ಶಿವಾಜಿ ಸಾಧನೆ ಅಪಾರ – ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 398 ನೇ ಜಯಂತಿ ಆಚರಣೆ ಬುಧವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್ ಮಾತನಾಡಿ, ಶಿವಾಜಿ ಮಹಾರಾಜರು ವಿಶೇಷವಾಗಿ ದೇವರ ಸ್ಥಾನ ಪಡೆದುಕೊಂಡಿದ್ದ ಮಹಾನ್ ಶಕ್ತಿ. ಇತಿಹಾಸದಲ್ಲಿ ಸುದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುವಂತಹ ಸಾಧನೆ ಮಾಡಿದ ವ್ಯಕ್ತಿಗಳಲ್ಲಿ ಶಿವಾಜಿ ಮಹಾರಾಜರೂ ಕೂಡ ಒಬ್ಬರು. ಶಿವಾಜಿಯ ಹಾಗೆ ಪ್ರತಿಯೊಬ್ಬರೂ ಕೂಡ ಬಲಿಷ್ಠರಾಗಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ನಗರದಲ್ಲಿ ಶಿವಾಜಿ ಮಹಾರಾಜರ ಭವ್ಯವಾದ ಎತ್ತರದ ಪ್ರತಿಮೆಯನ್ನು ಸ್ಥಾಪಿಸಿಕೊಡುತ್ತೇನೆ ಎಂಬ ಆಶ್ವಾಸನೆಯನ್ನು ನೀಡಿದರು.
ಮೇಯರ್ ಮನೋಜ್ ಕುಮಾರ್ ಮಾತನಾಡಿ, ಮರಾಠ ಸಮಾಜಕ್ಕೆ ಶಿವಾಜಿಯ ಕೊಡುಗೆ ಅಪಾರ. ಇಂತಹ ರಾಷ್ಟ್ರಪ್ರೇಮ, ಧರ್ಮಾಭಿಮಾನ, ಪರಾಕ್ರಮ ಸಾಧನೆಗೈದ ಶಿವಾಜಿ ಮಹಾರಾಜರ ನೆನಪಿಗಾಗಿ ಪ್ರತಿಮೆ ಅಥವಾ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವ ಕೆಲಸ ಪಾಲಿಕೆ ವತಿಯಿಂದ ಆಗಲಿದೆ ಎಂಬ ಭರವಸೆಯನ್ನು ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ ಪತ್ರಕರ್ತ ಲಕ್ಷ್ಮೀ ಮಚ್ಚಿನ ಮಾತನಾಡಿ, ಶಿವಾಜಿ ಮಹಾರಾಜರು ತಮ್ಮ ಎಲ್ಲಾ ಸಾಹಸ ಕಾರ್ಯಗಳನ್ನು 53 ವರ್ಷಗಳ ಜೀವಿತಾವಧಿಯಲ್ಲಿ ನಡೆಸಿ ಇವತ್ತಿಗೂ ಕೂಡ ಮಾದರಿಯಾದ ವ್ಯಕ್ತಿಯಾಗಿದ್ದಾರೆ. ತಂದೆಯ ಪ್ರೀತಿಯಿಂದ ವಂಚಿತರಾದ ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿಯಿಂದ ಸಿಕ್ಕಿದಂತಹ ರಾಮಾಯಣ ಮತ್ತು ಮಹಾಭಾರತದ ಕಥೆಗಳ ಸಂಸ್ಕಾರ ಅವರಲ್ಲಿ ಒಂದು ಶಕ್ತಿ ಸಾಮಥ್ರ್ಯವನ್ನು ಮೂಡಿಸಿತು. ದಾದಾಜಿಕೊಂಡ ದೇವ ರಾಜನೀತಿ ಯುದ್ಧ ಕೌಶಲ್ಯ ಮತ್ತು ಆಡಳಿತದ ಜಾಣ್ಮೆಯನ್ನು ಕಲಿಸಿದರು. ರಾಮದಾಸರು ರಾಷ್ಟ್ರಭಕ್ತಿ ಧರ್ಮಭಕ್ತಿ ಮೂಡಿಸಿದರು ಎಂದರು.
ಶಿವಾಜಿಯವರು ತನ್ನ ಧರ್ಮವನ್ನು ಪ್ರೀತಿಸಿ ಇತರ ಧರ್ಮವನ್ನು ಕೂಡ ಗೌರವಿಸಿದರು. ಸಣ್ಣ ವಯಸ್ಸಿನಲ್ಲಿ ಅವರಿಗೆ ಸಿಕ್ಕಿದಂತಹ ಸಂಸ್ಕಾರಗಳು ಅವರನ್ನು ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿತು. ಶಿವಾಜಿ ಹಿಂದೂ ಸಾಮ್ರಾಜ್ಯ ಕಟ್ಟಿದ ಬಲಿಷ್ಠ ನಾಯಕತ್ವದ ಸೇವಾ ಭಾವನೆಯ ಸಂಕೇತವಾಗಿದ್ದಾರೆ. ಶಿವಾಜಿಯ ಸಾಧನೆಗಳು ಇಂದಿಗೂ ನಮ್ಮನ್ನು ಪ್ರೇರೇಪಿಸುವ ದಾರಿ ದೀಪಗಳಾಗಿ ಉಳಿದಿವೆ. ಅವರ ಸದಾಚಾರಗಳನ್ನು ಪಾಲಿಸಬೇಕು. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಶಿವಾಜಿಯವರ ನೆನಪಿನಲ್ಲಿ ಮತ್ತಷ್ಟು ಕಾರ್ಯಗಳು ಆಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಾಟಕಕಾರ ವಿಜಯ್ ಕುಮಾರ್ ಕೊಡಿಯಾಲ್ಬೈಲ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್ ರಾವ್, ಗಿರೀಶ್ ರಾವ್ ಬೋಂಸ್ಲೆ, ಸವಿತಾ ನಾಗೇಶ್ ಪಾಟೀಲ್, ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ, ನಿಖಿಲ್ ಜಾದವ್ ಮತ್ತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ವಾರುಣಿ ನಾಗರಾಜ್ ನಿರೂಪಿಸಿದರು.