ಬಂಟ್ವಾಳ: ಸರಣಿ ಕಳ್ಳತನ – ಪರಾರಿಯಾಗಿದ್ದ ಆರೋಪಿಯ ಬಂಧನ

Spread the love

ಬಂಟ್ವಾಳ: ಸರಣಿ ಕಳ್ಳತನ – ಪರಾರಿಯಾಗಿದ್ದ ಆರೋಪಿಯ ಬಂಧನ

ಬಂಟ್ವಾಳ: ಬಿಸಿರೋಡಿನ ಹೃಯಭಾಗದ ಹೊಟೇಲ್ ಸಹಿತ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ‌ನಗರ ಠಾಣಾ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಬೆಳ್ತಂಗಡಿ ಪಡಂಗಡಿ ನಿವಾಸಿ ಹಮೀದ್ ಯಾನೆ, ಕುಂಜ್ಞಿಮೋನು ಯಾನೆ ಜಾಫರ್ ಬಂಧಿತ ಆರೋಪಿ.

ಈತ ಕಳೆದ ಎರಡು ವಾರಗಳ ಹಿಂದೆ ಬಿಸಿರೋಡಿನ ಅನಿಯಾ ದರ್ಬಾರ್ ಹಾಗೂ ಇಲ್ಲಿನ‌ ಕೆಲ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂ ನಗದು ಕಳವು ಮಾಡಿದ್ದ. ಇಲ್ಲಿನ ಅನಿಯಾ ದರ್ಬಾರ್ ಹೊಟೇಲ್ ನಿಂದ ಲಕ್ಷಾಂತರ ರೂ.ನಗದು ಕಳವು ಮಾಡಿರುವ ಬಗ್ಗೆ ನಗರ ಪೋಲೀಸ್ ಠಾಣೆಗೆ ಮಾಲಕ ದೂರು ನೀಡಿದ್ದರು.

ಆರೋಪಿ ಹಮೀದ್ ಕಳವು ಮಾಡುವ ವೇಳೆ ಹೊಟೇಲ್ ಒಳಗಿನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಪೋಲಿಸ್ ತಂಡ ಬಂಧನಕ್ಕೆ ಕಾರ್ಯತಂತ್ರ ಹೆಣೆದಿದ್ದರು. ಹಮೀದ್ ಮಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದ್ದ ವೇಳೆ ಬಂಟ್ವಾಳದಲ್ಲಿ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈತ ಹಲವು ಕಳವು ಪ್ರಕರಣದ ಆರೋಪಿಯಾಗಿದ್ದು, ವಿವಿಧ ಠಾಣೆಯಲ್ಲಿ ಈತನ ಮೇಲೆ ಕಳವು ಪ್ರಕರಣ ದಾಖಲಾಗಿದೆ, ಜೊತೆಗೆ ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದೆ ತಲೆಮರೆಸಿಕೊಂಡಿದ್ದ ಕಾರಣಕ್ಕಾಗಿ ವಾರೆಂಟ್ ಆರೋಪಿ ಕೂಡ ಆಗಿರುವುದು ಪೋಲಿಸ್ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಹೇಳಲಾಗಿದೆ‌.

ಇದೀಗ ಈತನನ್ನು ಬಂಟ್ವಾಳ ಡಿ.ವೈ‌ಎಸ್.ಪಿ.ವಿಜಯಪ್ರಸಾದ್ ಅವರ ನಿರ್ದೇಶನದಂತೆ, ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ಪೆಕ್ಟರ್ ಆನಂತ ಪದ್ಮನಾಭ ಅವರ ನೇತ್ರತ್ವದಲ್ಲಿ ಎಸ್‌ಐ.ರಾಮಕೃಷ್ಣ ಮತ್ತು ಎಸ್.ಐ.ಕಲೈಮಾರ್ ಅವರ ತಂಡದಲ್ಲಿ ಸಿಬ್ಬಂದಿಗಳಾದ ರಾಜೇಶ್ ಮತ್ತು ಇರ್ಶಾದ್ ಅವರು ಕಾರ್ಯಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಟ್ವಾಳ ನಗರ ಠಾಣಾ ಪೊಲೀಸರ ಅವಿರತವಾದ ಶ್ರಮ:ಸರಣಿ ಕಳವಿನ ಆರೋಪಿಗಳು ಅಂದರ್

ಬಂಟ್ವಾಳ ‌ಠಾಣಾ ವ್ಯಾಪ್ತಿಯಲ್ಲಿ ಎರಡು ಸರಣಿ ಕಳವು ಪ್ರಕರಣಗಳು ನಡೆದಿದ್ದು, ಎರಡು ಪ್ರಕರಣಗಳ ಆರೋಪಿಯನ್ನು ಪತ್ತೆ ಹೆಚ್ಚಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೈಕಂಬ ಪೊಳಲಿ ದ್ವಾರದ ಬಳಿ ಹೋಟೆಲ್ ಸಹಿತ ಸುಮಾರು ಅಂಗಡಿಗಳಿಗೆ ನುಗ್ಗಿ ಸಾವಿರಾರು ರೂ.ನಗದು ಕಳವು ಮಾಡಿದ ಆರೋಪಿಯನ್ನು ಬಿಸಿರೋಡಿನ ಸರಣಿ ಅಂಗಡಿ ಕಳವಿನ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ.

ಇದರ ಜೊತೆಗೆ ಅಂಗಡಿಯಿಂದ ವೃದ್ದೆಯೋರ್ವರ ಕುತ್ತಿಗೆಯಿಂದ ಚೈನ್ ಸ್ನ್ಯಾಚಿಂಗ್ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಯಶಸ್ವಿಯಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂಲಕ ಕಳ್ಳರಿಗೆ ಪೋಲೀಸ್ ಬಿಸಿ ತೋರಿಸಿದ್ದಾರೆ.


Spread the love