ಮೀನುಗಾರರಿಗೆ ಡೆಲಿವರಿ ಪಾಯಿಂಟ್ ನಲ್ಲಿ ಡೀಸೆಲ್ ಕಲ್ಪಿಸಲು ಪ್ರಯತ್ನ- ಮೀನುಗಾರಿಕೆ ಸಚಿವ ನಾಡಗೌಡ

Spread the love

ಮೀನುಗಾರರಿಗೆ ಡೆಲಿವರಿ ಪಾಯಿಂಟ್ ನಲ್ಲಿ ಡೀಸೆಲ್ ಕಲ್ಪಿಸಲು ಪ್ರಯತ್ನ- ಮೀನುಗಾರಿಕೆ ಸಚಿವ ನಾಡಗೌಡ

ಉಡುಪಿ: ಯಾಂತ್ರಿಕ ಮೀನುಗಾರಿಕೆ ದೋಣಿಗಳಿಗೆ ಈ ಹಿಂದೆ ಡೆಲಿವರಿ ಪಾಯಿಂಟ್‍ನಲ್ಲಿ ನೀಡುತ್ತಿದ್ದ ಮಾರಾಟ ತೆರಿಗೆ ರಹಿತ ಡಿಸೆಲ್‍ನ್ನು ಈಗ ಯಾವ ಕಾರಣಕ್ಕೆ ಬದಲಾವಣೆಗೊಳಿಸಲಾಗಿದೆ ಎಂಬುವುದರ ಬಗ್ಗೆ ಇಲಾಖೆಯ ಕಾರ್ಯದರ್ಶಿಗಳ ಜತೆಯಲ್ಲಿ ಚರ್ಚಿಸಿ, ಅವಶ್ಯ ಬಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ,ಹಿಂದಿನಂತೆ ಡೆಲಿವರಿ ಪಾಯಿಂಟ್ ನಲ್ಲಿಯೇ ತೆರಿಗೆ ರಹಿತ ಡೀಸೆಲ್ ಕಲ್ಪಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಬುಧವಾರ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಬಳಿಕ ಮೀನುಗಾರರ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.

ಮಲ್ಪೆ ಬಾಪುತೋಟದ ಬಳಿಇರುವ ಸ್ಲೀಪ್‍ವೇ ನಿರ್ವಹಣೆ ಮಾಡುವ ಬಗ್ಗೆ ಕಡತಗಳನ್ನು ಪರಿಶೀಲನೆ ಮಾಡಿ , ಮೀನುಗಾರ ಸಂಘಕ್ಕೆ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಎಂದರು.

ಬಡ ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತವಾಗಿ 50ಸಾವಿರ ರೂವರೆಗೆ ಸಾಲವನ್ನು ನೀಡುವ ತೀರ್ಮಾನವನ್ನು ಕೈಗೊಳ್ಳಲಾಗುತ್ತಿದೆ. ಅದನ್ನು ಗುಂಪಿಗೆ ಅಥವಾ ವ್ಯಯಕ್ತಿಕವಾಗಿ ಕೊಡುವ ಬಗ್ಗೆ ತಮ್ಮ ಸಲಹೆ ಮೇರೆಗೆ ನಿರ್ಧರಿಸಲಾಗುತ್ತದೆ ಕುಮಾರಸ್ವಾಮಿ ಅವರ ಸರಕಾರ ಬಡವರ, ಮೀನುಗಾರರ ಪರವಾಗಿದ್ದು ಮೀನುಗಾರರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಒಮ್ಮೆಲೆ ಸೀಮೆಎಣ್ಣೆಯ ಸಮಸ್ಯೆ ಎದುರಾದರೆ ಮೀನುಗಾರರಿಕೆ ಸಮಸ್ಯೆ ಉಂಟಾಗಬಾರದು ಎಂಬ ನೆಲೆಯಲ್ಲಿ ಬದಲಿ ವ್ಯವಸ್ಥೆಯಾಗಿ ಎಲೆಕ್ಟ್ರಿಕ್ ದೋಣಿಗಳನ್ನು ಪ್ರಯೋಗಿಕವಾಗಿ ಸಿದ್ದಪಡಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಮುಂದೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಆಲ್ಲಿಯವರೆಗೆ ಮೀನುಗಾರರಿಗೆ ಸೀಮೆಎಣ್ಣೆಯ ಸಮಸ್ಯೆ ಆಗದು ಎಂದರು.

ಶಾಸಕ ಕೆ. ರಘುಪತಿ ಭಟ್ ಆವರು , ಮೀನುಗಾರರಿಗೆ ಈಡುವ ಡೀಸೆಲ್ ಪ್ರಮಾಣವನ್ನು ವಾರ್ಷಿಕ 1.5 ಲಕ್ಷ ಕಿಲೋ ಲೋಟರ್ ನಿಂದ 2 ಲಕ್ಷ ಕಿಲೋ ಲೋಟರ್ ಗೆ ಏರಿಸುವ ಕುರಿತಂತೆ, ಸಾಲ ಮನ್ನಾ ಯೋಜನೆಯನ್ನು ಮೀನುಗಾರರಿಗೂ ನೀಡುವಂತೆ , ಮೀನುಗಾರರ ಮಹಿಳೆಯರಿಗೆ ನೀಡುವ ಸಾಲವನ್ನು 1 ಲಕ್ಷದ ವರೆಗೆ ಬಡ್ಡಿ ರಹಿತವಾಗಿ ನೀಡುವ ಕುರಿತಂತೆ, ಒಣ ಮೀನು ಮಾರಾಟಗಾರರಿಗೆ ಜಾಗ ಒದಗಿಸುವುದು ಸೇರಿದಂತೆ ಮೀನುಗಾರರ ವಿವಿಧ ಸಮಸ್ಯೆ, ಬೇಡಿಕೆಗಳ ಕುರಿತು ಸಚಿವರಿಗೆ ವಿವರಿಸಿದರು.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ವಿವಿಧ ಮೀನುಗಾರಿಕಾ ಸಂಘಟನೆಗಳ ಪದಾಧಿಕಾರಿಗಳು, ಮೀನುಗಾರಿಕಾ ನಿರ್ದೇಶಕ ಹೆಚ್. ಎಸ್. ವೀರಪ್ಪ ಗೌಡ, ಜಂಟಿ ನಿರ್ದೇಶಕ ದೊಡ್ಡಮನಿ, ಉಪ ನಿರ್ದೇಶಕ ಪಾಶ್ರ್ವನಾಥ್ ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ ಮತ್ತಿತರರು ಉಪಸ್ಥಿತರಿದ್ದರು.


Spread the love