ಪ್ರತಿಭಟನೆಯಲ್ಲಿ ಪ್ರಚೋದನಾತ್ಮಕ ಭಾಷಣ – ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ದ ಪ್ರಕರಣ ದಾಖಲು
ಉಡುಪಿ: ಮಲ್ಪೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಪ್ರಮೋದ್ ಮಧ್ವ ರಾಜ್ ವಿರುದ್ದ ಪ್ರಕರಣ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದಿನ ಪ್ರಕರಣವನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ಹೇಗೆ ನಿಭಾಯಿಸಬೇಕು, ಹಾಗೂ ಎಲ್ಲಾ ಸಮಾಜಗಳನ್ನು ಒಳಗೊಂಡು ಮೀನುಗಾರರಿಗೆ ಬಂದರಿನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಮಲ್ಪೆ ಮೀನುಗಾರರ ಸಂಘ (ರಿ) ಹಾಗೂ ಇನ್ನಿತರರ ಪ್ರಮುಖ ಮೀನುಗಾರಿಕಾ ಸಂಘಗಳು ಪ್ರತಿಭಟನಾ ಸಭೆಯನ್ನು ಮಲ್ಪೆಯ ಬಂದರು ಪ್ರದೇಶದಲ್ಲಿ ಹಮ್ಮಿಕೊಂಡಿರುತ್ತಾರೆ. ಈ ಸಭೆಯಲ್ಲಿ ಹಲವಾರು ಗಣ್ಯರು ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುತ್ತಾರೆ.
ಆ ಸಮಯ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ರವರು ನಮ್ಮ ಮನೆಗೆ ಕಳ್ಳರು ಬಂದರೆ ನಾವು ಏನು ಮಾಡುತ್ತೀವಿ? ಪೊಲೀಸರು ಬರುವುದಕ್ಕೆ 5-6 ಗಂಟೆ ತಡವಾದರೆ ನಾವು ಏನು ಮಾಡುತ್ತೇವೆ? ಕಟ್ಟಿ ಹಾಕಲೇ ಬೇಕು. ಕಳ್ಳರನ್ನು ಕಟ್ಟಿ ಹಾಕಲೇ ಬೇಕು, ಮತ್ತೇನು ಮಾಡಲಿಕ್ಕೆ ಆಗುತ್ತೆ? ಏನು ಅವರಿಗೆ ಏಟು ಎಂದರೆ ಮಚ್ಚಿನಲ್ಲಿ ಖಡ್ಗದಲ್ಲಿ ತಲವಾರಿನಲ್ಲಿ ಹೊಡೆದದ್ದಾ? 2 ಕೆನ್ನೆಗೆ ಬಾರಿಸಿದ್ದು, ಯಾರಿಗೆ? ಕಳ್ಳಿ ಅಂತ ಆರೋಪಿತ ಒಂದು ವ್ಯಕ್ತಿಗೆ, ಆ ಮಹಿಳೆದು ಏನಾದರೂ ಆಕ್ಷೇಪ ಉಂಟಾ?” ಎಂದು ಮಹಿಳೆಗೆ ಸಾರ್ವಜನಿಕವಾಗಿ ಕಟ್ಟಿ ಹಾಕಿ ಹೊಡೆದುದ್ದನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಸಾರ್ವಜನಿಕರಿಂದ ಇಂಥಹ ಅಪರಾಧ ಮಾಡಿಸಲು ಪ್ರೇರಣೆ ಮಾಡುತ್ತಾ, ದ್ವೇಷ ಭಾವನೆಯಿಂದ ಇಷ್ಟಪೂರ್ವಕವಾಗಿ ಭಾಷಣ ಮಾಡಿ ದೊಂಬಿಯ ಅಪರಾಧವು ನಡೆಯುವ ಸಂಭವ ಇದೆ ಎಂದು ಗೊತ್ತಿದ್ದೂ, ಅಲ್ಲಿದ್ದವರನ್ನು ಪ್ರಚೋದಿಸುತ್ತಾ ಉದ್ರೇಕ ಭಾಷಣ ಮಾಡಿರುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2025 ಕಲಂ. ಕಲಂ 57, 191(1), 192. BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ