ನಿರ್ಮಾಣ ಹಂತದ ಸುರತ್ಕಲ್ ಮಾರುಕಟ್ಟೆ ಕಟ್ಟಡಕ್ಕೆ ” ನಾಗರಿಕ ಹೋರಾಟ ಸಮಿತಿ ಭೇಟಿ

Spread the love

ನಿರ್ಮಾಣ ಹಂತದ ಸುರತ್ಕಲ್ ಮಾರುಕಟ್ಟೆ ಕಟ್ಟಡಕ್ಕೆ ” ನಾಗರಿಕ ಹೋರಾಟ ಸಮಿತಿ ಭೇಟಿ

ಮಂಗಳೂರು:  ಡೆಂಗಿ ಲಾರ್ವ, ಮಲೇರಿಯಾ ಸಹಿತ ಸಾಂಕ್ರಾಮಿಕ ರೋಗಳನ್ನು ಹರಡುವ ಸೊಳ್ಳೆಗಳನ್ನು ಉತ್ಪಾದಿಸುವ ಕೇಂದ್ರವಾಗಿ ಪರಿವರ್ತನೆಗೊಂಡಿರುವ ನೆನಗುದಿಗೆ ಬಿದ್ದಿರುವ ನಿರ್ಮಾಣ ಹಂತದ ಸುರತ್ಕಲ್ ಮಾರುಕಟ್ಟೆ ಕಟ್ಟಡಕ್ಕೆ “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ಇದರ ನಿಯೋಗ ಭೇಟಿ ನೀಡಿ ನಗರ ಪಾಲಿಕೆ,ಕೈಗೊಂಡಿರುವ ಪರಿಹಾರ ಕ್ರಮಗಳನ್ನು ಪರಿಶೀಲಿಸಿತು.

ಮಾರುಕಟ್ಟೆ ಕಟ್ಟಡದ ದಾರುಣ ಸ್ಥಿತಿಗಳನ್ನು ಮಾಧ್ಯಮಗಳು ಸುದ್ದಿ ಮಾಡಿ ನಾಲ್ಕೈದು ದಿನಗಳು ಕಳೆದಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆರೋಗ್ಯ ಇಲಾಖೆ, ನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ನೀರು, ತ್ಯಾಜ್ಯಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಸಿದ್ದರೂ ಯಾವುದೆ ದೊಡ್ಡ ಪರಿಣಾಮ ಆಗಿಲ್ಲ.

ಕೆಲವು ಕಡೆ ಹತ್ತು, ಹನ್ನೆರಡು ಅಡಿ ಅಳದಷ್ಟು ನೀರು ನಿಂತಿದ್ದರೆ, ಕೆಲವು ಕಡೆ ತಳ ಮಹಡಿ ಪೂರ್ತಿ ನೀರಿನಲ್ಲಿ ಮುಳುಗಿದೆ. ಸಮಸ್ಯೆ ಇಷ್ಟು ಅಗಾಧವಾಗಿದ್ದರೂ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದರೂ ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡುವುದು, ಅಧಿಕಾರಿಗಳನ್ನು ಕರೆಸಿ ಚರ್ಚಿಸದಿರುವ ಕುರಿತು ನಿಯೋಗ ಅಚ್ಚರಿ ವ್ಯಕ್ತ ಪಡಿಸಿತು. ನಗರ ಪಾಲಿಕೆಯ ಮೇಯರ್, ಕಮೀಷನರ್, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮಗಳಿಗೆ ಬೇಕಾದ ಯೋಜನೆ ರೂಪಿಸಿ ಉಸ್ತುವಾರಿ ವಹಿಸದಿರುವುದು ಬಿಜೆಪಿ ಆಡಳಿತದ ಪಾಲಿಕೆಯ ಜಡತ್ವಕ್ಕೆ ಉದಾಹರಣೆಯಾಗಿ ಕಂಡು ಬಂತು. ಸಮಾರೋಪಾದಿಯಾಗಿ ಕ್ರಮಗಳನ್ನು ಜರುಗಿಸಿ ಕಟ್ಟಡದ ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಮಾಡದಿದ್ದಲ್ಲಿ ಸಮಾನ ಮನಸ್ಕರನ್ನೆಲ್ಲ ಜೊತೆ ಸೇರಿಸಿ ಸ್ಥಳದಲ್ಲೆ ವಿಭಿನ್ನವಾಗಿ ಪ್ರತಿಭಟನೆ ನಡೆಸುವುದಾಗಿ ನಿಯೋಗ ಶಾಸಕ ಭರತ್ ಶೆಟ್ಟಿ ಹಾಗೂ ನಗರ ಪಾಲಿಕೆಗೆ ಎಚ್ಚರಿಕೆ ನೀಡಿತು.

ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ದಯಾನಂದ ಶೆಟ್ಟಿ ಪಂಜಿಮೊಗರು, ಅಯಾಜ್ ಕೃಷ್ಣಾಪುರ, ಹೋರಾಟ ಸಮಿತಿಯ ಪ್ರಮುಖರು, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಕಾರ್ಮಿಕ ನಾಯಕ ಸದಾಶಿವ ಶೆಟ್ಟಿ, ವೈ ರಾಘವೇಂದ್ರ ರಾವ್, ಶ್ರೀನಾಥ್ ಕುಲಾಲ್, ಆನಂದ ಅಮೀನ್, ಶ್ರೀಕಾಂತ್ ಸಾಲ್ಯಾನ್, ಮಕ್ಸೂದ್ ಕಾನ, ಇಕ್ಬಾಲ್ ಕಿಲ್ಪಾಡಿ, ಅಬೂಬಕ್ಕರ್ ಬಾವಾ ಜೋಕಟ್ಟೆ, ಚಂದ್ರಕಾಂತ್ ದೇವಾಡಿಗ, ಹಂಝ ಇಡ್ಯಾ, ಸೈಫರ್ ಅಲಿ, ಇಮ್ತಿಯಾಜ್ ಕುಳಾಯಿ ನಾಮ ನಿರ್ದೇಶಿತ ಕಾರ್ಪೊರೇಟರ್ ಕಿಶೋರ್ ಶೆಟ್ಟಿ ಮುಂತಾದವರು ಇದ್ದರು.


Spread the love