ಮಂಗಳೂರು: ಮಿನಿ ಲಾರಿ – ಟೆಂಪೊ ಢಿಕ್ಕಿ: ಗಾಯಾಳು ಚಾಲಕನ ರಕ್ಷಣೆಗೆ ಧಾವಿಸಿದ ಸ್ಪೀಕರ್ ಯು.ಟಿ. ಖಾದರ್
ಮಂಗಳೂರು: ಮಿನಿ ಲಾರಿಗೆ ಹಾಲು ಸಾಗಾಟದ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ಟೆಂಪೊ ಚಾಲಕ ಗಾಯ ಗೊಂಡ ಘಟನೆ ಬುಧವಾರ ಪಡೀಲ್ನಲ್ಲಿ ನಡೆದಿರುವುದು ವರದಿಯಾಗಿದೆ.
ಬಿ.ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟೆಂಪೊ ಡಿವೈಡರ್ ಮೇಲೇರಿ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಮಿನಿ ಲಾರಿಗೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಟೆಂಪೊ ಚಾಲಕನಿಗೆ ಗಾಯವಾಗಿದೆ. ಅಪಘಾತದಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿತು.
ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು ರಕ್ಷಣಾ ಕಾರ್ಯ ಮತ್ತು ಸಂಚಾರ ನಿರ್ವಹಣೆಯಲ್ಲಿ ಸ್ವತಃ ಪಾಲ್ಗೊಂಡು ನೆರವಾದರು. ಟೆಂಪೊದಲ್ಲಿ ಗಾಯಗೊಂಡು ಸಿಲುಕಿಕೊಂಡಿದ್ದ ಚಾಲಕನನ್ನು ಸುರಕ್ಷಿತವಾಗಿ ಕೆಳಗಿಳಿಸಿ ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಿಸಿದರು.
ಟೆಂಪೊದಲ್ಲಿ ಸಿಲುಕಿಕೊಂಡಿದ್ದ ಚಾಲಕನ ರಕ್ಷಣಾ ಕಾರ್ಯದಲ್ಲಿ ಸ್ಪೀಕರ್ ಯು.ಟಿ.ಖಾದರ್ ನಿರತರಾಗಿರುವ ವೀಡಿಯೊ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದೆ.