ಲೇಡಿಸ್ ಬಾರ್, ಲೈವ್ ಬ್ಯಾಂಡ್ ಅನುಮತಿ ರದ್ದುಗೊಳಿಸಿ; ವಿಎಚ್ ಪಿ, ಬಜರಂಗದಳ ಆಗ್ರಹ

Spread the love

ಲೇಡಿಸ್ ಬಾರ್, ಲೈವ್ ಬ್ಯಾಂಡ್ ಅನುಮತಿ ರದ್ದುಗೊಳಿಸಿ; ವಿಎಚ್ ಪಿ, ಬಜರಂಗದಳ ಆಗ್ರಹ

ಮಂಗಳೂರು : ನಗರದ ಹಲವು ಕಡೆ ಲೈವ್‌ಬ್ಯಾಂಡ್, ಲೇಡಿಸ್ ಬಾರ್, ಪಬ್, ಮಸಾಜ್ ಸೆಂಟರ್‌ಗಳಿಗೆ ಕಡಿವಾಣ ಹಾಕದಿದ್ದರೆ ಈ ಹಿಂದೆ ಪಬ್ ಮೇಲೆ ನಡೆದ ದಾಳಿ ಪ್ರಕ್ರಿಯೆಗಳು ಮರುಕಳಿಸಬಹುದು ಎಂದು ವಿಎಚ್‌ಪಿ ಮಹಿಳಾ ಪ್ರಮುಖ್ ಆಶಾ ಜಗದೀಶ್ ಎಚ್ಚರಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಸಂಗೀತಕ್ಕೆ ವಿರೋಧಿಗಳಲ್ಲ. ಆದರೆ, ಅದರ ಹೆಸರಿನಲ್ಲಿ ಡ್ಯಾನ್ಸ್ ಮತ್ತಿತ್ಯಾದಿಗಳಿಗೆ ವಿರೋಧವಿದೆ. ನಗರದ ಹಲವು ಕಡೆಗಳಲ್ಲಿ ಲೈವ್‌ಬ್ಯಾಂಡ್, ಲೇಡಿಸ್ ಬಾರ್ ಮತ್ತಿತ್ಯಾದಿ ತಲೆ ಎತ್ತುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕು ಎಂದರು.

ಮಂಗಳೂರು ನಗರವು ಸುಸಂಸ್ಕೃತ ನಾಡಗಿದ್ದು ಹಲವು ಶಾಪಿಂಗ್ ಮಾಲ್, ಶ್ರದ್ಧಾ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳಿಂದ ಕೂಡಿದೆ. ಇದೊಂದು ರಾಜ್ಯಕ್ಕೆ ಮಾದರಿಯಾದ ನಗರವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ನಗರದಲ್ಲಿ ಪಬ್ ಗಳು ಮಸಾಜ್ ಸೆಂಟರ್ ಗಳು ಲೈವ್ ಬ್ಯಾಂಡ್, ಲೇಡಿಸ್ ಬಾರ್ ಪ್ರಾರಂಬವಾಗುತ್ತಿದ್ದು, ಇದು ಸಮಾಜದ ಸ್ವಾಸ್ಥ್ಯವನ್ನು ಹಾಳುಗಡಿಸುತ್ತಿದೆ. ಈಗಾಗಲೇ ಲಾಲ್ ಬಾಗ್ ಸಾಯ್ ಬಿನ್ ಕಾಂಪ್ಲೆಕ್ಸ್ ನಲ್ಲಿ ಲೈವ್ ಬ್ಯಾಂಡ್ ಪ್ರಾರಂಭವಾಗಿದ್ದು ಇನ್ನು ನಗರದ ಪಂಪ್ ವೆಲ್ ಮತ್ತು ಹಂಪನಕಟ್ಟೆ ಮುಂತಾದ ಸ್ಥಳಗಳಲ್ಲಿ ಲೈವ್ ಬ್ಯಾಂಡ್ ಲೇಡಿಸ್ ಬಾರ್ ಪ್ರಾರಂಭಿಸಲು ಪ್ರಯತ್ನ ಮಾಡುತ್ತಿರುವುದು ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಇಂತಹ ಬಾರ್ ಗಳಿಂದ ಅನೈತಿಕ ಚಟುವಟಿಕೆಗೆ ದಾರಿ ಮಾಡುತ್ತಿದೆ ಮತ್ತು ಲೈವ್ ಬ್ಯಾಂಡ್ ನಲ್ಲಿ ಯವತಿಯರ ಮುಖಾಂತರ ಸಂಗೀತ ಹಾಡಿಸಿ, ಕುಣಿಸಿ ರಾತ್ರಿ ಹೊತ್ತು ವೇಶ್ಯಾವಾಟಿಕೆ ನಡೆಸುವ ಸಾಧ್ಯತೆ ಇದೆ. ಯುವಕರು ಇವುಗಳ ದಾಸರಾಗಿ ಸಮಾಜದ ಸ್ವಾಸ್ಥ್ಯ ಕೆಡುವ ಸಂಭವವಿದೆ.

ನಗರದ ಲಾಲ್‌ಬಾಗ್, ಹಂಪನಕಟ್ಟೆ, ಪಂಪ್‌ವೆಲ್ ಮತ್ತಿತರ ಕಡೆಗಳಲ್ಲಿ ಲೇಡಿಸ್ ಬಾರ್, ಲೈವ್‌ಬ್ಯಾಂಡ್, ಪಬ್, ಮಸಾಜ್ ಸೆಂಟರ್‌ಗೆ ಅನುಮತಿ ನೀಡಲಾಗಿದೆ. ಇದರಿಂದ ಅದೆಷ್ಟೋ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ. ಇಲ್ಲಿ ವೇಶ್ಯಾವಾಟಿಕೆ ನಡೆಯುವ ಸಾಧ್ಯತೆಯೂ ಇದೆ. ಯುವಕರೂ ಹಾದಿ ತಪ್ಪುವ ಅಪಾಯವೂ ಇದೆ. ಹಾಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಇದರ ಅನುಮತಿಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳು, ದೈವಗಳು, ಮಠಮಂದಿರ, ದೇವಸ್ಥಾನಗಳ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಮತ್ತು ಚಿತ್ರಗಳನ್ನು ಹರಿದು ಬಿಡುತ್ತಿರುವುದು ಖಂಡನೀಯ. ಸಂಬಂಧಪಟ್ಟ ಇಲಾಖೆಯು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.


Spread the love