ಮೊಂತಿ ಫೆಸ್ತ್: ಸ್ಥಳೀಯ ಕೃಷಿಕರ ಪ್ರೋತ್ಸಾಹಕ್ಕಾಗಿ ತೊಟ್ಟಂ ಚರ್ಚಿನಲ್ಲಿ ‘ಸಾವಯವ ತರಕಾರಿ ಸಂತೆ’

Spread the love

ಮೊಂತಿ ಫೆಸ್ತ್: ಸ್ಥಳೀಯ ಕೃಷಿಕರ ಪ್ರೋತ್ಸಾಹಕ್ಕಾಗಿ ತೊಟ್ಟಂ ಚರ್ಚಿನಲ್ಲಿ ‘ಸಾವಯವ ತರಕಾರಿ ಸಂತೆ’

ಮಲ್ಪೆ: ಇದು ಹಬ್ಬಗಳ ಪರ್ವ. ಗಣೇಶ ಚತುರ್ಥಿ, ಕ್ರೈಸ್ತರ ಮೊಂತಿ ಫೆಸ್ತ್, ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬಗಳು ಸಾಲು ಸಾಲಾಗಿ ಬಂದಿವೆ. ಗಣೇಶ ಚತುರ್ಥಿ ಹಾಗೂ ಮೊಂತಿಫೆಸ್ತ್ ಹಬ್ಬಕ್ಕೆ ತರಕಾರಿ ಖಾದ್ಯಗಳಿಗೆ ಬೇಡಿಕೆ ಹೆಚ್ಚು. ಈ ನಿಟ್ಟಿನಲ್ಲಿ ಸ್ಥಳೀಯ ಕೃಷಿಕರಿಗೆ ಹೆಚ್ಚಿನ ಸಹಾಯವಾಗಲೆಂಬ ನಿಟ್ಟಿನಲ್ಲಿ ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಮೊಂತಿ ಫೆಸ್ತ್ ಸಂದರ್ಭದಲ್ಲಿ ಕೃಷಿಕರು ತಮ್ಮ ತೋಟದಲ್ಲಿ ತಾವೇ ಬೆಳೆದ ತರಕಾರಿಗಳನ್ನು ನೇರವಾಗಿ ತಂದು ಮಾರಾಟ ಮಾಡುವ ನಿಟ್ಟಿನಲ್ಲಿ ತರಕಾರಿ ಸಂತೆ ಎಂಬ ಹೆಸರಿನಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ಎರಡು ದಿನಗಳ ಮಾರಾಟ ಮೇಳವನ್ನು ಆಯೋಜಿಸಿದೆ.

ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ಹಲವಾರು ರೈತರು ತಮ್ಮ ತೋಟದಲ್ಲಿ ಸಾವಯವ ಗೊಬ್ಬರಗಳನ್ನು ಹಾಕಿ ಬೆಳೆಸಿದೆ ಬೆಂಡೆಕಾಯಿ, ಹೀರೆ, ಹರಿವೆ, ಅಲಸಂಡೆ, ಬಸಳೆ ಹಾಗೂ ಇತರ ತರಕಾರಿಗಳನ್ನು ಕೊಯ್ದು ತಂದು ಮಾರಾಟಕ್ಕೆ ಇಟ್ಟಿದ್ದು ತೊಟ್ಟಂ ಚರ್ಚ್ ವ್ಯಾಪ್ತಿಯಲ್ಲದೆ ಪಕ್ಕದ ಚರ್ಚುಗಳ ಸದಸ್ಯರೂ ಕೂಡ ಶುದ್ದ ಸಾವಯವ ತರಕಾರಿಗಳನ್ನು ಖರೀದಿಸಿದರು. ಇಲ್ಲಿ ಯಾವುದೇ ಮಧ್ಯವರ್ತಿಗಳು, ದಲ್ಲಾಳಿಗಳ ಕಿರಿ ಕಿರಿ ಇಲ್ಲದೆ ನೇರವಾಗಿ ರೈತರು ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ.

ತೊಟ್ಟಂ ದೇವಾಲಯದ ಕಥೊಲಿಕ್ ಸಭಾ ಸಂಘಟನೆ ಈ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದು, ಸ್ಥಳೀಯ ಸರ್ವಧರ್ಮ ಸಮನ್ವಯ ಸಮಿತಿ ಕೂಡ ಕೈ ಜೋಡಿಸಿದೆ. ಇಲ್ಲಿ ನೇರವಾಗಿ ರೈತರಿಂದ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ತರಕಾರಿ ಲಭಿಸುತ್ತಿದ್ದು ಕೇವಲ ನಗದು ವ್ಯವಹಾರಕ್ಕೆ ಅವಕಾಶವಿದ್ದು ಯಾವುದೇ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಅವಕಾಶ ನೀಡಿಲ್ಲ.ಅಲ್ಲದೆ ತರಕಾರಿಗಳನ್ನು ಕೊಂಡಯ್ಯಲು ಬರುವಾಗ ಕಡ್ಡಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ತರಲು ಸೂಚಿಸಲಾಗಿರುವುದು ಮತ್ತೊಂದು ವಿಶೇಷ.

ಗಣೇಶ ಚತುರ್ಥಿ, ಮೊಂತಿ ಫೆಸ್ತ್ ಹಬ್ಬಗಳು ನೇರವಾಗಿ ಪರಿಸರಕ್ಕೆ ಸಂಬಂಧಪಟ್ಟಿದ್ದು, ಸ್ಥಳೀಯ ಕೃಷಿಕರಿಗೆ ಸಹಾಯ ಮಾಡುವುದರೊಂದಿಗೆ, ಸರ್ವ ಧರ್ಮೀಯ ಕೃಷಿಕರನ್ನು ಪೋತ್ಸಾಹಿಸಿ ಸಾವಯವ ಮಾದರಿಯಲ್ಲಿ ರೈತರಿಗೆ ತರಕಾರಿ ಮತ್ತು ಆಹಾರೋತ್ಪನ್ನಗಳನ್ನು ಬೆಳೆಯಲು ನಾವು ಉತ್ತೇಜಿಸುವ ಜೊತೆಗೆ ಗ್ರಾಹಕರಿಗೂ ನೇರವಾಗಿ ರೈತರಿಂದ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂಬ ಕಲ್ಪನೆಯೊಂದಿಗೆ ಈ ತರಕಾರಿ ಸಂತೆ ಸಂಘಟಿಸಲಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಗುಣಮಟ್ಟದ ತರಕಾರಿ ಸಾರ್ವಜನಿಕರಿಗೆ ಇಲ್ಲಿ ಲಭ್ಯವಾಗುತ್ತಿದೆ ಎಂದು ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ ಹೇಳಿದರು.

ಹಲವಾರು ವರ್ಷಗಳಿಂದ ಮನೆಯಲ್ಲಿ ಸಾವಯವ ಗೊಬ್ಬರವನ್ನು ಬಳಸಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆಸುತ್ತಿದ್ದು ಸ್ಥಳೀಯ ಅಂಗಡಿಗಳಿಗೆ ನೀಡುತ್ತಿದ್ದು ಸೂಕ್ತ ದರ ಲಭಿಸುತ್ತಿಲ್ಲ. ದೂರದ ಮಾರುಕಟ್ಟೆಗೆ ಕೊಂಡೊಯ್ಯಲು ವಾಹನ ಬಾಡಿಗೆ ಇನ್ನಿತರ ಖರ್ಚು ಬರುತ್ತಿದ್ದು ಹತ್ತಿರದಲ್ಲೇ ಇಂತಹ ತರಕಾರಿ ಸಂತೆ ಆಯೋಜಿಸಿರುವುದರಿಂದ ನಮ್ಮ ತರಕಾರಿಗೆ ಉತ್ತಮ ದರ ಲಭಿಸಿದೆ ಆಯೋಜಕರಿಗೆ ಧನ್ಯವಾದಗಳು ಎಂದು ಕೃಷಿಕ ಗೋಪಾಲ ಕೆ ಬಡಾನಿಡಿಯೂರು ಹೇಳಿದರು.

ಬಡ ಕುಟುಂಬಗಳಿಗೆ ಹಬ್ಬ ಆಚರಿಸಲು ಸಹಾಯ

ಮೊಂತಿ ಫೆಸ್ತ್ ಅಥವಾ ತೆನೆ ಹಬ್ಬ ಕುಟುಂಬದ ಹಬ್ಬವಾಗಿ ಆಚರಿಸಲ್ಪಡುವುದರಿಂದ ಚರ್ಚಿನ ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಸದಸ್ಯರು ಚರ್ಚ್ ವ್ಯಾಪ್ತಿಯ ಬಡ ಕುಟುಂಬಗಳಿಗೆ ಹಬ್ಬವನ್ನು ಆಚರಿಸಲು ಬೇಕಾದ ವಸ್ತುಗಳನ್ನು ನೀಡಿ ಸಹಕರಿಸಿ ಪ್ರತಿಯೊಬ್ಬರು ತೆನೆ ಹಬ್ಬವನ್ನು ಸಂತೋಷದಿಂದ ಕುಟುಂಬ ಸಮೇತರಾಗಿ ಆಚರಿಸಲು ಸಹಕಾರ ನೀಡಲಿದೆ.


Spread the love
Subscribe
Notify of

0 Comments
Inline Feedbacks
View all comments