ದಿಗಂತ್ ನಾಪತ್ತೆ ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಯತ್ನ: ಶಾಸಕರು, ಸಂಘ ಪರಿವಾರದ ಪ್ರಮುಖರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

Spread the love

ದಿಗಂತ್ ನಾಪತ್ತೆ ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಯತ್ನ: ಶಾಸಕರು, ಸಂಘ ಪರಿವಾರದ ಪ್ರಮುಖರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

ಮಂಗಳೂರು: ಫರಂಗಿಪೇಟೆಯ ಯುವಕ ದಿಗಂತ್ ನಾಪತ್ತೆಯಾಗಿದ್ದ ವೇಳೆ ಪ್ರಕರಣದ ಬಗ್ಗೆ ಕೋಮು ಬಣ್ಣ ಹಚ್ಚಿ ಮತೀಯ ಸಂಘರ್ಷಕ್ಕೆ ಶಾಸಕರ ಸಹಿತ ಸಂಘ ಪರಿವಾರದ ಪ್ರಮುಖರು ಪ್ರಯತ್ನಿಸಲಾಗಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪಶ್ಚಿಮ ವಲಯ ಐಜಿಪಿಗೆ ಮನವಿ ಸಲ್ಲಿಸಲಾಯಿತು.

ಪೊಲೀಸ್ ಇಲಾಖೆಯ ಶ್ರಮದ ಕಾರಣ ಯುವಕ ದಿಗಂತ್ನ ಸುರಕ್ಷಿತ ಪತ್ತೆಯ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ನಾಪತ್ತೆ ವಿಚಾರ ಬಹಿರಂಗಗೊಂಡ ತಕ್ಷಣ ಬಜರಂಗ ದಳ ಸಹಿತ ಸಂಘ ಪರಿವಾರದ ಸಂಘಟನೆಗಳು ಹಾಗೂ ಬಿಜೆಪಿಯ ಪ್ರಮುಖರು, ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಎರಡು ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಯತ್ನ ನಡೆಸಿದ್ದಾರೆ. ಯಾವುದೇ ಆಧಾರವಿಲ್ಲದೆ ವಿದ್ಯಾರ್ಥಿ ದಿಗಂತ್ನನ್ನು ಅಪಹರಣ ಮಾಡಲಾಗಿದೆ. ಮುಸ್ಲಿಂ ಸಮುದಾಯ ಈ ಘಟನೆಯ ಹಿಂದಿದೆ ಎಂದು ಕತೆ ಕಟ್ಟಲಾಗಿದೆ. ಮಾಧ್ಯಮಕ್ಕೂ ಅದೇ ರೀತಿಯ ಹೇಳಿಕೆ ನೀಡಲಾಗಿದೆ. ಮಾತ್ರವಲ್ಲದೆ, ಫರಂಗಿಪೇಟೆ ಪರಿಸರದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನೇ ಗುರಿಯಾಗಿಸಿ ಅಮ್ಮೆಮಾರ್ ಪ್ರದೇಶದಲ್ಲಿ ಬಹು ಸಂಖ್ಯಾತರು ಓಡಾಡುವುದೇ ಕಷ್ಟವಾಗಿದೆ. ಅಲ್ಲಿ ಓಡಾಡುವವರಿಗೆ ಜೀವ ಭಯ ಒಡ್ಡಲಾಗಿದೆ. ಗಾಂಜಾ ವ್ಯಸನಿಗಳು, ಪೆಡ್ಲರ್ಗಳು, ಕ್ರಿಮಿನಲ್ಗಳು ಅಮ್ಮೆಮಾರ್ನಲ್ಲಿ ತುಂಬಿಕೊಂಡಿದ್ದಾರೆ ಎಂದು ಒಂದು ಊರು ಹಾಗೂ ಸಮುದಾಯವನ್ನು ಅಪರಾಧಿಗಳನ್ನಾಗಿಸಿ ಪೂರ್ವಾಗ್ರಹಗಳನ್ನು ಹುಟ್ಟಿಸುವ ಯತ್ನ ನಡೆದಿದೆ. ಪ್ರಕರಣದ ತನಿಖೆಗೆ ಅವಕಾಶ ನೀಡದೆ ಮತೀಯತೆ ಆಧಾರದಲ್ಲಿ ಪ್ರತಿಭಟನೆ, ಬಂದ್ ನಡೆಸಿ ಪೊಲೀಸ್ ಇಲಾಖೆಯನ್ನು ಒತ್ತಡಕ್ಕೆ ಸಿಲುಕಿಸಲಾಗಿದೆ. ಪೊಲೀಸ್ ಇಲಾಖೆಯನ್ನು ಕ್ರಿಮಿನಲ್ ಸಮುದಾಯದ ಪಕ್ಷಪಾತಿಗಳು ಎಂದು ಆರೋಪಿಸಲಾಗಿದೆ. ಬಿಜೆಪಿ ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಜಾ ಹಾಗೂ ಸಂಘ ಪರಿವಾರದ ಸ್ಥಳೀಯ ನಾಯಕರು ದ್ವೇಷ ಭಾಷಣ ಮಾಡಿದ್ದಾರೆ. ಇದು ನೆಲದ ಕಾನೂನು ಹಾಗೂ ಸಂವಿಧಾನದ ಜಾತ್ಯತೀತ ಆಶಯ, ನಿಯಮಗಳಿಗೆ ವಿರುದ್ಧವಾಗಿದೆ. ಕೋಮು ಸೂಕ್ಷಮ ಪ್ರದೇಶಗಳು ಎಂದು ಗುರುತಿಸಲಾಗಿರುವ ಫರಂಗಿಪೇಟೆ, ಬಂಟ್ವಾಳ, ಮಂಗಳೂರಿನಲ್ಲಿ ಇಂತಹ ನಡೆಗಳು ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಸ್ಯಾತೆ ಇದೆ. ಹಾಗಾಗಿ ಪ್ರಚೋದನಾಕಾರಿ ಭಾಷಣ ಮಾಡಿದ ಶಾಸಕ ಭಾರತ ಶೆಟ್ಟಿ, ಹರೀಶ್ ಪೂಂಜಾ ಹಾಗೂ ಬಜರಂಗದಳದ ಭರತ್ ಕುಂಬ್ಡೇಲು ಮತ್ತಿತರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಣೆಯಿಂದ ಮೊಕ್ಕದ್ದಮೆ ಹೂಡಬೇಕು ಎಂದು ನಿಯೋಗವು ಮನವಿಯಲ್ಲಿ ಆಗ್ರಹಿಸಿದೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುನೀರ್ ಕಾಟಿಪಳ್ಳ ‘ಅಪ್ರಾಪ್ತ ಯುವಕ ದಿಗಂತ್ ಕಾಣೆಯಾಗಿದ್ದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದರೆ ಸಂಘ ಪರಿವಾರ ಮತ್ತು ಬಿಜೆಪಿ ಶಾಸಕರು ಕಾಣೆಯಾದ ತಕ್ಷಣ ಮತೀಯ ಬಣ್ಣ ಹಚ್ಚಿ ಮುಸ್ಲಿಮರೇ ಅಪಹರಿಸಿ ಆತನ ಪ್ರಾಣಕ್ಕೆ ಅಪಾಯ ಮಾಡಿರುವ ರೀತಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಒಂದು ಸಮುದಾಯ ಮೇಲೆ ಈ ರೀತಿ ನಿರಂತರವಾಗಿ ಆರೋಪಗಳನ್ನು ಹೊರಿಸುತ್ತಾ ಹೋದಲ್ಲಿ ಅವರ ಪ್ರತಿಕ್ರಿಯೆ ಹೇಗಿರುತ್ತದೆ. ಕೊಣಾಜೆಯಲ್ಲಿ ಕಾರ್ತಿಕ್ನ ಕೊಲೆಯಾದ ಸಂದರ್ಭದಲ್ಲಿಯೂ ಇಲ್ಲಿ ಸಂಸದರಾಗಿದ್ದವರು ಜಿಲ್ಲೆಗೆ ಬೆಂಕಿ ಹಚ್ಚುವ ಪ್ರಚೋದನೆಯ ಮಾತುಗಳನ್ನಾಡಿದರು. ಕೊನೆಗೆ ಅದು ಕೌಟುಂಬಿಕ ಕಲಹದ ಕೊಲೆ ಎಂದು ಸಾಬೀತಾಯಿತು. ನಿನ್ನೆ ಮತ್ತೆ ಕೊರಗಜ್ಜನ ಹೆಸರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಲಾಗಿದೆ. ಕೊರಗ ತನಿಯ ಕಾರ್ನಿಕದ ದೈವ. ಆದಿವಾಸಿಗಳ ಸಾಂಸ್ಕೃತಿಕ ನಾಯಕನ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ಮಾತನಾಡಲಾಗಿದೆ. ಬಿಜೆಪಿಯವರಿಗೆ ಈ ರೀತಿ ಪ್ರಚೋದನೆ ನೀಡಿ ಇನ್ನೊಂದು ಸಮುದಾಯ ತಿರುಗಿ ಬೀಳುವುದು ಬೇಕಾಗಿದೆ. ಹೆಣದ ಮೇಲೆ ರಾಜಕೀಯಕ್ಕೆ ಹಾತೊರೆಯುತ್ತ್ತಿದ್ದಾರೆ. ಸ್ಪೀಕರ್ ಖಾದರ್ ಅವರು ಸ್ವಯಂ ಪ್ರೇರಣೆಯಿಂದ ದಿಗಂತ್ ನಾಪತ್ತೆ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ಇದೀಗ ಮತ್ತೆ ಅವರದ್ದೇ ಕ್ಷೇತ್ರದಲ್ಲಿ ಕೊರಗ ತನಿಯನ ಎದುರು ಪ್ರಚೋದನಕಾರಿ ಭಾಷಣ ಮಾಡಲಾಗಿದೆ. ಈ ಎರಡೂ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಬೇಕು. ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ ಹರಡುವ, ಪ್ರಚೋದನೆಕಾರಿ ಹೇಳಿಕೆ ನೀಡುವವರು ಯಾರೇ ಆಗಿದ್ದರೂ ಜಾತಿ ಮತ ಬೇಧವಿಲ್ಲದೆ ಮುಲಾಜಿಲ್ಲದೆ ಕಾನೂನು ಕ್ರಮ ಆಗಬೇಕು ಎಂದರು’
ಮನವಿ ಸಲ್ಲಿಸಿದ ನಿಯೋಗದಲ್ಲಿ ಮಾಜಿ ಮೇಯರ್ ಅಶ್ರಫ್ ಕೆ., ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರಾದ ಮಂಜುಳಾ ನಾಯಕ್, ಪ್ರಮೀಳಾ ದೇವಾಡಿಗ, ಬಿ. ಶೇಖರ್, ಸಂತೋಷ್ ಬಜಾಲ್, ವಿ. ಕುಕ್ಯಾನ್, ಜಯಂತಿ ಬಿ. ಶೆಟ್ಟಿ, ಎಸ್.ಎಲ್. ಪಿಂಟೋ, ಸದಾಶಿವ ಪಡುಬಿದ್ರೆ, ಸರೋಜಿನ ಬಂಟ್ವಾಳ, ಬಿ.ಕೆ. ಇಮ್ತಿಯಾಝ್, ವಿನುಶ ರಮಣ, ಮನೋಜ್ ವಾಮಂಜೂರು, ಎಚ್.ವಿ. ರಾವ್, ಸೀತಾರಾಮ ಬೇರಿಂಜ, ಸಮರ್ಥ್ ಭಟ್, ಕರುಣಾಕರ್ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments