ವಿಧಾನ ಸಭೆಯಲ್ಲಿ ಕರಾವಳಿಯ ಮರ್ಯಾದೆ ಹರಾಜು ಮಾಡಿದ ಶಾಸಕರುಗಳು – ಕೆ ವಿಕಾಸ್ ಹೆಗ್ಡೆ
ಕುಂದಾಪುರ: ಅಧ್ಯಕ್ಷರ ಪೀಠಕ್ಕೆ ಅಗೌರವ ತೋರಿ ವಿಧಾನ ಸಭೆಯ ಅಧಿವೇಶನ ಪ್ರವೇಶಕ್ಕೆ ಆರು ತಿಂಗಳುಗಳ ಕಾಲ ಅಮಾನತುಗೊಂಡ ಕರಾವಳಿಯ ಮೂವರು ಶಾಸಕರು ಮರ್ಯಾದೆ ಹರಾಜು ಹಾಕಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನ ಸಭೆಯಲ್ಲಿ ಕರಾವಳಿಯ ಶಾಸಕರುಗಳಿಗೆ ವಿಶೇಷವಾದ ಗೌರವವಿದೆ. ಅತ್ಯಂತ ಮೇಧಾವಿಗಳನ್ನು, ಸದನ ಶೂರರನ್ನು, ನೈತಿಕತೆ, ಸಿದ್ದಾಂತಕ್ಕೆ ಬದ್ಧರಾದ ಜನಪ್ರತಿನಿದಿನಗಳನ್ನು ನೀಡಿದ ಪುಣ್ಯ ಭೂಮಿ ನಮ್ಮ ಕರಾವಳಿ. ಇಂತಾ ಹೆಮ್ಮೆಯ ನಾಡಿನಿಂದ ಶಾಸನ ಸಭೆಗೆ ಆಯ್ಕೆಗೊಂಡು ಶಾಸನ ಸಭೆಯ ಅತ್ಯಂತ ಗೌರವಾನ್ವಿತ ಪೀಠವಾದ ಅಧ್ಯಕ್ಷರ ಪೀಠಕ್ಕೆ ಅಗೌರವ ತೋರಿ ವಿಧಾನ ಸಭೆಯ ಅಧಿವೇಶನ ಪ್ರವೇಶಕ್ಕೆ ಆರು ತಿಂಗಳುಗಳ ಕಾಲ ಅಮಾನತುಗೊಂಡ ಕರಾವಳಿಯ ಶಾಸಕರುಗಳಾದ ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ ಹಾಗೂ ಯಶ್ಪಾಲ್ ಸುವರ್ಣ ವರ್ತನೆಯು ಸುಶಿಕ್ಷಿತರ ನಾಡಾದ ಕರಾವಳಿ ಜನರಿಗೆ ಮಾಡಿದ ಅವಮಾನವಾಗಿದೆ.
ಶಾಸನ ಸಭೆಯ ಘನತೆ ಏತ್ತಿ ಹಿಡಿಯ ಬೇಕಾದ ಸದಸ್ಯರುಗಳು ಅಧ್ಯಕ್ಷರ ಪೀಠಕ್ಕೆ ತೆರಳಿ ಅಧ್ಯಕ್ಷರ ಮೇಲೆ ಕಾಗದವನ್ನು ಹರಿದು ಎಸೆದದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರವಾಗಿದೆ. ವಿಧಾನ ಮಂಡಲದ ಅಧಿವೇಶನದ ಆಳ ಅಗಲ ತಿಳಿಯದ ಜನಪ್ರತಿನಿದಿನಗಳು ಮಾತ್ರ ಇಂತಹ ದುರ್ವತನೆ ಮಾಡಲು ಸಾಧ್ಯ. ಶಾಸನ ಸಭೆ ಎನ್ನುವುದು ಒಂದು ದೇವಸ್ಥಾನ ದಷ್ಟೇ ಪಾವಿತ್ರ್ಯತೆ ಇರುವ ಸ್ಥಳ ಅದರಲ್ಲೂ ಅಧ್ಯಕ್ಷರು ಪೀಠ ಗರ್ಭಗುಡಿಗೆ ಸಮಾನ, ಇಷ್ಟೊಂದು ಪಾವಿತ್ರ್ಯ ಸ್ಥಳಕ್ಕೆ ಗೌರವ ಕೊಡದ ಶಾಸಕರುಗಳು ಧರ್ಮ, ಆಚಾರ, ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಯಾವುದೇ ನೈತಿಕತೆ ಹೊಂದಿಲ್ಲಾ. ವಿಧಾನ ಸಭೆಯನ್ನು ಸಾರ್ವಜನಿಕ ಸ್ಥಳದಂತೆ ನಡೆಸಿಕೊಂಡ ಶಾಸಕರುಗಳು ವಿಧಾನ ಸಭೆ ಪ್ರವೇಶಿಸುವ ನೈತಿಕತೆಯನ್ನು ಕಳೆದುಕೊಂಡಿದ್ದು ಇವರುಗಳು ಇವರನ್ನು ಆಯ್ಕೆ ಮಾಡಿದ ಜನರಿಗೆ ಮಾಡಿದ ದ್ರೋಹವಾಗಿದೆ. ಅದಕ್ಕಾಗಿ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.