ದುರ್ಬಲ ವರ್ಗದವರ ಸೇವೆಯೇ ಭಗವಂತನ ಸೇವೆ – ಕೆ. ಸೂರ್ಯನಾರಾಯಣ ಉಪಾಧ್ಯಾಯ

Spread the love

ದುರ್ಬಲ ವರ್ಗದವರ ಸೇವೆಯೇ ಭಗವಂತನ ಸೇವೆ – ಕೆ. ಸೂರ್ಯನಾರಾಯಣ ಉಪಾಧ್ಯಾಯ

ಕುಂದಾಪುರ: ಸಮಾಜದಲ್ಲಿನ ದೀನದಲಿತರ ಹಾಗೂ ದುರ್ಬಲ ವರ್ಗದವರ ಸೇವೆಯನ್ನು ಮಾಡುವುದರಿಂದಲೇ ಭಗವಂತನ ಸೇವೆಯನ್ನು ಮಾಡುವಂತಾಗುತ್ತದೆ ಎನ್ನುವ ಸಾಕ್ಷಾತ್ಕಾರವನ್ನು ಕಂಡು ಅದನ್ನು ತಮ್ಮ ಜೀವನದಲ್ಲಿ ರೂಢಿಸಿ, ಅಳವಡಿಸಿಕೊಂಡು ಬಂದವರು ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಎಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿಂದಿನ ಆಡಳಿತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅಭಿಪ್ರಾಯಪಟ್ಟರು.

ಬಸ್ರೂರಿನ ಮಹೋತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ ಬಸ್ರೂರು ಅಪ್ಪಣ್ಣ ಹೆಗ್ಡೆ ತೊಂಬತ್ತು ಜನ್ಮ ದಿನೋತ್ಸವ ಸಮಿತಿ ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಜೊತೆಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ “ಅಪ್ಪಣ್ಣ ಹೆಗ್ಡೆ -90” ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಭಗವಂತ ನಿರ್ದಿಷ್ಟವಾದ ಕೆಲಸಗಳನ್ನು ನಿರ್ಧರಿಸುತ್ತಾನೆ. ಈ ರೀತಿ ಸಮಾಜಸೇವೆ ಮಾಡುವುದು ಕೂಡ ಭಗವಂತನ ಸೇವೆ ಆಗುತ್ತದೆ ಎನ್ನುವ ನಂಬಿಕೆಗಳು ನಮಗಿರಬೇಕು. ಬದುಕು ಎಷ್ಟು ವರ್ಷ ಎನ್ನುವುದು ಮುಖ್ಯವಲ್ಲ. ಬದುಕಿದ್ದ ವರ್ಷಗಳಲ್ಲಿ ನಮ್ಮ ನಡವಳಿಕೆಗಳು ಹೇಗಿತ್ತು ಎನ್ನುವುದು ಮುಖ್ಯವಾಗಿರಬೇಕು. ಧೀಮಂತ ವ್ಯಕ್ತಿತ್ವದ ಅಪ್ಪಣ್ಣ ಹೆಗ್ಡೆಯವರು ಬದುಕುತ್ತಿರುವ ರೀತಿ ನೀತಿಗಳು ಜಾತಿ-ಮತಗಳ ಪರಂಪರೆಯನ್ನು ಮೀರಿದೆ ಎಂದರು.

ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಮಾಜಕ್ಕೆ ಹೊರೆಯಾಗದೆ, ಮಾದರಿಯಾಗಿ ಹೇಗೆ ಬದುಕಬೇಕು ಎನ್ನುವದನ್ನು ಇತರರಿಗೆ ತೋರಿಸಿದ ಆದರ್ಶ ವ್ಯಕ್ತಿತ್ವ ಅಪ್ಪಣ್ಣ ಹೆಗ್ಡೆಯವರದು. ನನ್ನ ತಂದೆ ದಿವಂಗತ ಎ.ಜಿ ಕೊಡ್ಗಿಯವರ ಒಡನಾಡಿಗಳಾಗಿದ್ದ ಅವರು, ರಾಜಕೀಯ ಸಿದ್ದಾಂತಗಳನ್ನು ಮೀರಿ ಶುಭ್ರತೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಯಾವುದೇ ಸಂದರ್ಭದಲ್ಲೂ ವಯಕ್ತಿಕ ವ್ಯಕ್ತಿತ್ವಗಳಿಗೆ ಕಳಂಕ ಬಾರದಂತೆ ನಡೆದು ಬದುಕುತ್ತಿರುವವರು ಹೆಗ್ಡೆಯವರು ಎಂದರು.

ಬೈಂದೂರಿನ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯಲ್ಲಿ ಧಾರ್ಮಿಕತೆಯ ಹರಿಕಾರರಂತೆ ಶೋಭಿಸುತ್ತಿರುವ ಅಪ್ಪಣ್ಣ ಹೆಗ್ಡೆಯವರದ್ದು ಮಗುವಿನಂತ ಮುಗ್ದತೆಯ ಮನಸ್ಸು. ಜಾತಿ ಮತಗಳ ಗೋಡೆಯ ಪರಿಧಿಯನ್ನು ಮೀರಿ ನಿಂತಿರುವ ವ್ಯಕ್ತಿತ್ವ ಅವರದು. ದೈವಸ್ಥಾನಗಳು, ದೇವಸ್ಥಾನಗಳು ಜೋರ್ಣೋದ್ದಾರವಾಗಬೇಕು ಎಂದಾದರೆ ಅದಕ್ಕೆ ಅಪ್ಪಣ್ಣ ಹೆಗ್ಡೆಯವರದ್ದೆ ನೇತೃತ್ವ ಮತ್ತು ಮಾರ್ಗದರ್ಶನ ಇರಬೇಕು ಎನ್ನುವ ವಾಡಿಕೆಯ ಪದ್ದತಿಗಳು ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಇಂದಿಗೂ ಇದೆ ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತೆಗ್ಗರ್ಸೆ ಬಾಬು ಶೆಟ್ಟಿ ಹಾಗೂ ಗಿಳಿಯಾರು ಕುಶಲ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಬಿ. ಉದಯ್ ಕುಮಾರ್ ಹೆಗ್ಡೆ ಮಾತನಾಡಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ರಾಮ್ ರತನ್ ಹೆಗ್ಡೆ, ರಾಮ್ ಕಿಶನ್ ಹೆಗ್ಡೆ ಇದ್ದರು.

ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಾಬು ಶೆಟ್ಟಿ ತೆಗ್ಗರ್ಸೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ರಘುರಾಮ್ ದೇವಾಡಿಗ ಆಲೂರು ಹಾಗೂ ಸುರೇಂದ್ರ ಶೆಟ್ಟಿ ಸಹನಾ ಗ್ರೂಪ್ಸ್ ಇವರನ್ನು ಗೌರವಿಸಲಾಯಿತು.

ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷ ಕೆ ವಿಕಾಸ್ ಹೆಗ್ಡೆ ಸ್ವಾಗತಿಸಿದರು. ಜನಸೇವಾ ಟ್ರಸ್ಟ್ ನ ವಸಂತ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಪೂಜಾರಿ ಬಸ್ರೂರು ವಂದಿಸಿದರು. ಕೆ.ಸಿ ರಾಜೇಶ್ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments