Home Mangalorean News Kannada News ಮೀನುಗಾರ ಸಮುದಾಯ ಮಹಾಲಕ್ಷ್ಮೀ ಕೋ. ಅಪ್ ಬ್ಯಾಂಕ್ ಬೆಂಬಲಿಸಬೇಕು – ನಾಡೋಜ ಜಿ ಶಂಕರ್

ಮೀನುಗಾರ ಸಮುದಾಯ ಮಹಾಲಕ್ಷ್ಮೀ ಕೋ. ಅಪ್ ಬ್ಯಾಂಕ್ ಬೆಂಬಲಿಸಬೇಕು – ನಾಡೋಜ ಜಿ ಶಂಕರ್

Spread the love

ಮೀನುಗಾರ ಸಮುದಾಯ ಮಹಾಲಕ್ಷ್ಮೀ ಕೋ. ಅಪ್ ಬ್ಯಾಂಕ್ ಬೆಂಬಲಿಸಬೇಕು – ನಾಡೋಜ ಜಿ ಶಂಕರ್

ಉಡುಪಿ: ಕಳೆದ 42 ವರ್ಷಗಳಿಂದ ಸಹಕಾರಿ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಜನಸ್ನೇಹಿ ಸಹಕಾರಿ ಸಂಸ್ಥೆಯಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಹಕ ವ್ಯವಹಾರ ನಡೆಸುತ್ತಿರುವ ಮಹಾಲಕ್ಷ್ಮೀ ಕೊ ಅಪರೇಟಿವ್ ಬ್ಯಾಂಕಿನ ಮಲ್ಪೆ ನವೀಕೃತ (ಹವಾನಿಯಂತ್ರಿತ) ಶಾಖೆ ಉದ್ಘಾಟನೆ ಸಮಾರಂಭ ಜೂನ್ 22 ರಂದು ಶನಿವಾರ ಮಲ್ಪೆ ಏಳೂರು ಮೊಗವೀರ ಸಭಾಭವನದಲ್ಲಿ ನಡೆಯಿತು.

ಮಲ್ಪೆ ನವೀಕೃತ (ಹವಾನಿಯಂತ್ರಿತ) ಶಾಖೆ ಉದ್ಘಾಟನೆಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜ ಡಾ|ಜಿ.ಶಂಕರ್ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಡೋಜ ಡಾ|ಜಿ.ಶಂಕರ್ ಕಳೆದ 42 ವರ್ಷಗಳಲ್ಲಿ ಮಹಾಲಕ್ಷ್ಮೀ ಕ್ರೇಡಿಟ್ ಕೋ-ಅಪರೇಟಿವ್ ಬ್ಯಾಂಕ್ ಹಲವು ಏಳುಬೀಳುಗಳನ್ನು ಕಂಡಿದ್ದು ಇಂದು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತದೆ. ಇದಕ್ಕೆ ಪ್ರಮುಖ ಕಾರಣ ಬ್ಯಾಂಕಿನ ಚುಕ್ಕಾಣಿ ಹಿಡಿದ ಅಧ್ಯಕ್ಷರು ಮತ್ತು ನಿರ್ದೇಶಕರ ಪ್ರಯತ್ನದ ಫಲ. ಮೀನುಗಾರರ ಸಮುದಾಯಕ್ಕಾಗಿ ಹುಟ್ಟಿಕೊಂಡ ಈ ಬ್ಯಾಂಕನ್ನು ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಬೇರೆ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸ್ಪರ್ಧೆ ನೀಡುವಂತಾಬೇಕಾದರೆ ಅದಕ್ಕೆ ತಕ್ಕುದಾಗಿ ಬ್ಯಾಂಕಿನ ಸಿಬಂದಿಗಳು ಕೂಡ ಶ್ರಮ ವಹಿಸಬೇಕಾಗುತ್ತದೆ. ಅದರೊಂದಿಗೆ ಮೀನುಗಾರ ಸಮುದಾಯವರು ಕೂಡ ಈ ಬ್ಯಾಂಕನ್ನು ಪ್ರೋತ್ಸಹ ನೀಡಲು ಬದ್ಧರಾಗೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಶಾಸಕ ರಘುಪತಿ ಭಟ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಹಕಾರಿ ರಂಗದಲ್ಲಿ ಸಾಧನೆ ಮಾಡಿದ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ|ಎಂ.ಎನ್. ರಾಜೇಂದ್ರ ಕುಮಾರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಬ್ಯಾಂಕಿನ ಒಳಾಂಗಣ ವಿನ್ಯಾಸ ಮಾಡಿದ ಎಂಜಿನಿಯರ್ ಗಳನ್ನು ಸನ್ಮಾನಿಸಲಾಯಿತು.

ಮೀನುಗಾರ ಮಹಿಳಾ ಸ್ವ ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ರೂ 1.5 ಕೋಟಿ ಸಾಲ ವಿತರಣೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಯಶಪಾಲ್ ಸುವರ್ಣ ಅವರು ಕರಾವಳಿ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಬ್ಯಾಂಕ್ ಕಳೆದ 9 ವರ್ಷದಿಂದ ನಿರಂತರವಾಗಿ ಸದಸ್ಯರಿಗೆ ಶೇ.18 ಡಿವಿಡೆಂಟ್ ನೀಡುತ್ತಿರುವ ಕರಾವಳಿಯ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆ, ಗಂಗೊಳ್ಳಿ, ಮಂಗಳೂರು, ಹೆಜಮಾಡಿ, ಸುರತ್ಕಲ್, ಪಡು ಉಚ್ಚಿಲ, ಉಡುಪಿ ಹಾಗೂ ಕುಂದಾಪುರ ಸಹಿತ ಒಟ್ಟು 8 ಶಾಖೆಗಳನ್ನು ಹೊಂದಿದ್ದು, ಈಗಾಗಲೇ ನಮ್ಮ 3 ಶಾಖೆಗಳಾದ ಮಲ್ಪೆ, ಮಂಗಳೂರು, ಕುಂದಾಪುರ ಮತ್ತು ಆಡಳಿತ ಕಚೇರಿ ಸ್ವಂತ ಕಟ್ಟಡದಲ್ಲಿ ವ್ಯವಹರಿಸುತ್ತಿದೆ.

2018-19 ನೇ ಸಾಲಿಗೆ ಬ್ಯಾಂಕಿನಲ್ಲಿ 20664 ಸದಸ್ಯರಿದ್ದು, ಪಾಲು ಬಂಡವಾಳ 6.45 ಕೋಟಿ ರೂ ದುಡಿಯುವ ಬಂಡವಾಳ 149.08 ಕೋಟಿ ರೂ ಠೇವಣಿ 120.04 ಕೋಟಿ ರೂ, ಮುಂಗಡ 89.32 ಕೋಟಿ ರೂ ಐಆಗಿದ್ದು ಬ್ಯಾಂಕ್ ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿಯಲ್ಲಿದೆ. ಸಹಕಾರ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನವರ ಮೆಚ್ಚುಗೆಗೆ ಪಾತ್ರವಾಗಿದೆ.

ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಮಲ್ಪೆ ಶಾಖೆ ಆಧುನಿಕ ಶೈಲಿಯಲ್ಲಿ (ಹವಾನಿಯಂತ್ರಿತ)ನವೀಕರಣಗೊಂಡಿದ್ದು, ಮುಂದೆ ಸುರತ್ಕಲ್ ಶಾಖೆ ಕೂಡ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಮಲ್ಪೆ ಶಾಖೆಯಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6ರವರೆಗೆ ವ್ಯವಹಾರದ ಸಮಯ ವಿಸ್ತರಿಸಲಾಗಿದೆ. ಬ್ಯಾಂಕಿಂಗ್ ಸೇವೆಗಳಿಗೆ ಅತಿ ಅವಶ್ಯಕವೆನಿಸಿರುವ ಆರ್ ಟಿ ಜಿಎಸ್/ನೆಫ್ಟ್, ಇಬಿಎಕ್ಸ್ ಕ್ಯಾಶ್, ಇ-ಸ್ಟ್ಯಾಂಪಿಂಗ್, ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯ ಹೊಂದಿದೆ. ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಇನ್ನಿತರ ಆಧುನಿಕ ಸೇವೆ ಒದಗಿಸುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಂಗಳೂರಿನಲ್ಲಿಯೂ ಶಾಖೆ ಆರಂಬಿಸುವ ಮೂಲಕ ವ್ಯವಹಾರ ವಿಸ್ತರಿಸುವ ಯೋಜನೆ ಕೂಡ ಆಡಳಿತ ಮಂಡಳಿ ಮುಂದಿದೆ.

ಮೀನುಗಾರ ಮಹಿಳಾ ಸ್ವ ಸಹಾಯ ಸಂಘಗಳಿಗೆ 5 ಲಕ್ಷ ರೂ ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣೆ, ನವೀಕೃತ ಮಲ್ಪೆ ಶಾಖೆ ಉದ್ಘಾಟನೆ ಅಂಗವಾಗಿ ಜೂ 30ರವರೆಗೆ ಠೇವಣಿಗಳ ಮೇಳೆ ಶೇ. 0 0.25 ಹಚ್ಚುವರಿ ಬಡ್ಡಿಯನ್ನು ನೀಡುವ ಯೋಜನೆ ಹಮ್ಮಿಕೊಂಡಿದೆ. ಮತ್ತು ಗ್ರಾಹಕರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯ ಕಡಿಮೆ ಬಡ್ಡಿದರದಲ್ಲಿ ಲಭ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ|ಎಂ.ಎನ್. ರಾಜೇಂದ್ರ ಕುಮಾರ್, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಬಿಲ್ಲವ ಸಂಘ ಮಲ್ಪೆ ಅಧ್ಯಕ್ಷರಾದ ದಿನೇಶ್ ಜಿ ಸುವರ್ಣ, ಗೀತಾನಂಡ ಫೌಂಡೇಷನ್ ಕೋಟ ಪ್ರವರ್ತಕರಾದ ಆನಂದ ಸಿ ಕುರಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಸತೀಶ್ ಕುಂದರ್, ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ ನಾಯಕ್, ಉದ್ಯಮಿ ಹಾಗೂ ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಗುರ್ಮೆ, ಉಜ್ವಲ್ ಕನ್ಷ್ಟ್ರಕ್ಷನ್ ಇದರ ಆಡಳಿತ ನಿರ್ದೇಶಕರಾದ ಪುರುಷೋತ್ತಮ್ ಶೆಟ್ಟಿ, ಕಿದಿಯೂರು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಮಲ್ಪೆ ಮೀನು ವ್ಯಾಪಾರಸ್ಥರ ಸಂಘ ಇದರ ಅಧ್ಯಕ್ಷರಾದ ಸಾಧು ಸಾಲ್ಯಾನ್, ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಹರಿಯಪ್ಪ ಕೋಟ್ಯಾನ್, ಉದ್ಯಮಿ ಆನಂದ ಪಿ ಸುವರ್ಣ, ಮೀನುಗಾರ ಮುಖಂಡರಾದ ಯಶೋಧರ ಅಮೀನ್, ಕಿಶೋರ್ ಡಿ ಸುವರ್ಣ, ಕಿಶೋರ್ ಪಡುಕೆರೆ, ಹರಿಶ್ಚಂದ್ರ ಕಾಂಚನ್, ಎನ್ ಟಿ ಅಮೀನ್, ಬೇಬಿ ಎಚ್ ಸಾಲ್ಯಾನ್, ಜಲಜ ಕೋಟ್ಯಾನ್, ಕೃಷ್ಣಪ್ಪ ಮರಕಾಲ, ಸುಧಾಕರ ಕುಂದರ್, ನಾರಾಯಣ ಕರ್ಕೇರಾ, ಜನಾರ್ದನ ತಿಂಗಳಾಯ, ರತ್ನಾಕರ ಸಾಲ್ಯಾನ್ ಉಪಸ್ಥಿತರಿದ್ದರು.


Spread the love

Exit mobile version