ನೆರೆ ಹಾವಳಿಯಿಂದ ಹೈನುಗಾರರಿಗೆ ನಷ್ಟ – ಕೆ.ಎಂ.ಎಫ್ ವತಿಯಿಂದ ಚೆಕ್ ವಿತರಣೆ 

Spread the love

ನೆರೆ ಹಾವಳಿಯಿಂದ ಹೈನುಗಾರರಿಗೆ ನಷ್ಟ – ಕೆ.ಎಂ.ಎಫ್ ವತಿಯಿಂದ ಚೆಕ್ ವಿತರಣೆ 

ಮಂಗಳೂರು: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನಲ್ಲಿ ಅಗಸ್ಟ್-2019ರ ಮಾಹೆಯಲ್ಲಿ ಸಂಭವಿಸಿದ ಭೀಕರ ನೆರೆ ಹಾವಳಿಯಿಂದ ಹೈನುಗಾರರಿಗೆ ನಷ್ಟವಾಗಿರುವುದರಿಂದ, ನವೆಂಬರ್ 30 ರಂದು ರೂ.5.5 ಲಕ್ಷಗಳನ್ನು ಚಾರ್ಮಾಡಿ, ವಳಾಲು, ಮೊಗ್ರು, ನೆರಿಯ, ಮಲವಂತಿಗೆ, ಮುಂಡಾಜೆ ಮತ್ತು ಅಮ್ಟಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಮನೆ ಹಾಗೂ ಹಟ್ಟಿ ಹಾನಿ/ನಾಶ ಮತ್ತು ಮೇವಿನ ತಾಕುಗಳು ಹಾಳಾಗಿರುವ 89 ಸಂಖ್ಯೆ ಹೈನುಗಾರರು ಮನವಿ ಮಾಡಿದ್ದು, ಇದರಲ್ಲಿ ಸಾಂಕೇತಿಕವಾಗಿ 45 ಜನ ಹೈನುಗಾರರಿಗೆ ಒಕ್ಕೂಟದಿಂದ ನೆರೆ ಪರಿಹಾರವನ್ನು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆಯವರು ಒಕ್ಕೂಟದ ತರಬೇತಿ ಕೇಂದ್ರದಲ್ಲಿ ಪ್ರೋತ್ಸಾಹಧನದ ಚೆಕ್‍ಗಳನ್ನು ವಿತರಿಸಿದರು.

ಈ ಸಭೆಯಲ್ಲಿ ನಿರ್ದೇಶಕ ಸುಚರಿತ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಹೆಗ್ಡೆ ಉಪಸ್ಥಿತರಿದ್ದರು. ಸಭೆಯಲ್ಲಿ ಡಾ. ನಿತ್ಯಾನಂದ ಭಕ್ತ ಸ್ವಾಗತಿಸಿ, ಡಾ: ರಾಮಕೃಷ್ಣ ಭಟ್ ನಿರೂಪಿಸಿದರು.

ಒಕ್ಕೂಟ, ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಒಕ್ಕೂಟದ ನೌಕರರಿಂದ ನೆರೆ ಪರಿಹಾರ ನಿಧಿಗೆ ದೇಣಿಗೆಯನ್ನು ಸಂಗ್ರಹಣೆ ಮಾಡಲಾಗಿದ್ದು, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.30 ಲಕ್ಷಗಳನ್ನು ಧನಾದೇಶದ ಮೂಲಕ ನೀಡಲಾಗಿದ್ದು, ನೆರೆ ಸಂಭವಿಸಿದ ಸಂದರ್ಭದಲ್ಲಿ ಸಂಘಗಳ ಹೈನುಗಾರರಿಗೆ 50 ಕೆ.ಜಿಯಂತೆ 500 ಹೈನುಗಾರರಿಗೆ ಉಚಿತವಾಗಿ ಪಶು ಆಹಾರವನ್ನು ನೀಡಲಾಗಿರುತ್ತದೆ. ಉತ್ತರ ಕರ್ನಾಟಕ ಭಾಗದ ಅಥಣಿ ಮತ್ತು ಜಮಖಂಡಿಯ ನೆರೆ ಸಂತ್ರಸ್ತರಿಗೆ ಒಟ್ಟು ರೂ.5.12 ಲಕ್ಷಗಳ ಮೊತ್ತದ ತೃಪ್ತಿ ಹಾಲಿನ 50000 ಪ್ಯಾಕೆಟ್‍ಗಳನ್ನು ಹಾಗೂ 650 ಸಂಖ್ಯೆ ಬೆಡ್ ಶೀಟ್‍ಗಳನ್ನು ವಿತರಣೆ ಮಾಡಲಾಗಿದೆ.


Spread the love