಅಮಾನುಷ ಘಟನೆ ನಡೆದಿರುವುದು ಇದೇ ಮೊದಲು ಹಾಗೂ ಅತ್ಯಂತ ಆಘಾತಕಾರಿ ವಿಚಾರವಾಗಿದೆ. ನೋವಿನಲ್ಲಿರುವ ಕುಟುಂಬದ ಸದಸ್ಯರೊಂದಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಜೊತೆಯಾಗಿದ್ದು ಪ್ರಕರಣದ ನಿಷ್ಪಕ್ಷಪಾತವಾದ ತನಿಖೆ ನಡೆಯುವಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅವರ ತಂಡ ಕಾರ್ಯೋನ್ಮುಖವಾಗಿದೆ.

ಘಟನೆಯ ಮಾಹಿತಿಯನ್ನು ಈಗಾಗಲೇ ರಾಜ್ಯ ಗೃಹ ಸಚಿವರು ಪಡೆದುಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಪೊಲೀಸರಿಂದ ಮಾಹಿತಿಯನ್ನು ಪಡೆದಿದ್ದಾರೆ.

ಪ್ರಕರಣದ ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ ಕೂಡ ಆತನನ್ನು ಪೊಲೀಸರು ಆದಷ್ಟೂ ಬೇಗ ಬಂಧಿಸುವ ವಿಶ್ವಾಸವಿದ್ದು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವುದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಒಕ್ಕೊರಲ ಆಗ್ರಹವಾಗಿದೆ. ಇನ್ನು ಮುಂದೆ ಇಂತಹ ಘಟನೆ ಜಿಲ್ಲೆಯಲ್ಲಿ ನಡೆಯದಂತೆ ಎಚ್ಚರವಹಿಸುವುದರೊಂದಿಗೆ ಆರೋಪಿಯನ್ನು ಪೊಲೀಸ್ ಇಲಾಖೆ ಅತೀ ಶೀಘ್ರದಲ್ಲಿ ಬಂಧಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.


Spread the love