ಬಿಎಸ್‍ವೈ, ಶೋಭಾ ಕರಂದ್ಲಾಜೆ ನಿವಾಸದ ಮೇಲೆ ಐಟಿ ದಾಳಿಯಾಗಬೇಕು: ಬೇಳೂರು ಗೋಪಾಲಕೃಷ್ಣ

Spread the love

ಬಿಎಸ್‍ವೈ, ಶೋಭಾ ಕರಂದ್ಲಾಜೆ ನಿವಾಸದ ಮೇಲೆ ಐಟಿ ದಾಳಿಯಾಗಬೇಕು: ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ಬಿ. ಎಸ್ ಯಡಿಯೂರಪ್ಪನವರಿಗೆ ಅಧಿಕಾರ ಕೈ ತಪ್ಪಿದ್ದು, ನನ್ನ ಹರಕೆ ಈಡೇರಿದಂತಾಗಿದೆ ಎಂದು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನ್ನಾಡುತ್ತಿದ್ದ ಅವರು, ನನಗೆ ವಂಚನೆ ಮಾಡಿದ ಯಡಿಯೂರಪ್ಪನವರಿಗೆ ರಾಜ್ಯದ ಜನ ವಂಚಿಸಿದ್ದು, ನಾನು ದೇವರಲ್ಲಿ ಮಾಡಿಕೊಂಡಿದ್ದ ಹರಕೆ ಈಡೇರಿದಂತಾಗಿದೆ. ನನಗೆ ಸಿಗದ ಅಧಿಕಾರ ಯಡಿಯೂರಪ್ಪ ಅವರಿಗೂ ಸಿಗಬಾರದು ಎಂದು ನಾನು ನನ್ನ ಮನೆ ದೇವರಾದ ಹುಚ್ಚುರಾಯಸ್ವಾಮಿಗೆ ಹರಕೆ ಹೊತ್ತಿದ್ದೆ, ಅದು ಈಡೇರಿದಂತಾಗಿದೆ, ಎಂದು ಅವರು ಹೇಳಿದರು.

150 ಸ್ಥಾನದ ಗುರಿಯಿಟ್ಟುಕೊಂಡು ಅಬ್ಬರದ ಪ್ರಚಾರ ನಡೆಸಿದ ಯಡಿಯೂರಪ್ಪ ಅವರ ಆಟ ಮುಗಿದಿದ್ದು ಅವರ ಶಕ್ತಿ ಕುಂದಿದೆ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಜನತೆ ಒಪ್ಪುವುದಿಲ್ಲ‌, ಎಂದವರು ಅಣಕವಾಡಿದರು.

ಕಾಂಗ್ರೆಸ್ ಜೆಡಿಎಸ್ ಸರ್ಕಾರದ್ದು ಅಪವಿತ್ರ ಮೈತ್ರಿ ಎನ್ನುವ ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇದೆಯೇ? ಈ ಹಿಂದೆ ಇವರೇ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಉಪಮುಖ್ಯಮಂತ್ರಿ ಸ್ಥಾನ ಅನುಭವಿಸಿಲ್ಲವೇ? ಎಂದವರು ವ್ಯಂಗ್ಯವಾಡಿದರು.

ಬಿಎಸ್‌ವೈ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಯಡಿಯೂರಪ್ಪ ಅವರ ಭ್ರಷ್ಟಾಚಾರ ಹಾಗೂ ಅಕ್ರಮ ಹಣ ಕಾರಣ. ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಬಂದ ಹಣವನ್ನು ಜಿಲ್ಲೆಯಲ್ಲಿ ಚುನಾವಣೆಗೆ ಬಳಸಿದ್ದಾರೆ. ಶೋಭಾ ಕರಂದ್ಲಾಜೆ ಮನೆ ಮೇಲೆ ಐಟಿ ದಾಳಿ ಮಾಡಿದರೆ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಹಣ ಹಾಗೂ ಶೋಭಾ ಕರಂದ್ಲಾಜೆ ಅವರ ಅಕ್ರಮ ಸಂಪಾದನೆ ಬಹಿರಂಗವಾಗುತ್ತದೆ, ಎಂದರು.

ಬಿಜೆಪಿಯ ಏಳರಿಂದ ಎಂಟು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಅದರಲ್ಲಿ ಮೂರು ಶಾಸಕರು ನನ್ನ ಸಂಪರ್ಕದಲ್ಲಿದ್ದು ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಪಕ್ಷ ಜವಾಬ್ದಾರಿ ನೀಡಿದರೆ ಅವರನ್ನು ಕರೆತರುವ ಜವಾಬ್ದಾರಿ ಹೋರುತ್ತೇನೆ, ಎಂದು ಗೋಪಾಲಕೃಷ್ಣ ಹೇಳಿದರು.

ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಸೋತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ ಅವರು ಇದು ಬಹಳ ನೋವಿನ ಸಂಗತಿ, ಎಂದರು.


Spread the love