ಸರಳೆಬೆಟ್ಟು ವಸತಿ ಸಮುಚ್ಚಯ ಫಲಾನುಭವಿಗಳಿಗೆ ಹಸ್ತಾಂತರಕ್ಕೆ ಸಿದ್ಧ : ಯಶ್ಪಾಲ್ ಸುವರ್ಣ

Spread the love

ಸರಳೆಬೆಟ್ಟು ವಸತಿ ಸಮುಚ್ಚಯ ಫಲಾನುಭವಿಗಳಿಗೆ ಹಸ್ತಾಂತರಕ್ಕೆ ಸಿದ್ಧ : ಯಶ್ಪಾಲ್ ಸುವರ್ಣ

ಉಡುಪಿ: ನಗರಸಭೆ ವತಿಯಿಂದ ಹೆರ್ಗ ಗ್ರಾಮದ ಸರಳಬೆಟ್ಟುವಿನಲ್ಲಿ ನಿರ್ಮಾಣಗೊಂಡ ವಸತಿ ಸಮುಚ್ಚಯದ ಕಾಮಗಾರಿ ಸಂಪೂರ್ಣಗೊಂಡು ಇದೀಗ ಫಲಾನುಭವಿಗಳಿಗೆ ಹಸ್ತಾಂತರಿಸಲು ಸಿದ್ಧವಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಉಡುಪಿ ನಗರ ಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ನಗರ ಸಭೆ ಅಧಿಕಾರಿಗಳು ಹಾಗೂ ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು, ಗುತ್ತಿಗೆದಾರ ಕಂಪೆನಿ ಪ್ರತಿನಿಧಿಗಳು ಹಾಗೂ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರವಾಗಿ ಮನೆ ಹಸ್ತಾಂತರಕ್ಕೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ನಗರಸಭೆ ಹಾಗೂ ಕೊಳಗೇರಿ ಅಭಿವೃದ್ದಿ ಮಂಡಳಿ ಜಂಟಿಯಾಗಿ ನಿರ್ಮಿಸಿದ ಈ ಯೋಜನೆಯಲ್ಲಿ 240 ಮಂದಿ ಫಲಾನುಭವಿಗಳಿಗೆ ಮನೆ ಮಂಜೂರುಗೊಂಡಿದ್ದು ಈಗಾಗಲೇ ಹಲವು ಮಂದಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

29 ಮಂದಿ ಫಲಾನುಭವಿಗಳು ಪೂರಕ ದಾಖಲೆಗಳ ಸಮಸ್ಯೆಯಿಂದ ಬ್ಯಾಂಕ್ ಲೋನ್ ಪ್ರಕ್ರಿಯೆ ಬಾಕಿ ಇದ್ದು, ಈ ಬಗ್ಗೆ ವಿಶೇಷ ಮುತುವರ್ಜಿವಹಿಸಿ ಸಾಲ ಮಂಜೂರಾತಿಗೆ ಸಹಕರಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದರು.

ಸಭೆಯಲ್ಲಿ ಪೌರಾಯುಕ್ತ ಶ್ರೀ ರಾಯಪ್ಪ, ನಗರ ಸಭೆಯ ಸದಸ್ಯರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love