ದೀಪಕ್ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ: ಫಲ ನೀಡಿದ ಡಿಸಿ ಮನವೊಲಿಕೆ, ಶವ ಯಾತ್ರೆಗೆ ಅನುಮತಿ

Spread the love

ದೀಪಕ್ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ: ಫಲ ನೀಡಿದ ಡಿಸಿ ಮನವೊಲಿಕೆ, ಶವ ಯಾತ್ರೆಗೆ ಅನುಮತಿ

ಮಂಗಳೂರು: ಕಾಟಿಪಳ್ಳದಲ್ಲಿ ಬುಧವಾರ ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ಅವರ ಮೃತದೇಹವನ್ನು ಸ್ವೀಕರಿಸುವ ಮೊದಲು ಗೃಹಸಚಿವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದ ದೀಪಕ್ ಕುಟುಂಬ ಸದಸ್ಯರು ಹಾಗೂ ಕಾಟಿಪಳ್ಳ ಗ್ರಾಮಸ್ಥರನ್ನು ಮನವೊಲಿಸುವಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಹಾಗೂ ಪೋಲಿಸ್ ಆಯುಕ್ತ ಸುರೇಶ್ ಅವರು ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಮೃತ ದೀಪಕ್ ಅವರ ನಿವಾಸದಿಂದ ರುದ್ರಭೂಮಿ ತನಕ ಶವಯಾತ್ರೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದ್ದು ಮುಕ್ಕಾಲು ಕಿ.ಮಿ. ದೂರ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು ನಾವು ಮೃತರಿಗೆ ಗೌರವ ಸಲ್ಲಿಸುವುದು ಪ್ರಮುಖ ಆದ್ಯತೆಯಾಗಿದ್ದು, ಕುಟುಂಬಿಕರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ ಸೆಂಥಿಲ್ ಅವರು, ಸರ್ಕಾರ ಈಗಾಗಲೇ ರೂ. 5ಲಕ್ಷ ಮಂಜೂರು ಮಾಡಿದೆ. ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ರೂ. 5ಲಕ್ಷ ನೀಡಲು‌ ಒಪ್ಪಿಗೆ ಸೂಚಿಸಲಾಗಿದೆ.  ದಯವಿಟ್ಟು ಶಾಂತಿ‌ ಕಾಪಾಡಬೇಕು ಎಂದು ಮನವಿ ಮಾಡಿದರು.

ಬಳಿಕ ಜಿಲ್ಲಾಧಿಕಾರಿಯವರ ಮನವಿಗೆ ಒಪ್ಪಿದ ಬಿಜೆಪಿ ನಾಯಕರು ದೀಪಕ್ ಮೃತದೇಹವನ್ನು ಪೋಲಿಸರಿಂದ ಸ್ವೀಕರಿಸಿ ದೀಪಕ್ ಮನೆಯವರಿಗೆ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್ ಅವರು ಮನೆಯಿಂದ ರುದ್ರಭೂಮಿಯ ತನಕ ಶವಯಾತ್ರೆ ನಡೆಸಲು ಅನುಮತಿ ನೀಡಿದರು.


Spread the love