Spread the love
ಮಲ್ಪೆಯಲ್ಲಿ ಮಹಿಳೆಗೆ ಥಳಿತ ಪ್ರಕರಣ: ಎಸ್ಪಿಯವರಿಂದ ವರದಿ ಕೇಳಿದ ಮಹಿಳಾ ಆಯೋಗ
ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ, ಪ್ರಕರಣವನ್ನು ನಿಯಮಾನುಸಾರ ಪರಿಶೀಲಿಸಿ, ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕ್ರಮಕೈಗೊಂಡು, ಕೈಗೊಂಡ ಕ್ರಮದ ಕುರಿತ ವರದಿಯನ್ನು ಆಯೋಗಕ್ಕೆ ಕೂಡಲೇ ಕಳುಹಿಸಿ ಕೊಡುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಗಮನಿಸಿದ್ದು, ಮಹಿಳೆಯ ಮೇಲೆ ನಡೆದಿರುವ ಅಮಾನುಷ ಕೃತ್ಯವನ್ನು ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್ಪಿಯವರಿಗೆ ಪತ್ರ ಬರೆದಿರುವ ಆಯೋಗದ ಕಾರ್ಯದರ್ಶಿ, ಸಮಗ್ರ ಘಟನೆ ಹಾಗೂ ಅದಕ್ಕೆ ಕೈಗೊಂಡಿರುವ ಕ್ರಮದ ಕುರಿತು ಕೂಡಲೇ ವರದಿಯೊಂದನ್ನು ಆಯೋಗಕ್ಕೆ ಕಳುಹಿಸಿಕೊಡುವಂತೆ ಕೋರಿದ್ದಾರೆ.
Spread the love